ಶ್ರೀ ತ್ರಿಪುರಾರಹಸ್ಯ – ಮಾಹಾತ್ಮ್ಯಖಂಡ (ಅಧ್ಯಾಯ ೨೧ – ೪೦)
ವಿಷಯಾನುಕ್ರಮಣಿಕೆ
ಮುನ್ನುಡಿ
21. ವೀರವ್ರತನ ಏಟಿನಿಂದ ಮೂರ್ಛೆಗೊಂಡಿದ್ದ ಕಾಮನನ್ನು ದೂತರು ಲಕ್ಷ್ಮಿಯ ಸಮೀಪಕ್ಕೆ ತಂದು ನಡೆದ ಸಮಾಚಾರವನ್ನು ಹೇಳಿದರು; ಲಕ್ಷ್ಮಿಯು ತ್ರಿಪುರಾದೇವಿಯನ್ನು ಧ್ಯಾನಿಸಿ ಕಾಮನನ್ನು ಅಮೃತಮಯವಾದ ದೃಷ್ಟಿಯಿಂದ ನೋಡಲು ಅವನು ಮೂರ್ಛೆತಿಳಿದೆದ್ದನು; ವೀರವ್ರತನು ಶಿವಭಕ್ತನಾದುದರಿಂದ ಕಾಮನಿಗೆ ಸೋಲುಂಟಾಯಿತೆಂದು ತಾಯಿಯಿಂದ ತಿಳಿದು, ಕಾಮನು ತಾಯಿಯ ಬುದ್ಧಿವಾದದಂತೆ ಶಿವನನ್ನು ಪ್ರಾರ್ಥಿಸದೆ ಅವನನ್ನೂ ಜಯಿಸುವೆನೆಂದನು; ಆಗ ತ್ರಿಪುರಾದೇವಿಯನ್ನು ಲಕ್ಷ್ಮಿಯು ಪ್ರಾರ್ಥಿಸಲು, ಗೌರಿಯು ಅಲ್ಲಿಗೆ ಬಂದಳು; ಶಿವನನ್ನು ಪ್ರಾರ್ಥಿಸೆಂದು ಗೌರಿಯ ಬುದ್ಧಿವಾದವನ್ನು ಕಾಮನು ತಿರಸ್ಕರಿಸಲು, ಕಾಮನನ್ನು ಶಿವನಿಂದ ಬೂದಿಯಾಗೆಂದು ಶಪಿಸಿದಳು. ಕುಪಿತಳಾದ ಲಕ್ಷ್ಮಿಯು ಗೌರಿಯನ್ನು ದಕ್ಷಯಾಗದಲ್ಲಿ ಬೂದಿಯಾಗೆಂದು ಶಪಿಸಿದಳು; ಹೀಗೆ ಶಾಪಪ್ರತಿಶಾಪಗಳಾಗಿ, ಲಕ್ಷ್ಮೀ ಗೌರೀದೇವಿಯರಿಗೆ ಯುದ್ಧವಾಗಿ, ಗೌರಿಯು ಮೂರ್ಛಿತಳಾಗಲು, ಕಡೆಗೆ ಬ್ರಹ್ಮಾ, ವಿಷ್ನು, ಮಹೇಶ್ವರರು ಬಂದು ಕಳುಹಿಸಿದ ಸರಸ್ವತಿ ದೇವಿಯಿಂದ ಶಾಪವಿಮೋಚನೆಯು ಸೂಚಿತವಾಗಿ ಇಬ್ಬರಿಗೂ ಸಮಾಧಾನವು ಏರ್ಪಟ್ಟಿತು;
22. ಇವರ ಶಾಪಗಳಿಗೆ ಅನುಸಾರವಾಗಿ ಲಕ್ಷ್ಮಿದೇವಿಗೆ ಪತಿವಿರಹ ದುಃಖ ಮೃತಿಗಳೂ, ಗೌರೀದೇವಿಗೂ ಅವು ಹೇಗೆ ಸಂಭವಿಸಿದುವೆಂದು ಪರಶುರಾಮನು ದತ್ತಾತ್ರೇಯನನ್ನು ಕೇಳಿದನು; ಬೃಂದಾ ಮತ್ತು ಭೂದೇವಿಯರು ವಿಷ್ಣುವನ್ನು ಪೂಜಿಸಿ ಒಲಿಸಿಕೊಂಡರು; ಲಕ್ಷ್ಮಿಗೆ ಅಹಸನೆಯಾಯಿತು; ವಿಷ್ಣುವು ಗುಟ್ಟಾಗಿ ಅವರೊಡನೆ ವಿಹರಿಸುತ್ತಿದ್ದುದನ್ನು ಸರಸ್ವತಿಯ ಮನೆಯಿಂದ ಹಿಂತಿರುಗಿದ ಲಕ್ಷ್ಮಿಯು ಬಂದು ಕಂಡು ವಿಷ್ಣುವನ್ನು ಬಿಟ್ಟುಹೋದಳು; ಲಕ್ಷ್ಮಿಯು ದುಃಖದಿಂದ ಕರಗಿ ಪದ್ಮಾನದಿಯಾಗಿ ಹರಿದಳು; ಬ್ರಹ್ಮನ ಸಭೆಯಲ್ಲಿ ಸರಸ್ವತಿಯು ಕಚ್ಛಪೀ ವೀಣೆಯಲ್ಲಿ ನುಡಿಸಿದ ರಾಗಗತಿಯನ್ನು ನಾರದನು ಕಲಿಯುತ್ತಿದ್ದಾಗ ಅಪಸ್ವರವನ್ನು ನುಡಿಸಲು ಪದ್ಮಾನದಿಯು ನಕ್ಕಳು; ಅದರಿಂದ ಕೋಪಗೊಂಡ ನಾರದನ ಶಾಪದಿಂದ ಆ ನದಿಯ ನೀರೆಲ್ಲವೂ ಬತ್ತಿಹೋಯಿತು; ಭಗೀರಥನು ಗಂಗಾನದಿಯನ್ನು ಕರೆದುಕೊಂಡು ಹೋಗುವಾಗ ಅದು ಪದ್ಮಾನದೀ ಪಾತ್ರದಲ್ಲಿ ಪ್ರವಹಿಸಿತು; ಇದರಿಂದ ಶಾಪವಿಮೋಚನೆಯಾಗಲು ಪದ್ಮಾನದಿಯು ಬಹುದೂರದ ಮೇಲೆ ಬೇರೆಯಾಗಿ ಹರಿಯಿತು; ಸಂಗಮದ ತೀರ್ಥದಲ್ಲಿ ಹೇಗೋ ಹಾಗೆ ವಿಭಾಗ ತೀರ್ಥದಲ್ಲಿ ಸ್ನಾನವು ಸದ್ಗತಿಪ್ರದವು; ಗಂಗಾವತರನದ ಕಥೆಯನ್ನು ನಾರದನು ಪದ್ಮಾನದೀದೇವಿಗೆ ಹೇಳಿದನು; ವಾಷ್ಕಲಿ ಎಂಬ ದಾನವರಾಜನ ತಪಸ್ಸು, ಬ್ರಹ್ಮನ ವರ, ಧರ್ಮಾಚರಣೆಗಳಿಂದ ತ್ರಿಲೋಕಾಧಿಪತ್ಯ, ಇಂದ್ರಜಯ, ವಿಷ್ಣುವು ವಾಮನನಾಗಿ ಬಂದು ಮೂರಡಿ ನೆಲವನ್ನು ಬೇಡಿದುದು; ಭಾರ್ಗವ ಬೃಹಸ್ಪತಿಯು ಬೇಡವೆಂದರೂ ದಾನವೇಶನು ದಾನಮಾಡಿದುದು; ವಾಮನನು ತ್ರಿವಿಕ್ರಮನಾಗಿ ಎರಡು ಹೆಜ್ಜೆಗಳಿಂದ ಭೂಮ್ಯಾಕಾಶಗಳನ್ನು ಆಕ್ರಮಿಸಿ ಮೂರನೆಯ ಹೆಜ್ಜೆಯಿಂದ ಅವನನ್ನು ಮೆಟ್ಟಿ ಮೋಕ್ಷವನ್ನು ಕೊಟ್ಟನು; ಆಗ ಎರಡನೆಯ ಹೆಜ್ಜೆಯ ಆಂಗುಷ್ಠದಿಂದ ಬ್ರಹ್ಮಾಂಡಕಟಾಹವು ಭಿನ್ನವಾಗಿ ಗಂಗಾ ಪ್ರವಾಹ ಬಂದಿತು. ಬ್ರಹ್ಮನು ಕಮಂಡಲುವಿನಲ್ಲಿ ಅದನ್ನು ಹಿಡಿದಿಡಲು, ಇಂದ್ರನು ಅದನ್ನು ಸ್ವರ್ಗಕ್ಕೆ ತಂದನು; ಸಗರಪುತ್ರರ ಸದ್ಗತಿಗಾಗಿ ಭಗೀರಥನ ತಪಸ್ಸಿನಿಂದ ಭೂಮಿಗೆ ಗಂಗಾ ಪ್ರಾಪ್ತಿ; ಗಂಗಾ ಸಂಗದಿಂದ ಪದ್ಮಾ ಶಾಪಮೋಚನೆಯಾಗಿ ವಿಷ್ನುಸಮಾಗಮ:
23. ಗೌರೀದೇವಿಯ ಕಥೆ; ಭಸ್ಮಾಸುರನ ತಪಸ್ಸಿಗೆ ಮೆಚ್ಚಿ ಈಶ್ವರನು ವರವನ್ನು ಕೊಡಲು. ಅದರ ಪರೀಕ್ಷೆಗಾಗಿ ಶಿವನ ತಲೆಯ ಮೇಲೆಯೇ ಕೈಯಿಟ್ಟು ನೋಡಲು ಬರಲು, ಈಶ್ವರನು ಓಡಿ ಅಂತರ್ಧಾನ ಹೊಂದಿದನು; ವಿಷ್ಣುವು ಭಸ್ಮಾಸುರನನ್ನು ಕೊಂದನು; ದಕ್ಷನ ತಪಸ್ಸಿಗೆ ಮೆಚ್ಚಿ ಗೌರಿಯು ಅವನ ಮಗಳಾಗಿ, ಉಮಾ, ದಾಕ್ಷಾಯಣೀ ಎನ್ನಿಸಿಕೊಂಡು, ಶಿವನನ್ನು ಮದುವೆಯಾದಳು; ಸಭೆಗೆ ಹೆಮ್ಮೆಯಿಂದ ಬಂದ ದಕ್ಷನನ್ನು ಶಿವನು ಗೌರವಿಸದಿರಲು, ದಕ್ಷನು ಯಾಗಕ್ಕೆ ಶಿವನನ್ನು ಕರೆಯಲಿಲ್ಲ; ಉಮೆಯು ತಂದೆಯ ಯಾಗಕ್ಕೆ ಹೋಗಿ, ಶಿವನಿಂದೆಯನ್ನು ಕೇಳಿ, ಯಾಗದ ಅಗ್ನಿಯಲ್ಲಿ ದೇಹವನ್ನು ಬಿಟ್ಟಳು; ಪರಾ ಶಕ್ತಿಯು ಗಂಗೆಯಾದ ಕಥೆ; ತ್ರಿಪುರಾದೇವಿಯೇ ಭಕ್ತಾನುಗ್ರಹಕ್ಕಾಗಿ ತ್ರಿಪಥಗಾ ಎನ್ನಿಸಿಕೊಂಡಿದಾಳೆ
24. ಪರಶುರಾಮನು ದತ್ತಗುರುವನ್ನು ಕುರಿತು ಮಾನವರಲ್ಲಿ ಯಾಗಾಚರಣೆಯು ಹೇಗೆ ರೂಢಿಗೆ ಬಂದಿತು? ಕಾಮನು ಶಂಕರನನ್ನು ಹೇಗೆ ಜಯಿಸಿದನು? ಅವನನ್ನು ಶಂಕರನು ಹೇಗೆ ದಹಿಸಿದನು? ಎಂದು ಕೇಳಿದನು; ಗುರುವು ಹೇಳಿದನು; ಮಾನವರು ನಿಷ್ಕಾಮರಾಗಿರುವುದರಿಂದ ದೇವತೆಗಳಿಗೆ ಅಧೀನರಾಗಿಲ್ಲವು. ವೃಷ್ಟಿಯು ಸಕಾಲದಲ್ಲಿ ಎಲ್ಲೆಡೆಯಲ್ಲೂ ತಾನಾಗಿಯೇ ಸ್ವತಂತ್ರವಾಗಿ ಆಗುತ್ತಿರುವುದರಿಂದ ಮಾನವರೂ ಸ್ವತಂತ್ರರಾಗಿದಾರೆ. ವೀರವ್ರತನು ಇಂದ್ರನನ್ನು ದೇವತೆಗಳನ್ನೂ ಬಿಟ್ಟಮೇಲೆ ಅವನು ಬದುಕಿರುವವರೆಗೆ ಇಂದ್ರಾದಿಗಳು ಸ್ನೇಹದಿಂದ ಇದ್ದರು. ಆಮೇಲೆ ಬ್ರಹ್ಮನಲ್ಲಿ ಮೊರೆಯಿಡಲು, ಅವನು ವೃಷ್ಟ್ಯಾಧಿಪತ್ಯವನ್ನು ಇಂದ್ರನಿಗೆ ಕೊಟ್ಟು ಅದಕ್ಕಾಗಿ ಮಾನವರು ಯಾಗಮಾಡಬೇಕಾಗಿ ಬಂದು, ದೇವತೆಗಳಿಗೆ ಅಧೀನರಾಗಿರುವಂತೆ ಮಾಡಿದನು; ಯಾಗಾಚರಣೆಯು ರೂಢಿಗೆ ಬಂದಿತು; ಕಾಮನು ಸರ್ವವಿಜಯವನ್ನು ಆಶಿಸಲು ಲಕ್ಷ್ಮಿಯು ತ್ರಿಪುರಾದೇವಿಯ ಸೌಭಾಗ್ಯಾಷ್ಟೋತ್ತರವನ್ನು ಉಪದೇಶಿಸಿದಳು; ಮಂದರಾಚಲದ ಗುಹೆಯಲ್ಲಿ ಕಾಮನ ತಪಸ್ಸು, ತ್ರಿಪುರಾದೇವಿಯು ಪ್ರಸನ್ನಳಾಗಿ ಆ ಅಷ್ಟೋತ್ತರದಲ್ಲಿರುವ ಪಂಚದಶಾಕ್ಷರಿಯ ಸೌಭಾಗ್ಯ ವಿದ್ಯೆಯನ್ನು ಸ್ವಪ್ನದಲ್ಲಿ ಉಪದೇಶಿಸಿದಳು; ಅದರಿಂದ ಅವನು ಸಿದ್ಧಿಯನ್ನು ಪಡೆದ ಬಗೆ;
25. ತ್ರಿಪುರಾಮೂರ್ತಿಯ ಸ್ವರೂಪ ಧ್ಯಾನದಿಂದ ದೇವಿಯು ಪ್ರತ್ಯಕ್ಷಳಾದುದು; ಕಾಮನು ಸ್ತೋತ್ರಮಾಡಿದುದು; ಸೌಭಾಗ್ಯ ನವರತ್ನ ಸ್ತೋತ್ರದ ಮಹಿಮೆ; ಕಾಮನು ಆಪ್ತಕಾಮನಾಗಿ ಏನನ್ನೂ ಆಶಿಸದಿರಲು, ಅವನ ಮೊದಲಿನ ಆಶೆಯಂತೆ ಸರ್ವವಿಜಯಿತ್ವವನ್ನು ಪಡೆಯಲು, ದೇವಿಯು ತನ್ನ ಆಯುಧದಿಂದ ಧನುರ್ಭಾಣಗಳನ್ನು ಹೊರಹೊಮ್ಮಿಸಿ ತೆಗೆದುಕೊಟ್ಟಳು; ಅವನು ಸರ್ವವಿಜಯಕ್ಕೆ ಹೊರಟನು;
26. ಪರಶುರಾಮನ ಪ್ರಾರ್ಥನೆಯಂತೆ ಗುರುವು ಸೌಭಾಗ್ಯಾಷ್ಟೋತ್ತರವನ್ನು ಉಪದೇಶಿಸಿದನು; ಅದರಿಂದ ಪಾಠ, ಹವನ, ಶ್ರೀಚಕ್ರಾರ್ಚನೆ, ಬ್ರಾಹ್ಮಣ ಸುವಾಸಿನೀ ಭೋಜನದಾನಗಳನ್ನು ಮಾಡಬೇಕು; ಮೊದಲಿನ ಕಥೆಯನ್ನು ಮುಂದುವರಿಸಿದುದು; ಪತಿನಿಂದಾಶ್ರವಣದಿಂದ ದೇಹತ್ಯಾಗಮಾಡಿ ಆಕಾಶರೂಪದಲ್ಲಿದ್ದ ಗೌರಿಯನ್ನು ಹಿಮವಂತನು ಆರಾಧಿಸಿದನು; ವಾಮದೇವನ ಉಪದೇಶದಿಂದ ತ್ರಿಪುರಾದೇವಿಯಲ್ಲಿ ಭಕ್ತನಾಗಿರುವುದನ್ನು ನಾರದನು ಶ್ಲಾಘಿಸಿ, ಗೌರೀ ದೇವಿಯಿಂದ ಪುತ್ರೀಪ್ರಾಪ್ತಿಯಾಗುವುದೆಂದು ತಿಳಿಸಿದನು; ಗೌರೀದೇವಿಯ ಕಥೆಯನ್ನು ಹೇಳಿದನು;
27. ತಾರಕಾಸುರನು ತಪಸ್ಸಿನಿಂದ ಜಗತ್ಸೃಷ್ಟಿಸಾಮರ್ಥ್ಯವನ್ನೂ ಪಡೆದು, ಬ್ರಹ್ಮಾಂಡಗಳನ್ನೂ ವೇದಗಳನ್ನೂ ಇಂದ್ರ ಬ್ರಹ್ಮಾದಿಗಳನ್ನೂ ಸೃಷ್ಟಿಸಿ ಅವರಿಂದ ಸೇವಿಸಲ್ಪಡುತ್ತಾ, ಮದೋದ್ಧತನಾಗಿ, ಸ್ವಾಧೀನರಾಗದಿರುವ ಬ್ರಹ್ಮಾದಿಗಳನ್ನು ಶರೆಯಲ್ಲಿಟ್ಟನು, ಶಚಿಯನ್ನೂ ಪಡೆಯಲು ದೂತನನ್ನು ಕಳುಹಲು, ಅವಳು ತನಗಿಂತ ಅಧಿಕಳಾದ ಲಕ್ಷ್ಮಿಯನ್ನು ಪಡೆಯ ಹೇಳಿದಳು; ಲಕ್ಷ್ಮೀ ವಿಷ್ಣುಗಳು ಯುದ್ಧದಲ್ಲಿ ಪರಾಜಿತರಾಗಿ ಅಂತರ್ಧಾನವಾದರು; ಶಚಿಯು ಗುರುವಿನ ಉಪದೇಶದಂತೆ ಗೌರೀದೇವಿಯನ್ನು ಪ್ರಾರ್ಥಿಸಲು, ಅವಳು ಪ್ರತ್ಯಕ್ಷಳಾಗಿ ತಾರಕಾಸುರನೊಡನೆ ಯುದ್ಧಮಾಡಿ, ತನ್ನ ಕೋಪದಿಂದ ಹುಟ್ಟಿದ ಮಹಾಕಾಳಿಯು ತಾರಕಾಸುರನನ್ನು ವಧಿಸಿದಳು; ಇಂತಹ ಗೌರಿಯನ್ನು ಭಜಿಸಿ ಸಿದ್ಧಿಯನ್ನು ಪಡೆ ಎಂದು ನಾರದನು ಹೇಳಿ ಹೋದನು;
28. ಪರಶುರಾಮನಿಗೆ ಗುರುವು ಗೌರಿಯ ಅಷ್ಟೋತ್ತರನಾಮವನ್ನು ಹೇಳಿದನು; ಹಿಮವಂತನಿಗೆ ಗೌರಿಯು ಪ್ರತ್ಯಕ್ಷಳಾಗಲು ಅವನ ಕೋರಿಕೆಯಂತೆ ತಾನು ಜನ್ಮಗ್ರಹಣ ಮಾಡೆನೆನಲು, ಹಿಮವಂತನು ಒಂದುನೂರು ವರ್ಷಗಳವರೆಗೆ ಪುನಃ ಘೋರ ತಪಸ್ಸನ್ನು ಮಾಡಿದನು; ಆ ತಪೋಜ್ವಾಲೆಯಿಂದ ನೊಂದ ಬ್ರಹ್ಮಾ, ವಿಷ್ಣು, ಮುಂತಾದವರೂ ಪ್ರಾರ್ಥಿಸಲು, ಜಗತ್ಕಾರ್ಯವು ಮುಂದುವರಿಯುವುದಕ್ಕಾಗಿಯೂ, ತ್ರಿಪುರಾದೇವಿಯ ಉದ್ದೇಶದಂತೆಯೂ ಗೌರಿಯು ಹಿಮವಂತನ ಮಗಳಾಗಿ ಹುಟ್ಟಿದಳು; ಆದರೆ ಸ್ವಸ್ವರೂಪ ವಿಸ್ಮೃತಿಯಾಗಿರಲೆಂದು ಶಪಿಸಿದಳು;
29. ಗೌರೀದೇವಿಯು ದಿವ್ಯರೂಪದಿಂದ ಹುಟ್ಟಿದರೂ ಹಿಮವಂತನ ಕೋರಿಕೆಯಂತೆ ಪ್ರಾಕೃತಹಿಶುವಿನಂತೆ ಆದಳು; ಮಂಗಳ ಕಾರ್ಮಗಳಾದವು; ಅವಳು ದೊಡ್ಡವಳಾಗಲು ಗರ್ಗಾಚಾರ್ಯನ ಉಪದೇಶದಂತೆ ಅವಳನ್ನು ಶಿವನಿಗೆ ವಿವಾಹ ಮಾಡಿಕೊಡಲು ನಿಶ್ಚಯವಾಯಿತು; ಆಮೇಲೆ ನಾರದನು ಬಂದು ಅವಳನ್ನು ವಿಷ್ಣುವಿಗೆ ಕೊಡುವುದು ಮೇಲೆನ್ನಲು ಹಿಮವಂತನು ಶಾಪದ ಮಹಿಮೆಯಿಂದ ಹಿಂದಿನದೆಲ್ಲವನ್ನೂ ಮರೆತು ಒಪ್ಪಿದನು ನಾರದನು ಹಿಂತಿರುಗಿದನು;
