ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಶ್ರೀ ಶಿವರಹಸ್ಯ – ಸಂಪುಟ ೨೦
ಆರಂಭಿಕ ಪುಟ
ಅನುವಾದಕರು: ಶ್ರೀ ಗಂಗಾಧರ ಶಾಸ್ತ್ರಿ ಹೆಚ್.
ವಿಷಯಾನುಕ್ರಮಣಿಕೆ
ಇಪ್ಪತ್ತೈದನೆಯ ಅಧ್ಯಾಯ
ವಿಷ್ಣುವು ಶಿವಧರ್ಮವನ್ನು ಚಿದಂಬರಕ್ಷೇತ್ರದ ಹೇಮಸಭಾಮಧ್ಯದಲ್ಲಿ ನೆರೆದಿದ್ದ ಶೈವಶ್ರೇಷ್ಠರಿಗೆಲ್ಲಾ ಉಪದೇಶಿಸುವುದು. ಒಬ್ಬ ಬ್ರಾಹ್ಮಣನು ಶಿವಪೂಜಾರ್ಥವಾಗಿ ಬಿಲ್ವಪತ್ರೆಗಳನ್ನು ವೇಷಾಂತರದಿಂದ ಪರಮೇಶ್ವರನೇ ಅಪಹರಿಸಿ ಅವನ ಭಕ್ತಿಯನ್ನು ಪರೀಕ್ಷಿಸಿ ಅವನಿಗೆ ಮುಕ್ತಿಯನ್ನಿತ್ತ ಇತಿಹಾಸ, ಹಾಗೆಯೇ ಭಸ್ಮನಿಯಮದಿಂದಿದ್ದ ಭಕ್ತನ ಭಸ್ಮವನ್ನಪಹರಿಸಿ, ಅದರಿಂದ ಅವನನ್ನು ಪರೀಕ್ಷಿಸಿ ಅವನನ್ನುದ್ಧರಿಸಿದ ಕಥೆ. ಒಮ್ಮೆ ಅಕಸ್ಮಾತ್ತಾಗಿ ಬಂದ ಅಗಸ್ತ್ಯಮಹಾಮುನಿಯನ್ನು ನೋಡಿ ಋಷಿಗಳೆಲ್ಲರೂ ಸಂಸಾರ ದುಃಖದಿಂದ ಪಾರಾಗುವ ಉಪಾಯವನ್ನು ಪ್ರಶ್ನಿಸಿದುದು. ವಿದರ್ಭ ರಾಜಕುಮಾರಿಯೊಬ್ಬಳ ವೃತ್ತಾಂತ. ಆಕೆಗೆ ಜನ್ಮಾಂತರದಲ್ಲಿ ಬಂದಿದ್ದ ಶಾಪವಿಚಾರ. ಆಕೆಗೆ ಶಿವಸಾಯುಜ್ಯವು ದೊರೆತ ವಿಚಾರ. ಲಕ್ಷ್ಮೀಸಮೇತನಾದ ಮಹಾವಿಷ್ಣುವಿಗೆ ಚಿದಂಬರೇಶ್ವರ ದರ್ಶನಾನಂತರ ಕಾಶಿಕ್ಷೇತ್ರವಾಸವು ಲಭಿಸಿದುದು. ಜಾತಾಶೌಚ ಮೃತಾಶೌಚಗಳಲ್ಲಿಯೂ, ಸ್ತ್ರೀಯರು ರಜಸ್ವಲೆಯರಾದಾಗಲೂ ಶಿವಲಿಂಗಪೂಜಾನಿರ್ವಹಣಕ್ರಮ ನಿರೂಪಣೆ.
ಇಪ್ಪತ್ತಾರನೆಯ ಅಧ್ಯಾಯ
ಕುಂಭಘೋಣಕ್ಷೇತ್ರ ಮಹಿಮೆ – ಶಿವಪ್ರದಕ್ಷಿಣೆ, ಶಿವನಮಸ್ಕಾರ ಇವುಗಳನ್ನು ನಡೆಸುವ ವಿಧಾನ. ಬಿಲ್ವಪತ್ರೆಯ ಪುಡಿಯಿಂದಲೂ ಶಂಕರನ್ನು ಪೂಜಿಸಬಹುದೆಂಬ ವಿಚಾರ. ಶುದ್ಧಾಚಮನಮಾಡುವಾಗ ಶಿವ, ಶಂಭು, ಮಹೇಶ ಎಂಬ ನಾಮತ್ರಯಗಳನ್ನು ಚ್ಚರಿಸಬೇಕೆಂಬ ನಿಯಮ. ಪ್ರತಿಮಾಸದಲ್ಲಿಯೂ ಸ್ನಾನಕಾಲದಲ್ಲಿ ಉಚ್ಚರಿಸುವ ಬೇರೆ ಬೇರೆ ಮಂತ್ರಗಳು (ಶ್ಲೋಕಗಳು) ಬೇರೆ ಬೇರೆ ಋತುಗಳಲ್ಲಿ ಬೇರೆ ಬೇರೆಯಾದ ಪುಷ್ಪಗಳಿಂದ ಶಿವನನ್ನು ಅರ್ಚಿಸುವ ವಿಧಾನ. ಶಿವಲಿಂಗಕ್ಕೆ ಘೃತಕಂಬಳವನ್ನು ನಡೆಸುವ ವಿಧಾನ. ನರ್ಮದಾಲಿಂಗಮಹಿಮೆ – ಶಿವಲಿಂಗಪ್ರತಿಷ್ಠಾಮಹಿಮೆ. ನಿತ್ಯಶಿವಪೂಜಾ, ಫಲನಿರೂಪಣೆ.
ಇಪ್ಪತ್ತೇಳನೆಯ ಅಧ್ಯಾಯ
ಮಧ್ಯಾರ್ಜುನಕ್ಷೇತ್ರವರ್ಣನೆ – ದಧೀಚಿಮಹರ್ಷಿಯಿಂದ ಉಕ್ತವಾದ ಶಿವಕವಚ ಸ್ತೋತ್ರಗಳು. ಅದರ ಪಠನದಿಂದ ಲಭಿಸುವ ಫಲನಿರೂಪನೆ, ಪಾರ್ಥಿವ ಲಿಂಗಮಹಿಮೆ. ಪಾರ್ಥಿವಲಿಂಗ ಪೂಜಾವಿಧಿ — ಶಿವಪಂಚಾಕ್ಷರನ್ಯಾಸಾದಿಗಳು. ಭಸ್ಮಧಾರಣಫಲ — ಶಿವಲಿಂಗಾರ್ಚನೆಗೆ ಭಸ್ಮಧಾರಿಯೇ ಅಧಿಕಾರಿಯೆಂಬ ವಿಚಾರ. ಬಾಣಲಿಂಗಲಕ್ಷಣ, ಬಾಣಲಿಂಗಾರ್ಚನಾಫಲ. ಕಾಶೀಕ್ಷೇತ್ರ ಮಹಿಮೆ. ದಧೀಚಿಯಿಂದ ಶಿವಮಹಿಮೆಯ ವರ್ಣನೆ.
ಇಪ್ಪತ್ತೆಂಟನೆಯ ಅಧ್ಯಾಯ
ಶಿವಾರ್ಚನೆಯ ಮಹಿಮೆ. ಗಜಾಸುರನು ದೇವತೆಗಳನ್ನು ನಾನಾರೀತಿ ಹಿಂಸಿಸಿದುದು. ಹಿಮವಂತನೊಡನೆ ದೇವತೆಗಳು ಒಂದು ವರ್ಷಪರ್ಯಂತ ಪಾರ್ಥಿವಲಿಂಗಾರ್ಚನೆಮಾಡುವುದು. ಶಂಕರನ ಪ್ರತ್ಯಕ್ಷ. ದೇವತೆಗಳು ಮಹಾದೇವನನ್ನು ಸ್ತುತಿಸುವುದು. ದೇವತೆಗಳ ಕೋರಿಕೆಯಂತೆ ಶಿವನು ತ್ರಿಶೂಲವನ್ನು ಕಳುಹಿಸಿ ಗಜಾಸುರನನ್ನು ನಾಶಗೊಳಿಸುವುದು ಮೃತ್ತಿಕಾ ಲಿಂಗಗಳ ಅಂಗುಲಮಾನನಿರೂಪಣೆ. ಪುಣ್ಯಮೂರ್ತಿಯೆಂಬ ಶೈವರಾಜನ ವಿಚಾರ. ಆತನು ಆಕಾಲಮರಣಹೊಂದಿದ ಒಬ್ಬ ಬ್ರಾಹ್ಮಣಪುತ್ರನನ್ನು ಅಶೈವನೊಬ್ಬನ ವಧೆಯಿಂದ ಬದುಕಿಸುವುದು. ಶಿವಾರ್ಚಕರೇ ಧನ್ಯರೆಂದು ಪ್ರತಿಪಾದಿಸುವುದು. ಅಗಸ್ತ್ಯರ ಉಪದೇಶದಂತೆ ಸನಾತನನೆಂಬ ರಾಜನು ಮಧ್ಯಾರ್ಜುನ ಕ್ಷೇತ್ರದಲ್ಲಿ ತಪಸ್ಸನ್ನಾಚರಿಸಿ ಅದರಿಂದ ಕಾಸೀಕ್ಷೇತ್ರವಾಸವನ್ನು ಪಡೆಯುವುದು. ಶಿವಾರ್ಚನೆಯಿಂದ ಮುಕ್ತಿಯನ್ನು ಪಡೆದ ಬಾಲಕನೊಬ್ಬನ ಇತಿಹಾಸ. ಮಧ್ಯಾರ್ಜುನಕ್ಷೇತ್ರದ ಮಹಿಮೆ. ಮಧ್ಯಾರ್ಜುನ ಕ್ಷೇತ್ರವಾಸಿಗಳಿಗೆ ಕಾಶೀಕ್ಷೇತ್ರವು ಲಭಿಸುವ ವಿಚಾರ.
ಇಪ್ಪತ್ತೊಂಬತ್ತನೆಯ ಅಧ್ಯಾಯ
ಕಾಶೀ ವಿಶ್ವೇಶ್ವರಲಿಂಗಮಹಿಮಾ. ಜ್ಞಾನವಾಪೀ ಮಹಿಮಾ. ಪಂಚಕ್ರೋಶ ಯಾತ್ರಾಫಲ. ಕಾಶೀವಾಸದಿಂದ ಲಭಿಸುವ ಸುಕೃತವಿಚಾರ. ಕಾಶೀ ಮರಣದಿಂದ ಮುಕ್ತಿದೊರೆಯುವ ವಿಚಾರ. ಅನ್ನ ಪೂರ್ಣಾಷ್ಟೋತ್ತರ ಶತನಾಮಸ್ತೋತ್ರ. ಶಿವಲಿಂಗಾರ್ಚನವಿಧಿ – ಶಿವಲಿಂಗದಾನಮಂತ್ರ, ಕಾರ್ತಿಕ ಶುದ್ಧ ಚತುರ್ದಶಿ ತಿಥಿಯಲ್ಲಿ ನಡೆಸುವ ಶಿವಾರ್ಚನೆಯ ಫಲ. ಕಾಶೀ ಕ್ಷೇತ್ರದಲ್ಲಿ ಶಿವಲಿಂಗಾರ್ಚನೆಮಾಡುತ್ತಿರುವ ವಿಷ್ಣ್ವಾದಿದೇವತಾಂತರಗಳನ್ನು ಪರಶಿವನೇ ಸಾಕ್ಷಾತ್ತಾಗಿ ಪಾರ್ವತಿಗೆ ವಿವರಿಸಿ ಹೇಳುವುದು. ಕಾಶೀ ವಿಶ್ವೇಶ್ವರಲಿಂಗವು ಸ್ವಪ್ರಕಾಶಕವೆಂಬುದನ್ನು ಸ್ಥಿರಪಡಿಸುವುದು.