ಶ್ರೀ ಗಣೇಶ ಪುರಾಣಂ – ಸಂಪುಟ ೮
ಆರಂಭಿಕ ಪುಟ
ಅನುವಾದಕರು: ಶ್ರೀ ಹಾನಗಲ್ ಯಜ್ಞೇಶ್ವರ ಶಾಸ್ತ್ರಿ
ವಿಷಯಾನುಕ್ರಮಣಿಕೆ
೧೩೩ನೆಯ ಅಧ್ಯಾಯ
ವರೇಣ್ಯ ಮಹಾರಾಜನ ಅರಮನೆಯಲ್ಲಿ ಬಗವಾನ್ ಶ್ರೀ ಗಜವದನನು ಅವತರಿಸಿದನೆಂದು ಹೇಳಿದೆಯಲ್ಲವೇ? ಅಲ್ಲಿ ಜನಿಸಿದ ಶಿಶುರೂಪೀ ದೇವನು ಯಾವ ಯಾವ ಅದ್ಭುತ ಲೀಲೆಗಳನ್ನು ತೋರಿಸಿದನು ಎಂಬುದನ್ನು ವಿವರವಾಗಿ ತಿಳಿಸಬೇಕೆಂದು ವ್ಯಾಸರು ಕಮಲಸಂಭವನನ್ನು ಕುರಿತು ಪ್ರಶ್ನಿಸಿದುದು. ವ್ಯಸರ ಉತ್ಸಾಹಪೂರ್ಣವಾದ ಪ್ರಶ್ನೆಗೆ ಹುರುಪುಗೊಂಡ ಹಿರಣ್ಯಗರ್ಭನು ದೇವನ ಚರಿತ್ರೆಯು ಮಹಾ ಮಹಿಮೆಯುಳ್ಳದ್ದೆಂದೂ, ಸಕಲ ದುರಿತೋಪಕ್ಷಯಕಾರಕವೆಂದೂ ವರ್ಣಿಸಿ, ಮುಂದಿನ ಚರಿತ್ರೆಯನ್ನು ಹೇಳಲುಪಕ್ರಮಿಸಿದುದು. ರಾಜಪತ್ನಿ; ಪುಷ್ಪಿಕೆಯು ಬೆಳಗಾದ ಕೂಡಲೇ ಎದ್ದು ಮಗ್ಗುಲಲ್ಲಿದ್ದ ಶಿಶುವನ್ನು ನೋಡುವಷ್ಟರಲ್ಲಿ ಚತುರ್ಬಾಹು, ಗಜವಕ್ತ್ರ, ರಕ್ತವರ್ಣ, ಅನೇಕಾಭರಣ ಸಂಯುಕ್ತನಾಗಿರುವ ಗಜವದನನು ಸಂದರ್ಶನವನ್ನಿತ್ತುದು. ಭೀರು ಸ್ವಭಾವದ ಪುಷ್ಪಿಕೆಯು ಆ ಅದ್ಭುತ ರೂಪವನ್ನು ನೋಡಿ ಚಿಟ್ಟನೆ ಚೀರಿ ಎದೆ ಬಡಿದುಕೊಳ್ಳುತ್ತ ಸೂತಿಕಾಗೃಹದಿಂದ ಈಚೆಗೆ ಓಡಿಬರಲು, ದಾದಿಯರು ವಿಷಯವನ್ನು ವಿಚಾರಿಸಿ ತಿಳಿದು ಮಹಾರಾಜನಿಗೆ ಅರುಹಿದುದು. ಪರಿವಾರ ಸಹಿತನಾಗಿ ಅಂತಃಪುರಕ್ಕೆ ಬಂದ ರಾಜನಿಗೆ ಸಂಗಡಿಗ ಕೆಲವು ವೃದ್ಧರು “ಸ್ವಾಭಾವಿಕವಾಗಿ ಶಿಶುಗಳು ಹೀಗಿರುವುದಿಲ್ಲವೆಂದೂ, ಈ ಭಯಂಕರ ರೂಪವನ್ನು ವ್ಯಾಮೋಹದಿಂದ ಇರಿಸಿಕೊಂಡರೆ ಹಾನಿ ತಟ್ಟುವುದೆಂದೂ” ಭಯಪಡಿಸಿ “ಕೂಡಲೇ ಇದನ್ನು ತ್ಯಜಿಸಬೇಕು” ಎಂದು ಒತ್ತಾಯಪಡಿಸಿದುದು. ಅದರಂತೆ ರಾಜನು ದೂತರ ಮೂಲಕ ಶುಶುವನ್ನು ಅರಣ್ಯಕ್ಕೆ ಕಳಿಸಿದುದು. ಅರಣ್ಯದಲ್ಲಿದ್ದ ಶಿಶುವನ್ನು ಭಕ್ಷಿಸಲು ಜಂಭೂಕಗಳು ಬಂದು ಸಮೀಪಿಸುವಷ್ಟರಲ್ಲಿ ಪರಾಶರ ಮಹರ್ಷಿಗಳು ಅಲ್ಲಿಗೆ ಬಂದು ಶಿಶುವನ್ನು ನೋಡಿದುದು. ಶಿಶುವಿನ ದಿವ್ಯ ರೂಪದ ವರ್ಣನೆ. ಆ ಅದ್ಭುತ ರೂಪದ ಶಿಶುವನ್ನು ಕಂಡ ಮುನಿಗಳು ತಮ್ಮ ತಪಸ್ಸಿಗೆ ವಿಘ್ನವನ್ನು ತಂದೊಡ್ಡಲು ದೇವೇಂದ್ರನು ಹೂಡಿರಬಹುದಾದ ಉಪಾಯವೆಂದು ಭ್ರಮಿಸಿ ಶೋಕಿಸಿದುದು. ಇದನ್ನು ಕಂಡ ಗಜಾಸ್ಯನು ತನ್ನ ಸ್ವರೂಪ, ಪ್ರಕೃತ ತಾನು ಕೈಗೊಂಡ ಆವತಾರಿಕ ಸಂಗತಿ ಎಲ್ಲವನ್ನೂ ತಿಳಿಸಿ, ತನ್ನನ್ನು ಆಶ್ರಮಕ್ಕೆ ಕೊಂಡೊಯ್ದು ಕೆಲ ಕಾಲ ಕಾಪಾಡಬೇಕೆಂದು ಹೇಳಲು ಋಷಿಯು ಆನಂದಿಸಿ ತನ್ನನ್ನು ಪರಮ ಧನ್ಯನೆಂದು ಹೊಗಳಿಕೊಳ್ಳುತ್ತ ಶಿಶುವನ್ನು ಆಶ್ರಮಕ್ಕೆ ಎತ್ತಿಕೊಂಡು ಹೋಗಿ ತನ್ನ ಹೆಂಡತಿಯಾದ ವತ್ಸಲೆಯ ವಶಕ್ಕೆ ಕೊಟ್ಟುದು. ಅಪುತ್ರರಾದ ತಾಪಸ ದಂಪತಿಗಳು ಶಿಶುವನ್ನು ಬಹಳ ಅಕ್ಕರೆಯಿಂದ ಸಾಕಿದುದು. ಆ ಶಿಶುವನ್ನು ಪಡೆದುದಕ್ಕಾಗಿ ಪತಿಯನ್ನು ಹೊಗಳಿ, ದೇವನನ್ನು ತಾತ್ತ್ವಿಕವಾಗಿ ಸ್ತುತಿಸಿದುದು. ಶಿಶುವನ್ನು ಸ್ಪರ್ಶಿಸಿದ ಕೂಡಲೇ ಬರಡು ಜೀವಿಯಾದ ವತ್ಸಲೆಗೆ ಎದೆ ತುಂಬ ಹಾಲು ಉಂಟಾದುದು. ಮುನಿಯು ಹರ್ಷೋದ್ರಿಕ್ತನಾಗಿ ತನ್ನ ಆಶ್ರಮ ಭೂಮಿಯಲ್ಲಿ ವಾಸಿಸುವ ಮುನಿಗಳಿಗೆಲ್ಲ ಸಕ್ಕರೆಯನ್ನು ಹಂಚಿದುದು. ಬಾಲಚಂದ್ರನು ಮುನಿಯ ಆಶ್ರಮಕ್ಕೆ ಬಂದಲಾಗಾಯ್ತು ಆಶ್ರಮದಲ್ಲುಂಟಾದ ಶುಭ ಶಕುನಗಳು. ಅಧ್ಯಾಯದ ಮಹಿಮಾ ವರ್ಣನೆ.
೧೩೪ನೆಯ ಅಧ್ಯಾಯ
೧೩೫ನೆಯ ಅಧ್ಯಾಯ
೧೩೬ನೆಯ ಅಧ್ಯಾಯ
ದುಷ್ಟರ ಹಲ್ಲೆಯಿಂದ ನೊಂದು ನರಳುತ್ತಿರುವವರನ್ನು ಕಂಡು ಮನನೊಂದ ಮಹಾಗಣಪತಿಯು ಒಂದು ದಿನ ಪರಾಶರರ ಸಮೀಪಕ್ಕೆ ತೆರಳಿ ಸಿಂದೂರ ರಕ್ಷಃಪತಿಯ ದೌಷ್ಟ್ಯ, ತನ್ನಿಮಿತ್ತ ಧರ್ಮ — ಕರ್ಮಗಳ ಲೋಪ, ದೇವತೆಗಳಿಗುಂಟಾದ ಸ್ಥಾನಭ್ರಂಶ ಇತ್ಯಾದಿಗಳನ್ನು ಸರಿಪಡಿಸುವುದಕ್ಕೊಸ್ಕರ ನಿರ್ಗುಣನಾದರೂ ತಾನು ಈ ರೂಪದಿಂದ ಈ ಕಾಲದಲ್ಲಿ ಅವತರಿಸಬೇಕಾಗಿ ಬಂದಿತೆಂದೂ ಅದರಂತೆ ದುಷ್ಟನಿಗ್ರಹ, ಶಿಷ್ಟ ಪರಿಪಾಲನೆಗಾಗಿ ಹೊರಡಲಿರುವ ತನ್ನನ್ನು ಆಶೀರ್ವದಿಸಬೇಕೆಂದೂ ತಂದೆಯ ಬಳಿ ಪ್ರಾರ್ಥಿಸಿದುದು. ಇವನು ದೇವದೇವನು ಎಂಬುದನ್ನು ಅರಿಯದ ಪರಾಶರರು “ದೇವತೆಗಳಿಗೂ ಅಸಾಧ್ಯನಾದ ಈ ಸಿಂದೂರನನ್ನು ಬಾಲಕ; ನಿನ್ನಿಂದ ನಿಗ್ರಹಿಸಲಾಗದ ಕೆಲಸ, ಕೇವಲ ಚಾಪಲ್ಯದಿಂದ ಹಾನಿಗೊಳಗಾಗಬೇಡ. ನನ್ನ ಅನುಗ್ರಹ ಒಂದರಿಂದಲೇ ಇವನನ್ನು ನೀನು ಸೋಲಿಸುವಂತಾಗಬಹುದು” ಎಂದು ಹಾಸ್ಯವಾಗಿ ನುಡಿದು, ಅವನ ತಲೆಯ ಮೇಲೆ ವರದ ಹಸ್ತವನ್ನಿರಿಸಿದುದು. ಆಗ ತಲೆಯ ಮೇಲೆ ವರದ ಹಸ್ತವನ್ನಿರಿಸಿದುದು. ಆಗ ದೇವನು ಹರ್ಷಗೊಂಡು ಪರಾಶರರಿಗೂ, ವತ್ಸಲೆಗೂ ಪಾರ್ವತೀ ಪರಮೇಶ್ವರ, ಶ್ರೀಮನ್ನಾರಾಯಣ ಇವರನ್ನೆಲ್ಲ ವಂದಿಸಿ ಮೂಷಕವನ್ನೇರಿ ಸಿಂದೂರನ ಮೇಲೆ ಯುದ್ಧಕ್ಕೆ ಹೊರಟುದು. ದೇವನು ಧರಿಸಿದ ಆಯುಧಗಳು, ಅವನ ತೇಜಸ್ಸು ಇತ್ಯಾದಿಗಳ ವರ್ಣನೆ. ಸಿಂದೂರನ ರಾಜಧಾನಿಯ ವೈಭವದ ವರ್ಣನೆ. ದೇವನು ರಾಕ್ಷಸನ ನಗರದ ಉತ್ತರ ದಿಕ್ಕಿನಲ್ಲಿ ನಿಂತು ಒಮ್ಮೆ ಘಟ್ಟಿಯಾಗಿ ಗರ್ಜಿಸಿದುದು. ಆ ಧ್ವನಿಯನ್ನು ಕೇಳಿದ ಕೂಡಲೇ ಉಂಟಾದ ಉತ್ಪಾತಗಳ ವರ್ಣನೆ. ರಕ್ಕಸನ ನಗರ ರಕ್ಷಕರು ಆ ಧ್ವನಿಯನ್ನು ಕೇಳಿ ನಡುಗಿ ಕೆಲವರು ಮೂರ್ಚ್ಛೆಗೊಂಡುದು. ಕೆಲವರು ಮೃತರಾದುದು. ಸಿಂದೂರನೂ ಮೂರ್ಚ್ಛೆಯಿಂದ ಎಚ್ಚೆತ್ತು “ತನಗೂ ಇಂತಹ ದುಃಸ್ಥಿತಿ ಬಂದುದಕ್ಕೆ ಆಶ್ಚರ್ಯಪಟ್ಟು, ದೇವನ ಮೇಲೆ ಯುದ್ಧಕ್ಕೆ ತೆರಳಿದುದು. ಮೊದಲು ಹೊರಟ ದೂತರು ದೇವನ ರೂಪವನ್ನು ಕಂಡು ಎಲ್ಲರೂ ಹೆದರಿದ್ದರೂ ವಿಧಿಯಿಲ್ಲದೇ ಅವನ ಪರಿಚಯವನ್ನು ಕುರಿತು ಪ್ರಶ್ನಿಸಿದುದು. ದೇವನು ತನ್ನ ಪರಿಚಯವನ್ನು ಸೂಕ್ಷ್ಮವಾಗಿ ಹೇಳಿ “ಸಿಂದೂರನನ್ನು ನಿಗ್ರಹಿಸುವುದಕ್ಕಾಗಿ ನಾನು ಬಂದಿರುವೆನೆಂಬ ಸಂಗತಿಯನ್ನು ನಿಮ್ಮ ದೊರೆಗೆ ತಿಳಿಸಿ” ಎಂದು ಆಜ್ಞೆ ಮಾಡಲು, ಅವರು ಓಡಿ ಬಂದು ಸಂಗತಿಯನ್ನೆಲ್ಲ ಸಿಂದೂರನಿಗೆ ತಿಳಿಸಿದುದು. ರಾಕ್ಷಸನು ಭಯ — ಕ್ರೋಧಗಳಿಂದ ಕೂಡಿ ತನ್ನ ಪೌರುಷವನ್ನು ಕೊಚ್ಚಿಕೊಂಡು ಯುದ್ಧಕ್ಕೆ ಹೊರಡಲನುವಾಗಲು ಮಂತ್ರಿಗಳು ಅವನನ್ನು ತಡೆಗಟ್ಟಿ ತಾವೇ ಯುದ್ಧಕ್ಕೆ ಹೊರಡಲನುವಾದುದು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದು ಅಸುರನು ಮುನ್ನುಗ್ಗಿ ನಡೆದುದು.
೧೩೭ನೆಯ ಅಧ್ಯಾಯ
೧೩೮ನೆಯ ಅಧ್ಯಾಯ
ನಿನ್ನಂತೆಯೇ ಹಿಂದೆ ಶೌನಕಾದಿ ಮಹರ್ಷಿಗಳು ಸೂತ ಪೌರಾಣಿಕನನ್ನು ಪ್ರಶ್ನಿಸಿದರು. ಅವನು ತಾನು ಹಿಂದೆ ವ್ಯಾಸನ ಮುಖದಿಂದ ಕೇಳಿದಂತೆ ಗೀತೆಯನ್ನು ಋಷಿಗಳಿಗೆ ಬೋಧಿಸಿದನು. ಅವರ ಸಂವಾದವನ್ನೇ ನಿನಗೂ ಹೇಳುವೆನು. ಸೂತನು ತಾನು ವ್ಯಾಸನಿಂದ ಕೇಳಿದ ಪುರಾಣ ಕಥೆಗಳಿಗಾಗಿ ಕೃತಜ್ಞತೆಯನ್ನು ಸೂಚಿಸುತ್ತ ಯೋಗಶಾಸ್ತ್ರದ ತತ್ತ್ವವನ್ನು ತಿಳಿಸಬೇಕೆಂದು ಪ್ರಾರ್ಥಿಸಿದನು. ಆಗ ವ್ಯಾಸನು ಶ್ರೀ ಗಜಾನನ, ವರೇಣ್ಯ ಮಹಾರಾಜ ಇವರ ನಡುವೆ ನಡೆದ ಸಂವಾದವನ್ನು ಹೇಳಲಾರಂಭಿಸಿದನು. “ಸರ್ವಜ್ಞ ಗಣಪತೇ! ಯೋಗಶಾಸ್ತ್ರದ ತತ್ತ್ವವನ್ನು ನನಗೆ ಉಪದೇಶಿಸು” ಎಂದು ವರೇಣ್ಯನು ದೇವನನ್ನು ಕುರಿತು ಪ್ರಶ್ನಿಸಿದುದು. ಅಪೂರ್ವವಾದ ಇಂತಹ ಪ್ರಶ್ನೆಯನ್ನು ಕೇಳಿ ಸಂತೋಷಗೊಂಡ ಶ್ರೀ ಗಣಪತಿಯು ರಾಜನನ್ನು ಪ್ರಶಂಸಿಸಿ ಲೋಕದಲ್ಲಿ ಯಾವಾವುದನ್ನು ಯೋಗವೆಂದು ವ್ಯವಹರಿಸುವರೋ ಅವಾವೂ ನಿಜವಾದ ಯೋಗಗಳಲ್ಲ. ಯೋಗವೆಂದರೆ ವಿಷಯಗಳ ಕಡೆಗೆ ಹರಿದಾಡುತ್ತಿರುವ ಚಿತ್ರವನ್ನು ಅಂತರಾತ್ಮನಲ್ಲಿ ನೆಲೆಗೊಳ್ಳುವಂತೆ ಮಾಡುವುದು, ಅರ್ಥಾತ್ ಮನೋನಿಗ್ರಹವೆಂದು ಆರಂಭಿಸಿ ಆ ನಿಗ್ರಹಕ್ಕೆ ಸಾಧಕಗಳಾದ ಶ್ರವಣ, ಮನನ, ನಿದಿಧ್ಯಾಸನಗಳನ್ನೂ, ಅವಕ್ಕೆ ಸಾಧನಗಳಾದ ಆತ್ಮಾನಾತ್ಮ ವಿವೇಕ, ಇಹಾಮುತ್ರಾರ್ಥಫಲಭೋಗವಿರಾಗ, ಶಮಾದಿ ಷ್ಟಸಂಪತ್ತಿ, ಮುಮುಕ್ಷುತ್ವಾದಿಗಳ ವರ್ಣನೆ. ಸಕಲ ಚರಾಚರಗಳಲ್ಲೂ ಹಾಸು ಹೋಕ್ಕಾಗಿರುವವನು ತಾನೇ ಆಯಾ ವಸ್ತುಗಳಲ್ಲಿ ವಿಶಿಷ್ಟರೂಪದಿಂದ ತೋರಿ ಬರುವನು. ನಾಟಕ ಶಾಲೆಯಲ್ಲಿರತಕ್ಕದೀಪ ಚಲಚ್ಚಿತ್ರಮಂದಿರಗಳ ತೆರೆ (screen) ಇವು ಅಲ್ಲಿ ತೋರಿ ಬರುವ ನಟರ ಅಥವಾ ಚಿತ್ರಗಳ ಅಭಿನಯ, ಚಲನವಲನಾದಿಗಳನ್ನು ಅಭಿವ್ಯಕ್ತಿಗೊಳಿಸುತ್ತಲಿದ್ದರೂ, ಅವಾವುದರ ಸಂಪರ್ಕವನ್ನು ಲೇಶವೂ ಹೇಗೆ ಹೊಂದಿರುವುದಿಲ್ಲವೋ, ಅದರಂತೆ ಸಕಲ ಸ್ಥಾವರ — ಜಂಗಮಗಳ ಸ್ಥಿತಿಗತಿಗಳಿಗೆ ನಾನು ಹಿನ್ನಲೆಯಾಗಿದ್ದರೂ ಆ ವಸ್ತುಗಳ ಯಾವ ಗುಣದೋಷಕ್ಕೂ ಸಂಬಂಧಿಸಿದವನಲ್ಲ. ನಿತ್ಯ ಶುದ್ಧ ಬುದ್ಧ ಮುಕ್ತನೂ ಸಕಲ ಜಗತ್ಸಾಕ್ಷಿಯೂ ಆನಂದಘನನೂ ಪರಬ್ರಹ್ಮನೆನಿಸುವವನೂ ಆದ ನಾನೇ ತಮ್ಮ ಆತ್ಮಾ ಎಂದು ತಿಳಿಯಲಾರದೆ ಅಜ್ಞರು ಮಾಯಾವ್ಯಾಮೋಹಿತರಾಗಿ ಸಂಸಾರಪಂಕದಲ್ಲಿ ಸಿಲುಕಿ ಮಿಲ ಮಿಲ ಒದೆದಾಡುವರು. ಹೀಗೆ ಅನೇಕ ಜನ್ಮಗಳು ಕಷ್ಟಪಟ್ಟ ನಂತರ ಅವರಿಗೆ ಅನಿತ್ಯಗಳಾದ ಐಹಿಕಾಮುಷ್ಮಿಕ ಭೋಗಗಳಲ್ಲಿ ಬೇಸರಹುಟ್ಟಿ ತಮ್ಮ ಸ್ವರೂಪನಾದ ನನ್ನನ್ನು ಅರಿಯಲು ಯತ್ನಿಸುವರು. ಇದಕ್ಕಾಗಿ ಅನೇಕ ರೀತಿ ಕಷ್ಟಾಪಟ್ಟು ಗುರೂಪದೇಶದ ಮಹಿಮೆಯಿಂದ ಪರಾತ್ಪರ ವಸ್ತುವಾದ ನನ್ನನ್ನು ಪಡೆಯುವರು, ಅರ್ಥಾತ್ ನನ್ನಂತೆ ನಿತ್ಯ, ಶುದ್ಧ, ಬುದ್ಧಮುಕ್ತರೂ, ಆನಂದಘನರೂ, ಆಗುವರು ಎಂದು ಬೋಧಿಸಿದುದು. ಪ್ರಾಕ್ತನ ಜನ್ಮಗಳಲ್ಲಿ ಆಚರಿಸಿದ ಪಾಪ — ಪುಣ್ಯ ಕರ್ಮಗಳ ವಾಸನಾವಾಸಿತರಾದವರು ಕರ್ಮಬಂಧನದಿಂದ ಪಾರಾಗಲು ಪರಮೇಶ್ವರಾರ್ಪಣಬುದ್ಧ್ಯಾ ಕರ್ಮಗಳನ್ನಾಚರಿಸಿದರೆ ಅವರು ಮುಕ್ತರಾಗುತ್ತಾರೆ. ಇದೇ ನಿಜವಾದ ಯೋಗ ಎನಿಸುವುದು. ಸುಖ — ದುಃಖ, ರಾಗ — ದ್ವೇಷ, ಲಾಭಾಲಾಭ, ಜಯಾಪಜಯ ಇತ್ಯಾದಿ ದ್ವಂದ್ವಗಳು ಒದಗಿ ಬಂದಾಗ ಮನಸ್ಸು ಉದ್ವೇಗಗೊಳ್ಳದಂತೆ ತಡೆ ಹಿಡಿಯುವುದಕ್ಕು ಯೋಗವೆನ್ನುತ್ತಾರೆ. ಇದನ್ನೇ ಸಾಂಖ್ಯಸಾರಾರ್ಥ ಅಥವಾ ಬ್ರಾಹ್ಮೀಜ್ಞಾನ ಎಂದು ಕರೆಯುವರು ಎಂದು ಹೇಳಿದುದು.
೧೩೯ನೆಯ ಅಧ್ಯಾಯ
ಜ್ಞಾನನಿಷ್ಠೆ ಹಾಗೂ ಕರ್ಮನಿಷ್ಠೆ ಈ ಎರಡರ ಪೈಕಿ ಯಾವುದು ಮುಖ್ಯ ಸಾಧನ? ಎಂಬುದನ್ನು ನಿಶ್ಚಯಿಸಿ ಹೇಳಬೇಕೆಂದು” ವರೆಣ್ಯ ಮಹಾರಾಜನು ಪ್ರಶ್ನಿಸಿದುದು. ನಾನು ಈ ವಿಶ್ವವನ್ನು ಸೃಜಿಸಿದ ಕೂಡಲೆ ಕರ್ಮನಿಷ್ಠೆಯನ್ನು ಕರ್ಮಿಗಳಿಗೂ, ಜ್ಞಾನನಿಷ್ಠೆಯನ್ನು ಜ್ಞಾನಿಗಳಿಗೂ ಉಪದೇಶಿಸಿದೆನು. ಕರ್ಮ ಮಾಡುವುದನ್ನು ಬಿಟ್ಟ ಮಾತ್ರಕ್ಕೆ ಅವನು ಅಕರ್ಮಿಯಾಗುವುದಿಲ್ಲ. ಸನ್ಯಾಸಿಯಾದ ಮಾತ್ರಕ್ಕೆ ಸಿದ್ಧಿಯನ್ನೂ ಪಡೆಯಲಾರ ಮತ್ತು ಕರ್ಮ ಮಾಡದೇ ಇರಲು ಯಾರಿಗೂ ಸಾಧ್ಯವೇ ಇಲ್ಲ. ಅವನು “ಒಲ್ಲೆ” ಎಂದರೂ ಗುಣಗಳು ಕರ್ಮ ಮಾಡಿಸುತ್ತವೆ. ಕರ್ಮಿಯಂತೆ ನಟಿಸುತ್ತಲಿರುವವನು ಮಿಥ್ಯಾಚಾರಿ. ಇಂದ್ರಿಯ ನಿರೋಧದ ಮೂಲಕ ಮನಸ್ಸನ್ನು ಏಕತ್ರ ನಿಲಿಸಿ ಕರ್ಮವನ್ನಾರಂಭಿಸಬೇಕು. ಕರ್ತವ್ಯ ಎಂಬ ದೃಷ್ಟಿಯಿಂದ ಮಾಡುವ ಕರ್ಮ ಬಂಧಕವಲ್ಲ. ಕರ್ಮವನ್ನು ಬಿಡುವುದಕ್ಕಿಂತ ನಿಷ್ಕಾಮ ಕರ್ಮವನ್ನು ಮಾಡುವುದು ಬಹಳ ಶ್ರೇಷ್ಠ. ಚಾತುರ್ವರ್ಣ್ಯವನ್ನು ಸೃಜಿಸಿದಾಗ “ನೀವೂ, ದೇವತೆಗಳೂ ಕರ್ಮ ಮಾಡುವುದು, ಅದನ್ನು ಉಪಭುಜಿಸಿ ವೃಷ್ಟ್ಯದಿಗಳನ್ನು ಪ್ರತಿಯಾಗಿ ಕೊಡುವುದು ಹೀಗೆ ಕ್ರಮವಾಗಿ ಪರಸ್ಪರ ಸಹಕಾರದಿಂದ ಬಾಳಿರಿ” ಎಂದು ಹೇಳಿರುವೆನೆಂದೂ ಕರ್ಮದಿಂದ ವೃಷ್ಟಿ, ವೃಷ್ಟಿಯಿಂದ ಅನ್ನ, ಅನ್ನದಿಂದ ಪ್ರಜೆ, ಪ್ರಜೆಯಿಂದ ಯಜ್ಞ, ಬ್ರಹ್ಮನಿಂದ ಯಜ್ಞ ಹುಟ್ಟಿದೆ ಎಂದೂ ಹೇಳಿ ತಾನು ಯಜ್ಞದಲ್ಲಿ ನೆಲೆಗೊಂಡಿರುವೆನೆಂದು ತಿಳಿಸಿದುದು. ಈ ಸಾಂಸಾರಿಕ ಚಕ್ರದಲ್ಲೇ ಸಿಲುಕಿ ನರಳುತ್ತಿದ್ದರೆ ಸುಖ_ಶಾಂತಿಗಳು ಲಭಿಸುವುದಿಲ್ಲವಾದ್ದರಿಂಡ ಆತ್ಮಾರಾಮನಾಗಿರಬೇಕು. ಕರ್ಮಿಯಾಗಿದ್ದರೂ ಅನಾಸಕ್ತತೆಯಿಂದಿರತಕ್ಕದ್ದು. ತಾನು ಮುಕ್ತನಾಗಿದ್ದರೂ ಅಜ್ಞರನ್ನು ಸನ್ಮಾರ್ಗಕ್ಕೆ ತರುವುದಕ್ಕಾಗಿ ಆಷಕ್ತರಂತೆ ಕರ್ಮ ಮಾಡುತ್ತಲೇ ಇರಬೇಕು. ಇದನ್ನೇ ಲೋಕಸಂಗ್ರಹ ಎನ್ನುವರು. ಇದೇ ರೀತಿಯಾಗಿ ಆಚರಿಸಿದ ಹಿಂದಿನ ರಾಜರನೇಕರು ಸಿದ್ಧಿಯನ್ನು ಪಡೆದಿದ್ದಾರೆ. ಪ್ರಖ್ಯಾತ ಪುರುಷನು ಹೇಗೆಲ್ಲ ನಡೆವನೋ ಅವನಂತೆಯೇ ತಾವೂ ನಡೆಯಬೇಕೆಂದು ಅಜ್ಞರು ತಿಳಿಯುತ್ತಾರೆ. ಜ್ಞಾನಿಯು ಕರ್ಮವನ್ನು ತ್ಯಜಿಸಿದರೆ ಲೋಕವೂ ಅವನನ್ನು ಅನುಕರಿಸುವುದು. ಕರ್ಮ ಮಾಡತಕ್ಕವರೇ ಇಲ್ಲದಂತಾಗಲು ಲೋಕದ ನಿಯತಿಯೇ ತಪ್ಪಿ ಹೋಗಿ ಎಲ್ಲರೂ ಹಾಳಾಗಿಹೋಗುವರು. ನೋಡು, ನನಗೆ ಯಾವ ಪ್ರಯೋಜನದ ಅಭಿಲಾಷೆ ಇಲ್ಲದಿದ್ದರೂ ಕರ್ಮವನ್ನು ಮಾಡುತ್ತಲೇ ಇದ್ದೇನೆ. ಇಲ್ಲದಿದ್ದರೆ ಲೋಕವನ್ನೆಲ್ಲ ನಾನು ಕೆಡಿಸಿದಂತಾಗುವುದಲ್ಲವೆ? ನಟನು ತಾನು ನಿಜವಾದ ರಾಜನಲ್ಲವೆಂದೂ ಆ ರಾಜ ವೇಷ ಭೂಷಣಗಳು ತನ್ನವಲ್ಲವೆಂದೂ ದೃಢವಾಗಿ ನಂಬಿದ್ದರೂ ರಾಜನಂತೆಯೇ ಹೇಗೆ ಅಭಿನಯಿಸುತ್ತಿರುವನೋ ಅದರಂತೆ ಸಂಕಲ್ಪಾದಿ ಕರ್ಮಗಳನ್ನು ಮಾಡತಕ್ಕ ಅಂತಃಕರಣವಾಗಲಿ, ಅದರ ಕ್ರಿಯೆಗಳಾದ ಜ್ಞಾನೇಚ್ಛಾಕೃತಿಗಳಾಗಲಿ ತನಗೆ ಸಂಬಂಧಿಸಿದುವಲ್ಲ ಎಂದು ಖಚಿತವಾಗಿ ತಿಳಿದು ಕೆಲಸಗಳನ್ನು ಮಾಡುತ್ತಿರುವುದೇ ಕರ್ಮಯೋಗ. ಈ ಯೋಗಿಯು ಮುಕ್ತಿಯನ್ನು ಪಡೆಯಲರ್ಹನಾಗುವನು ಎಂದು ಮುಂತಾಗಿ ಬೋಧಿಸಿ, ಕಾಮೋಪಹತನಾಗಿ ಸ್ವಧರ್ಮವನ್ನು ತ್ಯಜಿಸಿ ಪರಧರ್ಮವನ್ನಾಶ್ರಯಿಸಬಾರದೆಂದು ಹೇಳಿದುದು. “ಮನುಷ್ಯನಿಗೆ ಇಚ್ಛೆಯಿಲ್ಲದಿದ್ದರೂ ಬಲಾತ್ಕಾರದಿಂದ ಪಾಪವು ಘಟಿಸುವಂತೆ ಪ್ರೇರಿಸುವವರ್ನಾಉ?” ಎಂದು ರಾಜನು ಪ್ರಶ್ನಿಸಲು ಇದಕ್ಕೆ ಕಾಮಕ್ರೋಧಗಳೇ ಕಾರಣ. ಕಾಮವೇ ಕ್ರೋಧಾದಿಗಳನ್ನು ಹುಟ್ಟಿಸುವುದಾದುದರಿಂದ ಅಂತಃಶತ್ರುವಾದ ಆ ಕಾಮವನ್ನು ಮೊದಲು ನಿಗ್ರಹಿಸು. ಹೀಗೆ ಮಾಡಿದರೆ ನೀನು ಪರಂಧಾಮವನ್ನು ಪಡೆಯುವೆ” ಎಂದು ಬೋಧಿಸಿದುದು.
೧೪೦ನೆಯ ಅಧ್ಯಾಯ
೧೪೧ನೆಯ ಅಧ್ಯಾಯ
ಕರ್ಮಯೋಗ, ಸನ್ಯಾಸಯೋಗಗಳೆರಡೂ ಮುಕ್ತಿಸಾಧನವೆಂದು ಹೇಳಿದೆಯಲ್ಲವೇ? ಈ ಎರಡರಲ್ಲಿ ಯಾವುದಾದರೊಂದನ್ನು ನನಗೆ ಹೇಳು ಎಂದು ವರೇಣ್ಯ ಮಹಾರಾಜನು ಪುನಃ ಪ್ರಶ್ನಿಸಿದುದು. “ಈ ಎರಡೂ ಶ್ರೇಯಸ್ಸಾಧಾನಗಳಾದರೂ ಕರ್ಮವನ್ನು ತ್ಯಾಗಮಾಡುವುದಕ್ಕಿಂತ ಕರ್ಮಯೋಗವೇ ಶ್ರೇಷ್ಥವೆಂಬುದು ನನಗೆ ಸಮ್ಮತವಾದುದು ಎಂದು ಆರಂಭಿಸಿ ಅವೆರಡಕ್ಕೂ ದೊರೆಯುವ ಫಲ ಒಂದು ಎಂದು ಹೇಳಿದುದು. ತತ್ತ್ವಜ್ಞಾನಿಯು ಆತ್ಮಭಿನ್ನ ವಸ್ತುವನ್ನು “ಸತ್ಯ” ಎಂದು ನಂಬುವುದಿಲ್ಲ. ಕರ್ಮಯೋಗಿಯು ತಾನು ಆಚರಿಸುವ ಸಕಲ ಕರ್ಮಗಳನ್ನೂ ಪರಮೇಶ್ವರನಿಗೆ ಅರ್ಪಿಸುವನು. ಸೂರ್ಯನ ಬೆಳಕು ಹೂವು, ಹೊಲಸುಗಳ ಮೇಲೆ ಹರಡಿದ್ದರೂ ಪುಷ್ಪದ ಸೌಗಂಧ್ಯವನ್ನಾಗಲಿ, ಹೊಲಸಿನ ದೌರ್ಗಂಧ್ಯವನ್ನಾಗಲಿ ಹೇಗೆ ಸಂಪರ್ಕಿಸುವುದಿಲ್ಲವೋ ಅದರಂತೆ ಕರ್ಮ, ಜ್ಞಾನಯೋಗಿಗಳು ಯಾವ ಪಾಪ ಪುಣ್ಯಗಳಿಂದಲೂ ಲಿಪ್ತರಾಗುವುದಿಲ್ಲ. ಕರ್ಮಿಯು ಕಾಯಿಕ, ವಾಚಿಕ, ಬೌದ್ಧ, ಐಂದ್ರಿಯ, ಮಾನಸ ಈ ಎಲ್ಲ ಕರ್ಮಗಳ ಪೈಕಿ ಯಾವ ಕರ್ಮಕ್ಕೂ ಫಲವನ್ನು ಬಯಸುವುದಿಲ್ಲ. ಆದರೂ ಅವರು ಮಾಡಿದ ಕರ್ಮಗಳು ಚಿತ್ತಶುದ್ಧಿಗೆ ತಾವಾಗಿಯೇ ಕಾರಣಗಳಾಗುವುವು. ಅಜ್ಞನು ಅದೇ ಕರ್ಮಗಳನ್ನಾಚರಿಸಿದರೂ ಅವಕ್ಕೆ ಫಲವಾದ ಭೋಗಗಳನ್ನು ಬಯಸುವವನಾದ್ದರಿಂದ ಅವು ಬೇಡಿದಷ್ಟು ಮಾತ್ರ ಫಲಗಳನ್ನು ಕೊಟ್ಟು ಕರಗಿಹೋಗುವುವು. ಫಲಗಳನ್ನು ಭುಜಿಸಿದಂತೆಲ್ಲ ಮತ್ತಷ್ಟು ಭೋಗೇಚ್ಛೆ ಹೆಚ್ಚಿ, ಹೊಸ ಕರ್ಮಗಳನ್ನು ಮಾಡಿಸುವುದು. ಅದರಿಂದ ಜನನ — ಮರಣಗಳು, ರೋಗ — ರುಜಿನಾದಿಗಳು ಈ ಕ್ಲೇಶಗಳನ್ನೆಲ್ಲ ಅವನು ಅನುಭವಿಸಬೇಕಾಗುತ್ತದೆ. ಕರ್ಮ, ಕರ್ತೃತ್ವ ಇವಾವನ್ನೂ ನಾನು ಸೃಜಿಸಿದವನಲ್ಲ ಮತ್ತು ಅವನ್ನು ಮಾಡೆಂದು ಯಾರ ಮೇಲೆ ಒತ್ತಾಯವನ್ನು ಹೇರಿದವನೂ ಅಲ್ಲ. ಇದನ್ನೆಲ್ಲ ಮಾಡುವುದು ತ್ರಿಗುಣಾತ್ಮಕವಾದ ಶಕ್ತಿ, ನಾನು ಸರ್ವವ್ಯಾಪಿಯೂ ಸರ್ವನಿಉಆಮಕನೂ ಆಗಿದ್ದರೂ ಯಾರ ಪುಣ್ಯ — ಪಾಪಗಳನ್ನೂ ಸ್ಪರ್ಶಿಸತಕ್ಕವನಲ್ಲ. ಮುಗ್ಧರು ಮಾತ್ರ ಎಲ್ಲಕ್ಕೂ ನನ್ನನ್ನು ಹೊಣೆಯನ್ನಾಗಿ ಮಾಡುತ್ತಾರೆ. ಇಂತಹ ದಡ್ಡರು ತಮ್ಮನ್ನೇ ತಾವು ಹಾಳುಮಾಡಿಕೊಳ್ಳುತ್ತಾರೆ. ನನ್ನ ತತ್ತ್ವ ವನ್ನು ಸ್ಫುಟವಾಗಿ ತಿಳಿದವನು ಯಾವುದರಲ್ಲೂ ಉಚ್ಚ ನೀಚ ಭವವುಳ್ಳವನಾಗುವುದಿಲ್ಲ. ಇಂಥವರೇ ಪಂಡಿತರೆನಿಸತಕ್ಕವರು. ಅವರಿಗೆ ಎಲ್ಲವೂ ವಶವಾಗುವುದು. ಅವರಿಗೆ ಹರ್ಷ — ವಿಷಾದಾದಿ ದ್ವಂದ್ವಗಳೊದಗಿದರೂ ಅವರು ಸ್ವಲ್ಪವೂ ಕ್ಷೋಭೆಗೊಳ್ಳುವುದಿಲ್ಲವೆಂದು ತಿಳಿಸಿದುದು. ಮೂರು ಲೋಕಗಳಲ್ಲಿರುವ ದೇವತೆಗಳು, ಗಂಧರ್ವರು ಇವರ ಪೈಕಿ ಯಾರು ಸುಖಿಗಳು? ಸುಖಾವೆಂದರೇನು? ಇದನ್ನು ಹೇಳೆಂದು ರಾಜನು ಪ್ರಶ್ನಿಸಲು ಬಾಹ್ಯ ವಸ್ತುಗಳಲ್ಲಿ ಸುಖವಿಲ್ಲ. ವಿಷಯ ಲಾಭದಿಂದ ಮನಸ್ಸು ತಾತ್ಕಾಲಿಕವಾವಿ ಅಚಂಚಲವಾಗಿರುವುದು. ಆಗ ತನ್ನ(ಸ್ವಂತ) ಸುಖವೇ ತನಗೆ ತೋರಿದರೂ “ಈ ಸುಖವಿಷಯಗಳಿಂದ ಲಭಿಸಿತು” ಎಂದು ಅಜ್ಞರು ತಿಳಿಯುವರು. ಈ ಮಾದರಿಯ ಸುಖಾಭಿವ್ಯಕ್ತಿಯು ಕ್ಷಣಿಕವಾದುದರಿಂಡ ಅಂತ್ಯದಲ್ಲಿ ದುಃಖಕಾರಕವಾಗಿದೆ. ಹುಟ್ಟಿ ಅಡಗತಕ್ಕ ಈ ವೈಷಯಿಕ ಸುಖಕ್ಕೆ ಜ್ಞಾನಿಯು ಎಂದೂ ಮರುಳಾಗುವುದಿಲ್ಲ. ನಿತ್ಯ ಸುಖವು ಅನಾಸಕ್ತಿ ರೂಪವಾದುದು. ಈ ಅನಾಸಕ್ತಿ ಕಾಮ ಕ್ರೋಧಗಳನ್ನು ಜಯಿಸಿದವನಿಗೆ ಮಾತ್ರ ಉಂಟಾಗುವುದು. ಆತ್ಮೈಕನಿರತನಿಗೆ ವಸ್ತ್ವಂತರವೇ ತೋರುವುದಿಲ್ಲವಾದ್ದರಿಂದ ಕ್ರಿಯಾಲೋಪಬರುವ ಪ್ರಸಕ್ತಿಯೇ ಇಲ್ಲ. ಅವನು ಅಂತಃಪ್ರಕಾಶದಿಂದ ಸರ್ವದಾ ಸುಖ — ಶಾಂಟಿಗಳನ್ನನುಭವಿಸುತ್ತಾನೆ. ಎಂದು ಹೇಳಿ ಪ್ರಾಣಾಯಾಮ ಪ್ರಕ್ರಿಯೆಯನ್ನು ವಿವರಿಸಿದುದು. ಈ ಯೋಗಗಳಿಂದ ಯಾರು ನನ್ನನ್ನರಿಯುವರೋ ಅವರು ಮುಕ್ತಿಯನ್ನೈದುವರು ಎಂದು ಉತ್ತರಿಸಿದುದು.
೧೪೨ನೆಯ ಅಧ್ಯಾಯ
೧೪೩ನೆಯ ಅಧ್ಯಾಯ
೧೪೪ನೆಯ ಅಧ್ಯಾಯ
ಶುಕ್ಲ — ಕೃಷ್ಣಗತಿ, ಬ್ರಹ್ಮ, ಸಂಸ್ಕೃತಿಗಳ ಸ್ವರೂಪವನ್ನು ತಿಳಿಸಬೇಕೆಂದು ರಾಜನು ಕೇಳಲು, ಅಗ್ನಿ, ಜ್ಯೋತಿ ಅಹಃ ಈ ಮಾರ್ಗವನ್ನೂ ಧೂಮ, ರಾತ್ರಿ ಕೃಷ್ಣ ಈ ಮಾರ್ಗವನ್ನೂ, ಕ್ಷರವು ಸಂಸ್ಕೃತಿ ಎಂದೂ, ಅಕ್ಷರ ಎಂಬುವನೇ ಈಶ್ವರ ಎಂದೂ ಈ ಎರಡನ್ನೂ ಈರಿರುವುದೇ ಬ್ರಹ್ಮವಸ್ತು ಎಂದೂ ಸೂಕ್ಷ್ಮವಾಗಿ ಹೇಳಿದುದು. ನನ್ನನ್ನು ಗಣಿಸದೇ ಇರುವ ಅಜ್ಞರು ಸಂಸಾರ ಮಗ್ನರಾಗಿ ನರಳುವರು. ಯಾರು ನನ್ನನ್ನೇ ಧ್ಯಾನಿಸುವರೋ ಅವರು ಪರಪ್ರಹ್ಮವನ್ನು ಪಡೆಯುವರು. ಎಂದು ಹೇಳಿ ಧ್ಯಾನಿಸುವ ವಿಧಾನವನ್ನು ವಿವರಿಸಿದುದು. ಸಕಾಮ ಪೂಜೆಯನ್ನು ಸಲಿಸಿದವನು ಕ್ರಮ ಮುಕ್ತಿಯನ್ನು ಪಡೆಯುತ್ತಾನೆ. ಯಾರು ಯಾವ ದೇವತಾ ರೂಪವನ್ನೇ ಅರ್ಚಿಸಿದರೂ ಅದು ತನ್ಮೂಲಕ ನನಗೇ ಸಲ್ಲುವುದಾದ್ದರಿಂದ ಆಯಾ ರೂಪಗಳಿಂದ ಅವರವರಿಗೆ ನಾನೇ ಆ ಫಲಗಳನ್ನು ಹಂಚುವೆನು. ನನ್ನನ್ನು ದ್ವೇಷಿಸುವವನು ಸಹಸ್ರಾರು ಕಲ್ಪಗಳವರೆಗೆ ನರಕದಲ್ಲಿ ಬಿದ್ದು ನರಳುವನು. ಆದುದರಿಂದ ನನ್ನನ್ನು ಸರ್ವದಾ ಧ್ಯಾನಿಸುತ್ತಲೇ ಇರಬೇಕು. ಅಷ್ಟು ನಿಷ್ಠೆಯಿಂದ ಧ್ಯಾನಿಸಲಿಕ್ಕಾಗದಿದ್ದರೆ, ಯಾವ ಕೆಲಸವನ್ನೇ ಮಾಡಿದರೂ ಅದರಲ್ಲಿ ಸಕ್ತಿಯನ್ನಿಡದೆ ನನಗೆ ಸಮರ್ಪಿಸಿ ಬಿಡಬೇಕು. ಸ್ತೀಯರಾಗಲಿ, ದುರಾಚಾರಿಗಳಾದ ಯಾವ ತ್ರೈವರ್ಣಿಕರೇ ಆಗಲಿ ತಾವು ಮಾಡುವ ಕರ್ಮಗಳನ್ನು ನನಗೆ ಸಮರ್ಪಿಸುತ್ತಿದ್ದರೆ ಅವರು ಮುಕ್ತರಾಗುವರು. ಉತ್ತಮರಾದ ಬ್ರಾಹ್ಮಣರು ಉದ್ಧಾರವಾಗುವುದಕ್ಕೆ ಆಕ್ಷೇಪಣೆ ಏನಿದೆ? ಅಣು, ರೇಣು ತೃಣ ಕಾಷ್ಠಗಳಲ್ಲೂ ನಾನು ಸಾರ ಭೂತನಾಗಿರುವೆನು ಎಂದು ದೇವನು ಹೇಳಿದುದು.