30. ತಂದೆಯ ಈ ನಿಶ್ಚಯವನ್ನು ಒಪ್ಪದೆ ಪಾರ್ವತಿಯು ಯಾರಿಗೂ ತಿಳಿಸದೆ ಅರಮನೆಯನ್ನು ಬಿಟ್ಟು ಹೊರಟು ನಾಲ್ಕುಜನ ಸಖಿಯರೊಡನೆ ಕಾಡಿನಲ್ಲಿ ಗಂಗಾತೀರದಲ್ಲಿ ತ್ರಿಪುರಾಧ್ಯಾನದಲ್ಲಿದ್ದಳು; ಜ್ಞಾನಕಲಿಕಾ ಸ್ತೋತ್ರಾ; ತ್ರಿಪುರಾದೇವಿಯು ಪ್ರಸನ್ನಳಾಗಿ ಇಷ್ಟಾರ್ಥಸಿದ್ಧಿಯನ್ನು ಕರುಣಿಸಿದಳು;
31. ಪಾರ್ವತಿಯು ಹೊರಟುಹೋದಮೇಲೆ ಹಿಮವಂತನು ದುಃಖಿತನಾಗಿ ಮಗಳನ್ನು ಹುಡುಕುತ್ತಾ ಹೆಜ್ಜೆಗಳ ಗುರುತಿನ ಮೇಲೆ ಬಂದು ಪಾರ್ವತಿಯನ್ನು ಕಂಡನು; ತನ್ನ ನಿಶ್ಚಯಕ್ಕೆ ವಿರೋಧವನ್ನು ಕಂಡು ತಂದೆಯು ವಾತ್ಸಲ್ಯದಿಂದ ಮಗಳ ನಿಶ್ಚಯವನ್ನು ಒಪ್ಪಿದನು: ನಾರದನು ಅಲ್ಲಿಗೆ ಬರಲು ಮಗಳ ನಿಶ್ಚಯವನ್ನು ತಿಳಿಸಿದನು; ಕೋಪಗೊಂಡ ನಾರದನ ಅಪ್ಪಣೆಯಂತೆ ವಿಜಯಾದಿಗಳು ಪರ್ವತ ರಾಜನನ್ನು ಬಂಧಿಸಿ, ಗೌರಿಯನ್ನೂ ಹಿಡಿದು ಕರೆದುಕೊಂಡು ಹೋಗಲು ಬರಲು, ತಾಯಿಯನ್ನೂ ಮಗಳನ್ನೂ ಪುರೋಹಿತನಾದ ಕಾಶ್ಯಪನು ಸಮಾಧಾನಪಡಿಸಿದನು;
32. ಕಾಶ್ಯಪನು ಗೌರಿಯ ಹಿಂದಿನ ತಪಸ್ಸೇ ಮುಂತಾದುದನ್ನು ತಿಳಿಸಲು; ಪೂರ್ವಸ್ಮರಣೆಯಿಂದ ಮಹಿಮಾನ್ವಿತಳಾಗಿ ಸ್ವರೂಪವನ್ನು ಪಡೆದ ಗೌರಿಯನ್ನು ಕಾಶ್ಯಪನು ಸ್ತುತಿಸಿದನು; ಹೀಗೆ ಹೊರಟ ಗೌರಿಯನ್ನು ನಾರದನೂ ಸ್ತುತಿಸಿದನು; ಗೌರಿಯನ್ನು ಬಂಧಿಸಲು ಬಂದಿದ್ದ ವಿಷ್ಣುವಿನ ಪಾರ್ಷದರನ್ನು ನಿಗ್ರಹಿಸಿದಳು; ಇದನ್ನು ಕೇಳಿ ವಿಷ್ಣುವು ಕೋಪಗೊಂಡು ಬಂದು ಚಕ್ರಾಯುಧದಿಂದ ಪ್ರಹರಿಸಲು, ಗೌರೀಕೋಪದಿಂದುಂಟಾದ ಜ್ವಾಲಾಮುಖೀದೇವಿಯು ಚಕ್ರಾಯುಧವನ್ನೂ ಗರುಡನ್ನೂ ಸುಟ್ಟು, ವಿಷ್ಣುವನ್ನು ನುಂಗಿದಳು; ದೇವತೆಗಳ ಪ್ರಾರ್ಥನೆಯಂತೆ ಗೌರಿಯು ಜ್ವಾಲಾಮುಖೀದೇವಿಯನ್ನು ಸಮಾಧಾನಪಡಿಸಿ, ವಿಷ್ಣುವನ್ನು ಬಿಡಿಸಿ, ಜ್ವಾಲಾಮುಖಿಯನ್ನು ಪ್ರಳಯಕಾರ್ಯವನ್ನು ನೆರವೇರಿಸಲು ಒದಗುವಂತೆ ಆ ಪರ್ವತದಲ್ಲಿ ಸ್ಥಾಪಿಸಿದಳು; ಅಮೃತದೃಷ್ಟಿಯಿಂದ ವಿಷ್ಣು ಮುಂತಾದವರನ್ನು ಬದುಕಿಸಿ ತಂದೆಯನ್ನೂ ಬಿಡಿಸಿ, ತನ್ನ ಬಾಲಾಸ್ವರೂಪವನ್ನು ಪಡೆದಳು; ಆಮೇಲೆ ಬ್ರಹ್ಮನು ಹೇಳಿದಂತೆ ಪಾರ್ವತಿಯನ್ನು ಶಂಕರನಿಗೆ ಕೊಟ್ಟು ತ್ವಷ್ಟೃವಿನಿಂದ ನಿರ್ಮಿತವಾದ ವಿವಾಹ ಮಂಟಪದಲ್ಲಿ ಮದುವೆಯನ್ನು ನೆರವೇರಿಸಿದರು; ಎಲ್ಲರೂ ಪ್ರೀತರಾಗಿ ಹಿಂತಿರುಗಿದರು;
33. ಕಾಮದಹನದ, ವಿಷ್ಣು ಚಕ್ರಪ್ರಾಪ್ತಿಯ ಕಥೆಗಳನ್ನು ಕೇಳಲು, ಪರಶುರಾಮನಿಗೆ ಗುರುವು ಹೇಳಿದನು; ಜ್ವಾಲಾಮುಖೀ ದೇವಿಯಿಂದ ಸುದರ್ಶನ ಚಕ್ರವು ಸುಟ್ಟುಹೋದಮೇಲೆ ಮುರಾಸುರನು ವಿಷ್ಣುವನ್ನು ಜಯಿಸಲು ಬಂದನು; ಚಕ್ರವಿಲ್ಲದೆ ವಿಷ್ಣುವು ಸೋತು ಅಂತರ್ಧಾನ ಹೊಂದಿದನು; ವಿಷ್ಣುವು ಜ್ವಾಲಾಮುಖೀಪರ್ವತದಲ್ಲಿ ತಪಸ್ಸುಮಾಡಿ ಆ ದೇವಿಯಿಂದ ಹಿಂದಿನ ಚಕ್ರಾಯುಧಕ್ಕಿಂತ ಹೆಚ್ಚಿನ ಶಕ್ತಿಯುಳ್ಳ ಚಕ್ರವನ್ನು ಪಡೆದು, ಮುರಾಸುರನನ್ನು ಸಂಹರಿಸಿದನು; ಶಿವನು ತಪಸ್ಸುಮಾಡುತ್ತಿರಲು, ತಾರಕಾಸುರನನು ಶೂರಪದ್ಮಾಸುರನೊಡನೆ ತಪಶ್ಯಕ್ತಿಯಿಂದ ಬ್ರಹ್ಮಾಂಡಗಳನ್ನು ಜಯಿಸಿ, ಇಂದ್ರಾದಿಗಳನ್ನು ನಿಹಿಸಿದನು; ಬ್ರಹ್ಮನ ಬುದ್ಧಿವಾದದಂತೆ ಶಿವಪುತ್ರನಾದ ಕುಮಾರಸ್ವಾಮಿಯಿಂದ ಮಾತ್ರ ಅವರ ನಿಗ್ರಹವು ಸಾಧ್ಯವೆಂದು ತಿಳಿದು, ಶಿವನನ್ನು ಪ್ರಾರ್ಥಿಸಲು ಹೊರಟ ಇಂದ್ರನಿಗೆ ತಪಸ್ಸಿನ ಸ್ಥಾನದಲ್ಲಿ ಎಲ್ಲವೂ ನಿಶ್ಚೇಷ್ಟವಾಗಿರುವುದು ಗೊತ್ತಾಯಿತು; ಆಗ ಗುರುವು ಗೌರೀದೇವಿಯನ್ನು ಆರಾಧಿಸುವಂತೆ ಹೇಳಲು, ಅದರಂತೆ ಮಾಡಲು, ಗೌರೀ ದೇವಿಯು ಪ್ರತ್ಯಕ್ಷಳಾದಳು;
34. ಇಂದ್ರನ ಪ್ರಾರ್ಥನೆಯನ್ನು ಕೇಳಿ ಗೌರಿಯು ಋಷಿಶಾಪದಿಂದ ತನಗೆ ಮಕ್ಕಳಾಗುವ ಸಂಭವವಿಲ್ಲವೆನ್ನಲು, ಆ ಕಥೆಯನ್ನು ಕೇಳಿದ ಇಂದ್ರನಿಗೆ ಹೀಗೆ ಹೇಳಿದಳು; ಒಂದು ದಿನ ಉದ್ಯಾನದಲ್ಲಿರುವಾಗ ಮೃಗಯುಗ್ಮವು ಕ್ರೀಡಿಸುತ್ತಿದ್ದುದನ್ನು ವಿನೋದಕ್ಕೆ ಹಿಡಿದುತರಿಸಿದಳು; ಆಗ ಮೃಗ ರೂಪದಲ್ಲಿದ್ದ ಆ ಋಷಿಯಿಂದ ಮಕ್ಕಳಾಗದಿರಲೆಂದು ಶಾಪವು ಬಂದಿತು; ಹಾಗೆಯೇ ಶಂಕರನಿಗೂ ಶಾಪವು ಬಂದಿತು, ಹೇಗೆಂದರೆ, ತ್ರೇತಾಯುಗದಲ್ಲಿ ಬ್ರಾಹ್ಮಣರು ತಪಃಪ್ರಭಾವದಿಂದ ದೇವತೆಗಳನ್ನೂ ವಶಪಡಿಸಿಕೊಂಡರು; ಇಂದ್ರನು ಬ್ರಹ್ಮನೊಡನೆ ವಿಷ್ಣುವಿನಲ್ಲಿ ವಿಜ್ಞಾಪಿಸಲು ಎಲ್ಲರೂ ಶಿವನನ್ನು ಪಡೆದು ಪ್ರಾರ್ಥಿಸಲು, ಅವರ ಕೋರಿಕೆಯನ್ನು ಸಲ್ಲಿಸಲು ಮಹಾದೇವನು ವಿಪ್ರಸ್ತ್ರೀಯರ ಪಾತಿವ್ರತ್ಯದ ಭಂಗವನ್ನು ಮಾಡಿದನು; ವಿಪ್ರರು ಶಿವನಿಗೆ ಸ್ತ್ರೀಯರಲ್ಲಿ ನಪುಂಸಕತ್ವವನ್ನೂ, ಲಿಂಗಪತನವನ್ನೂ ಉಂಟುಮಾಡುವಂತೆ ಶಪಿಸಿದರು; ಲಿಂಗವು ಬೀಳುತ್ತಿರಲು ಜಗದ್ರಕ್ಷಣೆಗಾಗಿ ಬ್ರಹ್ಮನು ಪೀಠವಾಗಿ, ವಿಷ್ಣುವು ಯೋನಿ (ಪಾಣಿವಟ್ಟಲು)ಯಾಗಿ, ಆ ಲಿಂಗವನ್ನು ಧರಿಸಲು, ಭಾರದಿಂದ ಕುಸಿದ ಅವರೆಲ್ಲರನ್ನೂ ವಿಷ್ಣುವು ಮತ್ತೆ ಆದಿಶೇಷರೂಪನಾಗಿ ಧರಿಸಿದನು; ಶಿವನ ಕೋಪವನ್ನು ತಡೆಯಲು ಬ್ರಹ್ಮನು ಲಿಂಗರೂಪನಾಗಿ ಆವಿರ್ಭವಿಸಲು, ವಿಷ್ಣುವೂ ಲಿಂಗಾರ್ಚನೆಯನ್ನು ಮಾಡಿದನು; ಹೀಗೆ ಲಿಂಗಾರ್ಚನೆಯು ದೇವಲೋಕದಲ್ಲಿ ರೂಢಿಗೆ ಬಂದಿತು
35. ಭೂಲೋಕದಲ್ಲಿ ಲಿಂಗಾರ್ಚನೆಗೆ ಪ್ರಚಾರ ಲಾಭವಾದುದನ್ನು ಪಾರ್ವತಿಯು ಹೀಗೆ ಹೇಳಿದಳು; ಶಿವನು ತ್ರಿಪುರಾದೇವಿಯನ್ನು ಉಪಾಸನೆ ಮಾಡಲು, ತ್ರಿಪುರಾದೇವಿಯು ಪ್ರತ್ಯಕ್ಷಳಾಗಿ ಶಿವನು ಲಿಂಗಾತ್ಮಕನೆಂದೂ, ಲಿಂಗಾರ್ಚನೆ ಇಲ್ಲದೆ ಯಾವ ಪೂಜೆಯೂ ಸಫಲವಾಗದೆಂದೂ ಅನುಗ್ರಹಿಸಿದಳು; ಹೀಗೆ ವಿಘ್ನವಿದ್ದರೂ ಶಿವಜಯಕ್ಕಾಗಿ ಕಾಮನನ್ನು ಕಳುಹಿಸುವ ಉಪಾಯವನ್ನು ಮಾಡೆಂದು ಪಾರ್ವತಿಯು ಇಂದ್ರನಿಗೆ ಹೇಳಿ ಅಂತರ್ಧಾನವಾದಳು; ಕಾಮನು ಇಂದ್ರನಿಗೆ ವಾಗ್ದಾನಮಾಡಿದುದರಿಂದ ಹಿಂದಿನ ತನ್ನ ಪರಾಭವವಿದ್ದರೂ, ತ್ರಿಪುರಾಧ್ಯಾನಮಾಡುತ್ತಾ ಶಿವಜಯಕ್ಕೆ ಹೊರಟನು; ದುಃಖಿತಳಾದ ರತಿಯನ್ನೂ ತಾಯಿಯಾದ ಲಕ್ಷ್ಮಿಯ ವಶದಲ್ಲಿ ಬಿಟ್ಟು ಹೊರಡಲು ಲಕ್ಷ್ಮಿಯಿಂದ ರತಿಯ ಸಮಾಧಾನ.
36. ಕಾಮನು ತ್ರಿಪುರಾದೇವಿಯನ್ನು ಆರಾಧಿಸಲು, ಆಕೆಯು ಪ್ರಸನ್ನಳಾದಳು; ಇದನ್ನು ತಿಳಿದು ಲಕ್ಷ್ಮಿಯು ಬಂದು ಕಾಮನ ಮೇಲಿದ್ದ ಗೌರಿಯ ಶಾಪನಿವೃತ್ತಿಯನ್ನು ಪ್ರಾರ್ಥಿಸಲು, ಗೌರೀಶಾಪದಂತೆ ಕಾಮನ ಈ ದೇಹವು ಉರಿದು ಹೋಗಿ, ಇನ್ನೊಂದು ದೇಹದಿಂದ ಅವನು ತಾಯಿಯನ್ನು ಸಂತೋಷಪಡಿಸುವುದಾಗಿ ಅನುಗ್ರಹಿಸಿದಳು; ಕಾಮನನ್ನು ಕಣ್ಣಿನಲ್ಲಿ ಆಕರ್ಷಿಸಿದ್ದರಿಂದ ಕಾಮಾಕ್ಷೀ ಎಂದು ತ್ರಿಪುರಾದೇವಿಗೆ ಹೆಸರಾಯಿತು; ಪ್ರತಿಕಾಮನು ಶಿವನನ್ನು ಪುಷ್ಪಬಾಣದಿಂದ ಹೊಡೆಯಲು, ಅವನನ್ನು ದಹಿಸಿ, ಬ್ರಹ್ಮಾದಿಗಳ ಸ್ತುತಿಯಿಂದ ಶಿವನು ಶಾಂತನಾದನು;
37. ಕಾಮದಾಹದಿಂದ ಇಷ್ಟಸಿದ್ಧಿಯಾಗದಿರಲು ಇಂದ್ರನು ಬ್ರಹ್ಮನ ಮೂಲಕ ಶಿವನನ್ನು ಪ್ರಾರ್ಥಿಸಿ ತಾರಕಾಸುಸನ ನಾಶಕ್ಕಾಗಿ ಮಗನನ್ನು ಪಡೆಯುವಂತೆ ಒಪ್ಪಿಸಿದನು; ಶಿವನು ಗಿರಿಜೆಯಲ್ಲಿ ರಮಿಸಲು ಜಾರಿಬಿದ್ದ ವೀರ್ಯವನ್ನು ಭೂಮಿಯೂ, ಅಗ್ನಿಯೂ, ಗಂಗೆಯೂ ಧರಿಸಲಾರದಿರಲು, ಕೈಲಾಸ ಪರ್ವತದಲ್ಲಿರುವ ಶರವಣದಲ್ಲಿ ಅದನ್ನು ಬಿಡಲು ಬ್ರಹ್ಮನು ಹೇಳಿದನು; ಗಂಗಾದಿಗಳು ಧರಿಸಲಾರದ ವಿರ್ಯವನ್ನು ಶರವಣವು ಹೇಗೆ ಧರಿಸೀತೆಂದು ಗಂಗೆಯು ಕೇಳಲು ಭಸ್ಮಾಸುರನಿಂದ ಶಿವನು ಅಂತರ್ಹಿತನಾಗಲು, ಶೋಕದಿಂದ ಗೌರೀದೇವಿಯ ದೇಹವು ಚೂರಾಗಿ ಶರವಣವಾಗಿದ್ದುದರಿಂದ ಅದು ಶಿವವೀರ್ಯವನ್ನು ಧರಿಸಬಲ್ಲುದೆಂದು ಬ್ರಹ್ಮನು ತಿಳಿಯಹೇಳಲು, ಗಂಗೆಯು ಅಲ್ಲಿ ಅದನ್ನು ಬಿಟ್ಟಳು; ಕೃತ್ತಿಕಾದೇವಿಯರ ತೃಪ್ತಿಗಾಗಿ ಸ್ಕಂದನು ಷಣ್ಮುಖನಾದುದು; ದೇವತೆಗಳೆಲ್ಲರೂ ತಮ್ಮ ಆಯುಧಗಳಿಂದ ಹೆಚ್ಚು ಬಲವುಳ್ಳ ಆಯುಧಗಳನ್ನು ಹೊರ ಹೊಮ್ಮಿಸಿ ಅವನ್ನು ಸ್ಕಂದನಿಗೆ ಕೊಟ್ಟರು; ಎಲ್ಲರೂ ಗೌರವಿಸಿದರು, ಇಂದ್ರನು ಸೋತು ಕ್ರೌಂವಪರ್ವತದಲ್ಲಿ ಅಡಗಲು, ಅದನ್ನು ಸ್ಕಂದನು ಭೇದಿಸಿದನು; ಕಡೆಗೆ ಬ್ರಹ್ಮನ ಮೂಲಕ ಇಂದ್ರನು ಸ್ಕಂದನಿಗೆ ಶರಣಾಗತನಾಗಿ ಪ್ರಾರ್ಥಿಸಿದಂತೆ ಸೇನಾಪತಿತ್ವವನ್ನು ಸ್ವೀಕರಿಸಿದನು; ಅಮೇಲೆ ತಾರಕಾಸುರ, ಶೂರಪದ್ಮ ಇವರನ್ನು ಸಂಹರಿಸಿ ಸ್ಕಂದನು ಇಂದ್ರನಿಗೆ ಮುಂಚಿನಂತೆ ತ್ರೈಲೋಕ್ಯಾಧಿಪತ್ಯವನ್ನು ಕೊಟ್ಟನು; ಸರ್ವಾಜೇಯರಾದ ಆ ರಾಕ್ಷಸರ ಜಯದ ವಿಸ್ತಾರವನ್ನು ಪರಶುರಾಮನು ಕೇಳಲು ದತ್ತ ಗುರುವು ಹೇಳಿದನು; ಸನತ್ಕುಮಾರನು ಋಷಭಪರ್ವತದಲ್ಲಿ ತಪಸ್ಸು ಮಾಡಿ, ದೇವಾಸುರವಿಜಯದ ಸ್ವಪ್ನದ ವಿವರಣೆಯನ್ನು ಅಲ್ಲಿಗೆ ಬಂದಿದ್ದ ಬ್ರಹ್ಮನಿಂದ ತಿಳಿದನು; ಸ್ವೇಚ್ಛಾಜನ್ಮ; ಪಾರ್ವತೀಪರಮೇಶ್ವರರು ಅವನ ತಪಸ್ಸಿನ ಸ್ಥಿರತೆ ವೈರಾಗ್ಯಗಳಿಗೆ ಮೆಚ್ಚಿದರು; ಅವರಿಬ್ಬರ ಪ್ರಾರ್ಥನೆಯಂತೆ ಅವರಿಗೆ ಮಗನಾದುದು; ಅಯೋನಿಜನಾಗಿ ತಾರಕಾದಿಗಳಸಂಹಾರವನ್ನು ಮಾಡಿದನು; ಸ್ಕಂದಃ, ಅಗ್ನಿಭೂಃ, ಗಾಂಗೇಯ, ಪಾರ್ವತೀಸುತಃ, ಕಾರ್ತಿಕೇಯಃ; ಷಡಾನನಃ, ದೇವಸೇನಾಪತಿಃ, ಎಂದು ಕುಮಾರಸ್ವಾಮಿಗೆ ಅನ್ವರ್ಥನಾಮಗಳು;