೧೪೫ನೆಯ ಅಧ್ಯಾಯ
೧೪೬ನೆಯ ಅಧ್ಯಾಯ
೧೪೭ನೆಯ ಅಧ್ಯಾಯ
೧೪೮ನೆಯ ಅಧ್ಯಾಯ
ಸ್ವಭಾವ, ಭಕ್ತಿಗಳಂತೆ ತಪಸ್ಸೂ ಕಾಮಿಕಾದಿ ಭೇದದಿಂದ ಮೂರು ಬಗೆಯಾಗಿದೆ. ಗುರು ಶುಶ್ರೂಷೆ, ಕರ್ಮಾನುಷ್ಠನ ಇವು ಕಾಯಿಕ ತಪವೆನಿಸುವುವು. ಸತ್ಯ ಹಾಗೂ ಮೃದುವಾಗಿ ನುಡಿಯುವುದು. ಗುರುಮುಖದಿಂದ ವೇದಗಳನ್ನು ಕಲಿಯುವುದು ಇತ್ಯಾದಿಗಳು ವಾಚಿಕ ತಪಸ್ಸು. ಅಂತಶ್ಯಾಂತಿ, ಮೌನ, ಇಂದ್ರಿಯನಿಗ್ರಹ, ಸರಳ ಹೃದಯ ಇವು ಮಾನಸಿಕ ತಪವೆನಿಸುವುವು. ಈ ಮೂರು ಬಗೆಯ ತಪಸ್ಸು ಸಾತ್ತ್ವಿಕಾದಿ ಗುಣಭೇದದಿಂದ ಮತ್ತೆ ಮೂರು ಮೂರು ಬಗೆಯಾಗಿವೆ. ಫಲಾಭಿಲಾಷೆ ಇಲ್ಲದೆ ಪರಮೇಶ್ವರಾರ್ಪಣ ಬುದ್ಧ್ಯಾ ಆಚರಿಸತಕ್ಕ ತಪಸ್ಸು ಸಾತ್ತ್ವಿಕ ತಪಸ್ಸೆನಿಸುವುದು. ಕೀರ್ತಿಗಾಗಿ ಮಾಡುವ ತಪಸ್ಸು ರಾಜಸವೆನಿಸುವುದು. ಇತರರನ್ನು ಹಿಂಸಿಸುವುದಕ್ಕಾಗಿ ಆಚರಿಸುವ ತಪಸ್ಸು ತಾಮಸವಾದುದು. ಸಕಾಲದಲ್ಲಿ ಸತ್ಪಾತ್ರರಿಗೆ ಅನಿಷಿದ್ಧ ಶ್ರೇಷ್ಠ ವಸ್ತುಗಳನ್ನು ಕೊಡುವುದು ಸಾತ್ವಿಕ ದಾನವೆನಿಸುವುದು. ಯಾವುದಾದರೊಂದು ಪ್ರಯೋಜನವನ್ನು ಬಯಸಿ ಕೊಡುವ ದಾನ ರಾಜಸವೆನಿಸುವುದು. ಕಾಲ — ದೇಶಾದಿಗಳ ಗಮನವಿಲ್ಲದೆ ಮನಸ್ಸಿಗೆ ಬಂದಂತೆ ಅಸಡ್ಡೆಯಿಂದ ಕೊಡುವ ದಾನಕ್ಕೆ ತಾಮಸದಾನವೆಂದು ಹೆಸರು. ನನ್ನನ್ನು ಸರ್ವವ್ಯಾಪಿ ಎಂದು ತಾತ್ತ್ವಿಕವಾಗಿ ತಿಳಿವ ಜ್ಞಾನವು ಸಾತ್ತ್ವಿಕವಾದುದು. ಜೀವತತ್ತ್ವಕ್ಕಿಂತಲೂ ನನ್ನನ್ನು ಭಿನ್ನನೆಂದು ತಿಳಿಯುವುದು ರಾಜಸ ಜ್ಞಾನ. ಈ ದೇಹವೇ ಆತ್ಮಾ. ದೇಹದ ಜನ್ಮ — ವಿನಾಶಗಳ ಸಂದರ್ಭಗಳಲ್ಲಿ ಆತ್ಮನೂ ಜನಿಸಿ ನಶಿಸುವನೆಂಬ ಭ್ರಮಾತ್ಮಕ ತಿಳಿವು ತಾಮಸವೆನಿಸುವುದು. ಕಾಮ, ದ್ವೇಷ, ದಂಭ ಇವಿಲ್ಲದ ಕರ್ಮಗಳು ಸಾತ್ತ್ವಿಕವಾದುವು. ಯಾವುದು ಫಲೇಚ್ಛೆ, ದಂಭಾದಿಗಳಿಂದ ಗರ್ಭಿರವಾದ ಕರ್ಮವೋ, ಅದನ್ನು ರಾಜಸ ಕರ್ಮವೆನ್ನುವರು. ಸ್ವಶಕ್ತಿ, ಕರ್ಮದ ಪ್ರಕ್ರಿಯೆ ಇವಾವುದನ್ನೂ ತಿಳಿಯದೆ ಹುಂಬತನದಿಂದ ಆಚರಿಸುವುದು ತಾಮಸ ಕರ್ಮ. ಧೈರ್ಯೋತ್ಸಾಹ, ಫಲಾಫಲಗಳಲ್ಲಿ ಸಮಭಾಅ, ಅಹಂಕಾರವಿಲ್ಲದಿರುವಿಕೆ ಇತ್ಯಾದಿ ಗುಣಗಳುಳ್ಳ ಕರ್ತನು ಸಾತ್ತ್ವಿಕನೆನಿಸುವನು. ಫಲಾಶೆ, ಅದರ ಲಾಭಾಲಾಭಗಳಿಂದ ಹರ್ಷ — ವಿಷಾದಗೊಳ್ಳುವುದು ಇತ್ಯಾದಿ ಭಾವಭಾವಿತನು ರಾಜಸ ಕರ್ತೃವಾಗುವನು. ಧೋರಣೆ, ಅಜ್ಞಾನ, ಇತರರನ್ನು ಹಿಂಸಿಸಬೆಕೆಂಬುದೇ ಮುಖ್ಯ ಧ್ಯೇಯವಾಗಿರತಕ್ಕ ಕರ್ತೃ ತಾಮಸನು. ಮೊದಲಿಗೆ ವಿಷದಂತೆ ತೋರುವ, ಸಾಧಿಸಿದನಂತರ ಆತ್ಯಂತಿಕವಾಗಿ ದುಃಖವನ್ನು ನಾಶಮಾಡುವ ಆತ್ಮಾನಂದವೇ ಸಾತ್ವಿಕವಾದುದು. ವಿಷಯಭೋಗದಿಂದ ತೋರಿದಂತಾಗುವ ತಾತ್ಕಾಲಿಕ ಸುಖಾಭಾಸ ರಾಜಸವೆನಿಸುವುದು. ಮತ್ತು, ಮರೆವು ಇತ್ಯಾದಿಗಳಿಂದ ತಾತ್ಕಾಲಿಕವಾಗಿ ತೋರುವ ದುಃಖಾಭಾವರೂಪವಾದ ಸ್ಥಿತಿಯನ್ನು ತಾಮಸವೆ ನ್ನುತ್ತಾರೆ. ಏವಮಾಧ್ಯನೇಕ ರಹಸ್ಯಾಂಶಗಳನ್ನು ವಿವರಿಸಿ ಶ್ರೀ ಗಣೇಶಗೀತೆಯನ್ನು ಮುಗಿಸಿದುದು.
೧೪೯ನೆಯ ಅಧ್ಯಾಯ
ವರೇಣ್ಯ ಮಹಾರಾಜನು ಭಕ್ತಿಯಿಂದ ಸಲ್ಲಿಸಿದ ಪೂಜೆಯನ್ನು ಸ್ವೀಕರಿಸಿ ಭಕ್ತರನ್ನು ಅನುಗ್ರಹಿಸುತ್ತ ರಾಜನು ಪೂಜಿಸಿದೆಡೆಯೇ ದೇವನು ನೆಲೆಸಿದುದು. ವಿನಾಯಕನ ಬಗ್ಗೆ ಅನೇಕ ಬೇರೆ ಬೇರೆ ಕಥೆಗಳನ್ನು ಹೇಳಿದೆಯಷ್ಟೆ? ಈ ಕಥೆಗಳಲ್ಲಿ ಬಹಳ ಭಿನ್ನಾಭಿಪ್ರಾಯ ತೋರಿಬರುವುದಲ್ಲವೇ? ಈ ಸಂಶಯವನ್ನು ಕಳೆ ಎಂದು ವ್ಯಾಸರು ಬ್ರಹ್ಮ ದೇವನನ್ನು ಕುರಿತು ಪ್ರಶ್ನಿಸಿದುದು. ದೇವನು ಸ್ವೇಚ್ಛಾಮಹಿಮೆಯಿಂದ ಲೋಕಾನುಗ್ರಹಕ್ಕಾಗಿ ಕಲ್ಪಭೇದೇನ ಪರಿಗ್ರಹಿಸುವ ನಾನಾವತಾರ, ಅನೇಕ ಲೀಲಾ — ವಿನೋದ ಇತ್ಯಾದಿಗಳಲ್ಲಿ ನಾವು ಸಂಶಯಪಡಬಾರದು. ಅಲ್ಪಮತಿಗಳಾದ ನಮ್ಮ ಮೆದುಳಿಗೆ ಅಳವಡಲೊಲ್ಲದೆಂಬ ಮಾತ್ರಕ್ಕೆ ಭಗವಂತನ ಶಕ್ತಿ ಸುಳ್ಳಾದೀತೇ? ಅಗಮ್ಯ ವಿಷಯಗಳಲ್ಲಿ ವೃಥಾ ಸಂಶಯವನ್ನು ತೆಗೆದುಕೊಂಡರೆ ಅಂಥವನಿಗೆ ನರಕವಾಸ ತಪ್ಪದು. ತ್ರೇತಾಯುಗದ ಕಥೆಗಳನ್ನು ಹೇಳಿದುದಾಯಿತು. ಈಗ ಕಲಿಯುಗಕ್ಕೆ ಸಂಬಂಧಿಸಿದ ಕಥೆಗಳನ್ನು ಹೇಳುವೆನು. ಕಲಿಯುಗದಲ್ಲಿ ಎಲ್ಲರೂ ಭ್ರಷ್ಟರಾಗುವರು. ಬ್ರಾಹ್ಮಣರು ವೇದವನ್ನೋದುವುದಿಲ್ಲ. ನಿತ್ಯ, ನೈಮಿತ್ತಿಕಾದಿ ಕರ್ಮಗಳನ್ನೆಲ್ಲ ತ್ಯಜಿಸುವರು. ಅವರ ಮೇಲ್ವಿಚಾರಣೆಯಲ್ಲಿರಬೇಕಾದ ಇತರ ತ್ರೈವರ್ಣಿಕರು ಸ್ವೆಚ್ಛಾಚಾರಿಗಳಾಗುವರು. ಇಷ್ಟರ ಮಟ್ಟಿಗೆ ಧರ್ಮವು ಹದಗೆಟ್ಟಗ ದೇವನು ಗಜಾನನ ರೂಪದಿಂದ ಅವತರಿಸಿ, ಕಪ್ಪು ಕುದುರೆಯನ್ನೇರಿ ನಾನಾಯುಧಗಳೊಂದಿಗೆ ಹೊರಟು ಮ್ಚೇಚ್ಛರನ್ನೂ, ಅವರಂತೆಯೇ ಆದ ಇತರರನ್ನೂ ನಿಗ್ರಹಿಸಿ, ಧರ್ಮವನ್ನು ಮತ್ತೆ ಸಂಸ್ಥಾಪಿಸುವನು. ಎಲ್ಲೋ ಅಭುಕ್ತ ಮೂಲೆಯಲ್ಲಡಗಿ, ಹೇಗೋ ಜೀವಿಸುತ್ತ ಕಾಲ ಕಳೆಯುವ ಬ್ರಾಹ್ಮಣರನ್ನು ತನ್ನ ಸಮೀಪಕ್ಕೆ ಬರಮಾಡಿಕೊಂಡು, ಅವರು ಯಾವ ವಿಧವಾದ ಉಪದ್ರವಕ್ಕೂ ಒಳಗಾಗದಂತೆ ಏರ್ಪಡಿಸಿ, ಅವರನ್ನು ಸತ್ಕರ್ಮನಿರತರನ್ನಾಗಿ ಮಾಡುವನು. ಅದೇ ಕೃತಯುಗ. ಆಗ ನೂರಕ್ಕೆ ನೂರರಷ್ಟು ಧರ್ಮಾಚಾರ ನಿರತರೇ ವೃದ್ಧಿಯಾಗುವರು. ಧೂಮ್ರವರ್ಣನು ಈ ರೀತಿ ತನ್ನ ಕರ್ತವ್ಯವನ್ನು ನಿರ್ವಹಿಸಿ ಅಂತರ್ಧಾನವನ್ನು ಹೊಂದಿದನು ಎಂದು ಬ್ರಹ್ಮನು ಹೇಳಿ, ನಾಲ್ಕು ಯುಗಗಳಲ್ಲೂ ದೇವದೇವನು ಧರಿಸಿದ ನಾನಾವಿಧ ರೂಪ, ಅವಕ್ಕೆ ಅನುಗುಣಗಳಾದ ಹೆಸರುಗಳು ಇವನ್ನೆಲ್ಲ ವಿವರಿಸಿ ಹೇಳಿದೆನು. ಅವನು ಆಚರಿಸಿದ ಅತ್ಯದ್ಭುತ ಸಾಹಸ ಕರ್ಮಗಳನ್ನಂತೂ ಚೆನ್ನಾಗಿಯೇ ಅರಿತಿರುವೆ. ಇವನ್ನು ತತ್ತ್ವತಃ ಯಾವ ಪ್ರಾಣಿಯೇ ತಿಳಿಯಲಿ ಅದು ಸರ್ವ ಬಂಧನಗಳಿಂದಲೂ ಬಿಡುಗಡೆಯನ್ನು ಹೊಂದುವುದು. ದೇವನು ಇನ್ನೂ ಎಷ್ಟೆಓ ದಿವ್ಯ ರೂಪಗಳನ್ನು ಧರಿಸಿರುವನು, ಅಂತೆಯೇ ಬಗೆ ಬಗೆಯ ಸಾಹಸ ಕರ್ಮಗಳನ್ನೂ ಆಚರಿಸಿರುವನು. ಇವನ್ನೆಲ್ಲ ಹೇಳಲಿಕ್ಕೆ ನನಗೆ ಶಕ್ತಿ ಸಾಲದು. ವೇದಗಳೇ ಆ ವಿಷಯದಲ್ಲಿ ಕುಂಠಿತವಾಗಿರುವಾಗ ಅಲ್ಪಪ್ರಜ್ಞನಾದ ನನ್ನ ಗತಿ ಏನು? ಇನ್ನು ನೀನು ತಪಸ್ಸಿಗೆ ತೆರಳು. ನಾನು ಸೃಷ್ಟಿ ಕಾರ್ಯದಲ್ಲಿ ಉದ್ಯುಕ್ತನಾಗುವೆನು ಎಂದು ಹೇಳಿದುದು. ಬ್ರಹ್ಮನ್! ಭಗವಂತನ ಮಹಿಮೆಯನ್ನು ನೀನು ಎಷ್ಟೆಷ್ಟು ಬಗೆಯಿಂದ ವರ್ಣಿಸಿ ಹೇಳಿದರೂ ನನಗಂತೂ ತೃಪ್ತಿಯಾಗಲೊಲ್ಲದು. ನನ್ನ ಮಾನಸಿಕ ಸಂದೇಹಗಳೆಲ್ಲ ನಿವೃತ್ತಿಯಾದವು. ನಾನು ಪರಮ ಧನ್ಯನಾದೆನು ಎಂದು ಮುಂತಾಗಿ ವ್ಯಾಸರು ಹೇಳಿದುದು. ವ್ಯಾಸರು ಬ್ರಹ್ಮನನ್ನು ಪ್ರಣಮಿಸಿ ಅವನ ಅಪ್ಪಣೆಯಂತೆ ತಪಸ್ಸನ್ನಾಚರಿಸಲಿಕ್ಕಾಗಿ ಪ್ರಶಾಂತ ಬಾತಾವರಣವುಳ್ಳ ಏಕಾಂತ ಪ್ರದೇಶದಲ್ಲಿ ಕುಳಿತು ನಿಷ್ಠೆಯಿಂದ ಏಕಾಕ್ಷರದ ಮಹಾ ಮಂತ್ರವನ್ನು ಹನ್ನೆರಡು ವರ್ಷಗಳ ವರೆಗೆ ಜಪಿಸಲು, ಮಹಾ ಗಣಪತಿಯು ಪ್ರಾದುರ್ಭವಿಸಿದುದು ಎಂದು ಭೃಗುಮಹರ್ಷಿಗಳು ಸೋಮಕಾಂತ ಮಹಾರಾಜನಿಗೆ ತಿಳಿಸಿದುದು.
೧೫೦ನೆಯ ಅಧ್ಯಾಯ
೧೫೧ನೆಯ ಅಧ್ಯಾಯ
೧೫೨ನೆಯ ಅಧ್ಯಾಯ
೧೫೩ನೆಯ ಅಧ್ಯಾಯ
ಮಂತ್ರಿಗಳು ಮುಂದೆ ಮುಂದೆ ಬಂದು ಹೇಮಕಂಠ ರಾಜನು ಪರಿವಾರದೊಂದಿಗೆ ನಿಮ್ಮ ದರ್ಶನಕ್ಕಾಗಿ ಓಡೋಡುತ್ತ ಬರುತ್ತಿರುವನೆಂಬ ಸುದ್ಧಿಯನ್ನು ಸೋಮಕಾಂತ ಮಹಾರಾಜನಿಗೆ ಹೇಳಿದುದು. ತಂದೆ — ಮಗನ ಭೇಟಿ. ದೇವವಿಮಾನದ ಅಪೂರ್ವ ಶೋಭೆಯನ್ನು ಕಂಡು ಹೇಮಕಂಠ, ಅವನ ಪರಿವಾರದವರೆಲ್ಲ ಆನಂದಭರಿತರಾದುದು. ಅದರ ನಡುವೆ ಸುಖವಾಗಿ ಕುಳಿತಿದ್ದ ತಮ್ಮ ದೊರೆ; ಸೋಮಕಾಂಟ ಮಹಾರಾಜನು ದೃಗ್ಗೋಚರನಾದೊಡನೆ ಎಲ್ಲರೂ ರಾಜಭಕ್ತಿ ಪುರಸ್ಸರವಾಗಿ ಪ್ರಣಮಿಸಿದುದು. ತನ್ನ ಪ್ರಿಯ ಕಾಂತೆಯೊಡನೆ ವಿಮಾನದಿಂದ ಕೆಳಕ್ಕಿಳಿದು ಬಂದು ರಾಜನು ಪುತ್ರನನ್ನು ಆಲಿಂಗಿಸಿಕೊಂಡುದು. ಇಬ್ಬರೂ ಆನಂದಾಶ್ರುಗಳನ್ನು ಸುರಿಸಿದುದು. ಕೆಲ ಕಾಲ ತಮ್ಮನ್ನೇ ತಾವು ಮರೆತುದು. “ಸರ್ವಾದಾ ನಾನು ನಿನ್ನನ್ನೇ ಧ್ಯಾನಿಸುತ್ತಲಿದ್ದೆನು, ನನ್ನ ವಂಶಕ್ಕೆ ಭೂಷಣನಾದ ನಿನಗೆ ಸಮಾನನಾದ ಪುತ್ರನು ಯಾರಿಗೂ ಜನಿಸುವುದಿಲ್ಲ” ಎಂದು ರಾಜನೂ, “ನೀನಿಲ್ಲದ್ದರಿಂದ ನನಗೆ ಲೇಶವೂ ಸೌಖ್ಯವಿರಲಿಲ್ಲ. ನಿನ್ನ ವಿಯೋಗದಿಂದ ನನ್ನ ದೇಹವೆಲ್ಲ ಕೃಶವಾಗಿದೆ” ಎಂದು ರಾಣಿಯೂ ಹೇಲಿ ಮಗನನ್ನು ಸಂತೈಸಿದುದು. ನಾಗರಿಕರು ಮುಂದೆ ಬಂದು ರಾಜ — ರಾಣಿಯರನ್ನು ಗೌರವಿಸಿದುದು. ಕೆಲವರು ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿದುದು. ಮತ್ತೆ ಕೆಲವರು ದೂರದಿಂದಲೇ ತಮ್ಮ ಪ್ರಭುವನ್ನು ಸಂದರ್ಶಿಸಿ ಹಿಂದಿರುಗಿ ನಗರಕ್ಕೆ ತೆರಳಿದುದು. “ಭೃಗು ಮಹರ್ಷಿಗಳ ಅನುಗ್ರಹದಿಂದ ಗಣೇಶ ಪುರಾಣವನ್ನು ಕೇಳಿದುದಾಗಿಯೂ ತನ್ನಿಮಿತ್ತ ಪ್ರಬಲವಾದ ರೋಗವನ್ನು ಕಳೆದುಕೊಂಡು ಪ್ರಕೃತ ವಿಮಾನವನ್ನೇರಿ ಶ್ರೀ ಗಣೇಶಧಾಮಕ್ಕೆ ಹೊರಟಿರುವೆನು. ನಿಮ್ಮೆಲ್ಲರನ್ನೂ ನೋಡಬೇಕೆಂದು ಬಯಕೆಯಾಗಲು ಇಲ್ಲಿಗೆ ಬಂದೆನು. ರಾಜ್ಯವು ನಿಷ್ಕಂಟಕವಾಗಿದೆ. ಸಂಪತ್ತಿಗೆ ಯಾವ ಕೊರತೆಯೂ ಇರುವುದಿಲ್ಲ. ಈಗ ನಾನು ಪ್ರಯಾನ ಮಾಡುವೆನು” ಎಂದು ರಾಜನು ಹೇಳಲು, ಅವನ ವಿಯೋಗಕ್ಕಾಗಿ ಎಲ್ಲರೂ ದುಃಖಿಸಿದುದು. ಕೆಲವರಂತೂ ನೆಲದ ಮೇಲೆ ಬಿದ್ದು ಹೊರಳಾಡಿದುದು. ಆಗ ಪ್ರಮುಖರು ಮುಂದೆ ಬಂದು “ರಾಜನ್! ನಮ್ಮನ್ನು ಇಲ್ಲಿಯೇ ಬಿಟ್ಟು ನೀನು ಮಾತ್ರ ದೇವನ ಸನ್ನಿಧಿಗೆ ಹೇಗೆ ಹೋಗುವೆ? ಪುಣ್ಯದ ಮಹಿಮೆಯಿಂದಲಾಗಲಿ, ನಿನ್ನ ಸಂಗಡವಾಗಲಿ ನಮಗೆ ಆ ಸ್ಥಾನಕ್ಕೆ ಬರಲವಕಾಶವಗದಿದ್ದರೆ ನಮ್ಮ ಪ್ರಾಣಗಳನ್ನಾದರೂ ತ್ಯಜಿಸಿ ನಿನ್ನನ್ನು ಅನುಸರಿಸಿ ಬರುವೆವು. ಸತ್ತಮೇಲೆ ನಿನ್ನ ಸಂಗಡ ಬರಲಾಗುವುದೋ, ಇಲ್ಲವೋ ಗೊತ್ತಿಲ್ಲ. ಅಂತೂ ನಿನ್ನನ್ನಗಲಿ ಬದುಕಿರಲಾರೆವು. ಈ ಹತ್ಯಾದೋಷವು ನಿನ್ನ ತಲೆಗೇ ಕಟ್ಟಿದ್ದು. ನಾವಂತೂ ಪುಣ್ಯಶಾಲಿಗಳಲ್ಲವೆಂಬುದು ವಿದಿತವಾದ ವಿಷಯವೇ ಆಗಿದೆ. ಏನೋ, ನಿನ್ನ ಪುಣ್ಯದಿಂದಲಾದರೂ ಆ ದಿವ್ಯ ಸನ್ನಿಧಿಯನ್ನು ಪಡೆಯೋಣವೆಂದಿದ್ದೇವೆ. ಸಂಸಾರದಲ್ಲಿ ಲೇಶವೂ ನೆಮ್ಮದಿ ಇರುವುದಿಲ್ಲ, ವ್ಯರ್ಥವಾಗಿ ಆಯುಷ್ಯಕ್ಷಯಿಸುತ್ತಲಿದೆ. ನಾವು ಇನ್ನು ಎಷ್ಟು ಹೆಚ್ಚು ಕಾಲ ಬದುಕಿದ್ದರೂ ದಿವ್ಯ ಧಾಮವನ್ನು ಪಡೆಯುವಂತಹ ಸಾಧನವನ್ನಂತೂ ಮಾಡಿಕೊಳ್ಳಲಾರೆವು” ಎಂದರು. ಹೇಮಕಂಠನು ಸಹ “ನಿನ್ನ ಪ್ರಿಯಪುತ್ರನನ್ನು ತೊರೆದು ಹೋಗುವೆಯ? ಜನಕ! ನಿನ್ನ ಆಜ್ಞೆಯಿಂದ ಇದುವರೆಗೂ ರಾಜ್ಯವನ್ನು ಪಾಲಿಸಿದೆನೇ ಹೊರತು, ಆಸಕ್ತಿಯಿಂದಲ್ಲ. ನನಗೆ ಈ ರಾಜ್ಯ ಬೇಡ. ಆದ್ದರಿಂದ ನನ್ನನ್ನು ನಿನ್ನ ಸಂಗಡ ಖಂಡಿತ ಕರೆದೊಯ್ಯಲೇ ಬೇಕು” ಎಂದು ಒತ್ತಾಯಪಡಿಸಿದನು. “ದೇವನನ್ನು ಸಂದರ್ಶಿಸುವ ಇಚ್ಛೆ ನಿಮಗಿರಬಹುದಾದರೂ ನಿಮ್ಮನ್ನು ಸಂಗಡ ಅಲ್ಲಿಗೆ ಕರೆದೊಯ್ಯಲು ನಾನು ಸ್ವತಂತ್ರನಲ್ಲವಾದುದರಿಂದ ಕೊನೆಯ ಬಾರಿ ಒಮ್ಮೆ ನೋಡಿ ಹೋಗೋಣವೆಂದು ಇಲ್ಲಿಗೆ ಬಂದೆ” ಎಂದು ಹೇಳಿ ರಾಜನು ದುಃಖಿಸಲು. ದೇವದೂತರು ರಾಜನನ್ನು ವರ್ಣಿಸುತ್ತ “ಎಲ್ಲರನ್ನೂ ಕರೆದುಕೊಂಡೇ ದೇವನ ಬಳಿಗೆ ಹೋಗೋಣವಂತೆ, ದುಃಖಿಸದಿರು” ಎಂದು ರಾಜನಿಗೆ ಸಮಾಧಾನವನ್ನು ಹೇಳಿದರು. ಆಗ ರಾಜನು “ಇವರನ್ನು ಮಾತ್ರವಲ್ಲದೆ ನನ್ನ ನಗರಿಯನ್ನೇ ಕರೆದೊಯ್ದರೆ ನನಗೆ ಬಹಳ ಕೀರ್ತಿಯುಂಟಾಗುವುದು” ಎಂದು ತನ್ನ ಮನೋಗತವನ್ನು ದೂತರಿಗೆ ಅರುಹಿದನು. ಅವರ ಸೂಚನೆಯಂತೆ ತಾನು ಶ್ರೀ ಗಣೇಶಪುರಾಣವನ್ನು ಶ್ರವಣಮಾಡಿ ಗಳಿಸಿದ ಪುಣ್ಯವನ್ನು ಅವರೆಲ್ಲರಿಗೂ ಧಾರೆ ಎರೆದು, ಅವರನ್ನೆಲ್ಲ ಪುಣ್ಯಮೂರ್ತಿಗಳನ್ನಾಗಿ ಮಾಡಿದನು. ನಗರಕ್ಕೆ ನಗರವೇ ವಿಮಾನದಲ್ಲಿ ಕುಳಿತ ಬಳಿಕ ದೇವದೂತರು ಅದನ್ನೇರಿ ಚಾಲನ ಮಾಡಿದರು. ಆ ಪೈಕಿ ಯಾರ ಕೈಗೆ ಪುಣ್ಯ ಧಾರಾಜಲ ಬಿದ್ದಿರಲಿಲ್ಲವೋ ಮತ್ತು ಯಾರು ಕುಹಕಿಗಳಾಗಿದ್ದರೋ ಅವರನ್ನಲ್ಲ ದೂತರು ವಿಮಾನದಿಂದ ಕೆಳಕ್ಕೆ ತಳ್ಳಿದರು. ಅವರು ಊರಿಗೆ ಹೋಗಿ ದೇವಲೋಕಕ್ಕೆ ತೆರಳುತ್ತಿರುವವರನ್ನೆಲ್ಲ ನೋಡಿ, ಅವರು ಮೂರ್ಖರೆಂದೂ ಅವರು ಬಿಟ್ಟುಹೋದ ಭೂಮಿ — ನಾಣ್ಯಗಳನ್ನೆಲ್ಲ ನಾವೇ ಉಪಭೋಗಿಸೋಣವೆಂದೂ ಮಾತನಾಡುತ್ತ ಸಂತೋಷಿಸಿದರು. ವಿಮಾನದಲ್ಲಿ ಕುಳಿತವರೆಲ್ಲ “ದೇವ ಮಯೂರೇಶ! ಜಯಶಾಲಿಯಾಗು” ಎಂದು ಉಚ್ಚ ಸ್ವರ — ಸಂತೋಷಗಳಿಂದ ಜಯಘೋಷವನ್ನು ಮಾಡಿದರು. ಅತಿ ವೇಗ ಗತಿಯಿಂದ ರ್ಹಾಇದ ವಿಮಾನ ಅಲ್ಪಕಾಲದಲ್ಲೇ ದೇವನ ಸನ್ನಿಧಿಯನ್ನು ಸೇರಿತು. ಆಗ ಜನರು ಬಹಳ ಹರ್ಷಗೊಂಡು ರಾಜನ ಪುಣ್ಯವನ್ನು ಕೊಂಡಾಡಿದರು. ದೇವನ ಸನ್ನಿಧಿಯನ್ನು ಹೊಂದಿದವರೆಲ್ಲರೂ ಅವರವರ ಪುಣ್ಯಾನುಗುಣವಾಗಿ ತಕ್ಕ ಸ್ಥಾನಗಳನ್ನು ಪಡೆದರು. ಸೋಮಕಾಂತ ಮಹಾರಾಜನು ದೇವನಲ್ಲಿ ಐಕ್ಯವನ್ನೇ ಹೊಂದಿದನು. ಎಂದು ಹೇಳಿದ ಸೂತರು ಪುರಾಣ ಶ್ರವಣಕ್ಕೆ ದೊರೆಯುವ ಮಹತ್ಫಲವನ್ನು ಹೇಳುವೆನೆಂದು ನುಡಿದುದು.
೧೫೪ನೆಯ ಅಧ್ಯಾಯ
೧೫೫ನೆಯ ಅಧ್ಯಾಯ
ಪರಿಶಿಷ್ಟ