38. ದತ್ತಗುರುವು ಪರಶುರಾಮನಿಗೆ ಭಾರತೀದೇವಿಯ ಚರಿತ್ರೆಯನ್ನು ಹೇಳಿದನು; ಬ್ರಹ್ಮನು ಸಭೆಯಲ್ಲಿ ಸಾವಿತ್ರೀಸ್ತುತಿಯನ್ನು ಕೇಳಿ ನಕ್ಕನು; ಆ ಅನಾದರತಿರಸ್ಕಾರವನ್ನು ವಾಣಿಯು ಆಕ್ಷೇಪಿಸಿ, ಸರ್ವಕಾರ್ಯನಿರ್ವಾಹಕ್ಕೂ ಆವಶ್ಯಕವಾದ ಶಕ್ತಿಯಸ್ವರೂಪಳಾದ ತನ್ನ ಸಹಾಯವಿಲ್ಲದೆ ಯಾರಿಂದಲೂ ಏನೂ ಸಾಗದೆಂದಳು; ಗಂಡನನ್ನು ಅಲ್ಲಗಳೆದ ಹೆಂಡಿತಿಯು, ತನ್ನೊಡನೆ ಯಜ್ಞಭಾಗಿನಿಯಾಗಲು ಅನರ್ಹಳೆಂದು ಶಪಿಸಲು, ಅವಳುಪತ್ನಿಯಾಗಿರಲು ಅನರ್ಹಳಾದರೆ ಅವನು ಗೊಲ್ಲಿತಿಯ ಕಾಮುಕನಾಗಲೆಂದು ಶಪಿಸಿದಳು; ಅವರ ಕೋಪದಿಂದ ಜಗತ್ತು ನಡುಗಿತ್ತು; ಹರಿಹರರು ಬಂದು ವಾಣಿಯೇ ಗೋಪಸ್ತ್ರೀಯಾಗಿ ಹುಟ್ಟುವಳೆಂದು ತಿಳಿಸಿ ಸಮಾಧಾನಮಾಡಿದರೂ, ಕೋಪಶೇಷದಿಂದ ವಾಣೀದೇವಿಗೆ ಗೊಲ್ಲತಿಯಾಗಿರುವಾಗ ಸ್ವರೂಪದ ಅಜ್ಞಾನವಿರಲೆಂದೂ, ಬ್ರಹ್ಮನು ನಿಂದ್ಯ ಸ್ತ್ರೀಯಲ್ಲಿ ಕಾಮುಕನಾಗಲೆಂದೂ ಶಪಿಸಿದರು; ಆಮೇಲೆ ಬ್ರಹ್ಮನು ಯಾಗಮಾಡಬೇಕಾದಾಗ ಭಾರತೀದೇವಿಯನ್ನು ಕರೆದರೂ ಬರದಿರಲು, ವಿಷ್ಣುವಿನಿಂದ ಗೋಪಸ್ತ್ರೀ ಒಬ್ಬಳನ್ನು ತರಿಸಿ ಮದುವೆಯಾಗಿ ಸಕಾದಲ್ಲಿ ಯಾಗವನ್ನು ಆರಂಭಿಸಿದನು; ವಾಣಿಯು ಕೋಪಗೊಂಡು ಬೆಟ್ಟಕ್ಕೆ ಹೋದಳು; ಅವಳ ಕೋಪಾಗ್ನಿಯು ಎಲ್ಲರನ್ನೂ ಸುಡುತ್ತಿರಲು, ನಿವಾರಿಸಲು ಬಂದ ದೇವಾದಿಗಳನ್ನು ಶರೆಯಲ್ಲಿ ಇಟ್ಟಳು; ಲಕ್ಷ್ಮೀ, ಗೌರೀದೇವಿಯರೂ, ಹರಿ, ಹರರೂ, ಬ್ರಹ್ಮನೊಡನೆ ಬಂದು ಪ್ರಾರ್ಥಿಸಿದರು; ಬ್ರಹ್ಮನನ್ನು ಕಂಡು ಸಾವಿತ್ರಿಯ ಕೋಪವು ಹೆಚ್ಚಲು ಪಾರ್ವತಿಯು ತ್ರಿಪುರಾದೇವಿಯನ್ನು ಪ್ರಾರ್ಥಿಸಿದಳು; ತ್ರಿಪುರಾದೇವಿಯು ಬಂದು ಸಮಾಧಾನಮಾಡಿ ದೇವಾದಿಗಳನ್ನು ಬಿಡಿಸಿ, ಬ್ರಹ್ಮಾದಿಗಳನ್ನು ಉಜ್ಜೀವನಗೊಳಿಸಲು, ಸಾವಿತ್ರಿಯು ಕ್ಷಮಾಪ್ರಾರ್ಥನೆಮಾಡಿ ಬ್ರಹ್ಮನೊಡನೆ ಇರಲು ಒಪ್ಪದೆ ತ್ರಿಪುರಾಧ್ಯಾನದಲ್ಲಿರುವೆನೆಂದಳು;
39. ಆಮೇಲೆ ಬ್ರಹ್ಮನು ಸಾವಿತ್ರಿಯು ಇಲ್ಲದೆ ಯಾಗಾಚರಣೆಯೇ ಅಸಂಭವವಾಗಿ, ಜನರಿಗೆ ವ್ಯಾಧಿಪೀಡೆಯೂ, ತನಗೆ ನಿಂದಾಪ್ರಾಪ್ತಿಯೂ ಹೇಗೆ ನಿವಾರಣೆಯಾಗಬೇಕೆಂದು ಪ್ರಾರ್ಥಿಸಲು, ತ್ರಿಪುರಾದೇವಿಯು ಗೋಪಕನ್ಯೆಯ ಪೂರ್ವ ವೃತ್ತವನ್ನು ವಿವರಿಸಿದಳು; ಹಿಂದೆ ಸುಪಾರ್ಶ್ವನೆಂಬ ವಿಪ್ರನು ತಪಸ್ಸಿನಿಂದ ಸಾವಿತ್ರಿಯನ್ನು ಪ್ರತ್ಯಕ್ಷಮಾಡಿಕೊಂಡನು; ತಾನು ಬಲಾತ್ಕಾರದಿಂದ ಗೋಪವಧೂ ಸಂಗಮಾಡಿದುದನ್ನು ನಾರದನು ಕಂಡು, ಗೋಪನಾಗೆಂದು ಶಾಪಕೊಟ್ಟನು; ಅದನ್ನು ಪರಿಹರಿಸೆಂದು ಪ್ರಾರ್ಥಿಸಲು, ದೇವಿಯು ಗೋಪನಾದರೂ ತನ್ನ ಅಂಶದ ಮಗಳನ್ನೂ, ವಿಷ್ಣುವಿನ ಅಂಶದ ಮಗನನ್ನೂ ಪಡೆದು, ಸದ್ಗತಿಯನ್ನು ಪಡೆಯುವೆ. ಎಂದು ಸಮಾಧಾನ ಹೇಳಿ ಸಾವಿತ್ರಿಯು ಅಂತರ್ಧಾನವಾದಳು; ಆ ಸಾವಿತ್ರ್ಯಂಶಸಂಭೂತಳೇ ಈ ಗೋಪವಧೂ ಎಂದು, ಬ್ರಹ್ಮನ ಶಾಪದಿಂದ ನೀನು ತಿಳಿಯಲಿಲ್ಲವೆಂದೂ, ವಿವರಿಸಲು, ಸಾವಿತ್ರಿಯು ತೃಪ್ತಿಗೊಂಡಳು; ಈ ವರ್ಣಮಯವಾದ ಗಾಯತ್ತ್ರೀ ಉಪದೇಶವನ್ನು ಉಪನಯನದಲ್ಲಿ ಪಡೆದು ತ್ರೈವರ್ಣಿಕರು ದ್ವಿಜರಾಗುವರು; ಎಂದೂ, ಈ ಗಾಯತ್ತ್ರಿಯನ್ನು ನಿನ್ನ ಮುಖದಿಂದ ಹೊರಡುವ ವೇದಮಯಳಾದುದರಿಂದ ಅಂಗೀಕರಿಸಿ ಯಾಗವನ್ನು ಮಾಡು ಎಂದೂ ಹೇಳಿ, ತ್ರಿಪುರಾದೇವಿಯು ಗಾಯತ್ತ್ರೀಯಲ್ಲಿ ಪ್ರವೇಶಿಸಿದಳು; ಎಲ್ಲರೂ ದೇವಿಯನ್ನು ಸ್ತುತಿಸಿದರು; ಈ ಸಮಯದಲ್ಲಿ ಅಲ್ಲಿಗೆ ಬಂದ ಗೋಪ ಪತಿಯು ತನ್ನ ಮಗಳಾದ ಗಾಯತ್ತ್ರಿಯನ್ನು ತನ್ನ ಮನೆಗೆ ಬರಬೇಕೆಂದು ಪ್ರಾರ್ಥಿಸಲು, ಅವಳು ಮುಂದೆ ನಂದ ಗೋಪನಾಗಿ ಹುಟ್ಟುವ ನಿನಗೆ ಗೌರೀ ಎಂಬ ಮಗಳಾಗಿ ಹುಟ್ಟುವೆನು; ಈ ವಿಷ್ಣುವು ನನ್ನ ತಮ್ಮನಾಗಿ ಹುಟ್ಟುವನು; ಆಗ ನಾನು ವಿಂಧ್ಯವಾಸಿನಿಯಾಗಿ ಜನರನ್ನು ಉದ್ಧರಿಸುವೆನು; ಎಂದು ಅನುಗ್ರಹಿಸಲು ಗೋಪ ಪತಿಯು ತೃಪ್ತನಾಗಿ ಹಿಂತಿರುಗಿದನು; ತ್ರಿಪುರಾದೇವಿಯು ಅಂತರ್ಧಾನವಾದಳು; ಸಾವಿತ್ರಿಯು ಪರ್ವತವನ್ನು ಆಶ್ರಯಿಸಿದಳು; ಬ್ರಹ್ಮನು ಗಾಯತ್ತ್ರಿಯನ್ನು ಸ್ವೀಕರಿಸಿಯಾಗವನ್ನು ನೆರವೇರಿಸಿದನು;
40. ಗಾಯತ್ರಿಯ ಅವತಾರ ವಿಷಯವನ್ನು ತಿಳಿಸೆಂದು ಪರಶುರಾಮನು ಕೇಳಲು ದತ್ತಾತ್ರೇಯನು, ದೇವತೆಗಳು ತ್ರಿಪುರಾದೇವಿಯನ್ನು ಒಲಿಸುವ ಮಾತೃಕಾಸ್ತುತಿಯನ್ನು ಹೇಳಿ, ಗಾಯತ್ರಿಯು ಇಪ್ಪತ್ತೆಂಟನೆಯ ಯುಗದಲ್ಲಿ ರಾಕ್ಷಸರು ಮನುಷ್ಯರಾಗಿ ಹುಟ್ಟುವರು; ಹೇಗೆಂದರೆ, ಕಾಲನೇಮಿಯು ಮಧುರಾಪಟ್ಟಣದಲ್ಲಿ ಚಂದ್ರವಂಶದ ಉಗ್ರಸೇನನಮಗನಾದ ಕಂಸನಾಗಿಯೂ, ಹಿರಣ್ಯಕಶಿಪುವು ಚೇದಿವಂಶದಲ್ಲಿ ಶಿಶುಪಾಲನಾಗಿಯೂ, ಹಿರಣ್ಯಾಕ್ಷನು ದಂತವಕ್ರನಾಗಿಯೂ, ನರಕಾಸುರನು ಜರಾಸಂಧನಾಗಿಯೂ ಹುಟ್ಟುವರು; ಇವರ ಭಾರವನ್ನು ತಡೆಯಲಾರದೆ ಭೂದೇವಿಯು ಬ್ರಹ್ಮಾದಿಗಳೊಡನೆ ವಿಷ್ಣುವಿನ ಸಮೀಪದಲ್ಲಿ ಪ್ರಾರ್ಥಿಸಲು ಅಲ್ಲಿ ಪ್ರತ್ಯಕ್ಷನಾದ ಶಿವನೂ ಎಲ್ಲರೂ ತ್ರಿಪುರಾದೇವಿಯ ಪ್ರಾರ್ಥನೆಯನ್ನು ಮಾಡಿದರು; ದೇವಿಯು ಪ್ರತ್ಯಕ್ಷಳಾಗಿ ಅವನ ಕೋರಿಕೆಯಂತೆ ನಂದರೆ ಮಗಳಾಗಿಯೂ, ವಿಷ್ಣುವೂ ನಸುದೇವನ ಮಗನಾದ ಕೃಷ್ಣನಾಗಿಯೂ ಅವತರಿಸುವುದಾಗಿ ಹೇಳಿ, ಕಂಸಾದಿಸಂಹಾರವಾಗುವುದೆಂದು ಅನುಗ್ರಹಿಸಿದಳು; ಅದರಂತೆ ವಿಷ್ಣುವು ದೇವಕಿಯಲ್ಲಿ ಹುಟ್ಟಿದನು; ಅವನನ್ನು ವಸುದೇವನು ನಂದನ ಮನೆಗೆ ತಂದು ಅಲ್ಲಿಟ್ಟು, ಅಲ್ಲಿ ಹುಟ್ಟಿದ್ದ ಕಾಲರಾತ್ರಿಯನ್ನು ತೆಗೆದುಕೊಂಡುಹೋಗಿ, ಕಂಸನಿಗೆ ಕೊಟ್ಟನು; ಅವನು ಆ ಮಗುವನ್ನೂ ಕೊಲ್ಲಲು ಹೊರಟಾಗ ಆ ಮಗುವು ಮೇಲೆ ಹಾರಿ; ನಿನ್ನ ಶತ್ರುವು ಬೇರೆಕಡೆ ಬೆಳೆದು ಬಂದು ನಿನ್ನನ್ನು ನಾಶಮಾಡಲೆಂದು ಶಪಿಸಿ ಅಂತರ್ಧಾನವಾದಳು; ಆಮೇಲೆ ಗೋಪಸ್ತ್ರೀಯರು ಕೃಷ್ಣಸಮಾಗಮವನ್ನು ಪಡೆಯಲು ಕಾತ್ಯಾಯನಋಷಿಯ ಸಹಾಯವನ್ನು ಕೇಳಲು, ಅವನು ತ್ರಿಪುರಾಧ್ಯನದಿಂದ ಅವರ ಕೋರಿಕೆಯನ್ನು ತಿಳಿಸಲು, ದೇವಿಯು ಕಾತ್ಯಾಯನೀವ್ರತವನ್ನು ಆಚರಿಸಿದರೆ ಇಷ್ಟಸಿದ್ಧಿಯಾಗುವುದೆಂದು ಅನುಗ್ರಹಿಸಿದಳು; ಅವರು ಅದನ್ನಾಚರಿಸಿ ಇಷ್ಟಾರ್ಥವನ್ನು ಪಡೆದರು; ಪರಶುರಾಮನಿಗೆ ಕಾತ್ಯಾಯನೀವ್ರತದ ವಿವರಗಳನ್ನೂ ಗುರುವು ಹೇಳಿದನು.