ಶ್ರೀ ತ್ರಿಪುರಾರಹಸ್ಯ – ಮಾಹಾತ್ಮ್ಯಖಂಡ (ಅಧ್ಯಾಯ ೦೧ – ೨೦)
ವಿಷಯಾನುಕ್ರಮಣಿಕೆ
ಮುನ್ನುಡಿ
1. ಮಂಗಳಾಚರಣೆ; ಬ್ರಹ್ಮತತ್ವಸ್ವರೂಪದಲ್ಲಿ ಶಿವತತ್ವಶಕ್ತಿತತ್ವಗಳ ಸ್ವರೂಪ; ತ್ರಿಪುರಾದೇವಿಯ ಸ್ವರೂಪ, ಭರತಖಂಡದ ದಕ್ಷಿಣದಿಕ್ಕಿನಲ್ಲಿ ಮಲಯಪರ್ವತ ವರ್ಣನೆಯು; ಅಲ್ಲಿ ಗಿರಿ, ನದೀ, ಸರೋವರ, ಗಿಡ, ಮರ, ಬಳ್ಳಿ, ಮೃಗ, ಪಕ್ಷಿ, ಭ್ರಮರ ಮುಂತಾದವುಗಳ ವರ್ಣನೆ; ಏಲಾ, ಲವಂಗ, ಶ್ರೀಗಂಧ ಮುಂತಾದವುಗಳ ಬೆಳೆ; ಸಿದ್ಧ, ಗಂಧರ್ವರ ವಿಹಾರ; ತಪಸ್ವಿಗಳ ಆಶ್ರಮಗಳು; ಅಲ್ಲಿ ಪರಶುರಾಮನ ತಪೋವನ; ಸುಮೇಧನೆಂಬ ಶಿಷ್ಯನು ಗುರುವಾದ ಪರಶುರಾಮನನ್ನು ಕುರಿತು ಮಾಡಿದ ನಿತ್ಯಾನಂದಪ್ರಾಪ್ತಿಯು ಏತರಿಂದ ಆಗುತ್ತದೆಂದು ಪ್ರಶ್ನೆ; ದತ್ತಾತ್ರೇಯನ ಸ್ಮರಣೆ; ತ್ರಿಪುರಾತತ್ವವಿವರಣೆ; ಉಪಾಸನೆಗಾಗಿ ಸುಮೇಧನಿಗೆ ದೀಕ್ಷಾಮಂತ್ರೋಪದೇಶ; ಸುಮೇಧನು ಭ್ರಾಮರೀದೇವಿಯ ವಾಸಸ್ಥಾನವಾದ ಶ್ರೀಶೈಲದಲ್ಲಿ ತಪಸ್ಸನ್ನು ಮಾಡುವುದು; ಸ್ವಪ್ನದಲ್ಲಿ ಬಾಲಾಂಬಿಕಾ ದರ್ಶನ; ಸುಮೇಧಕೃತ ದೇವೀಮಹಿಮ್ನಸ್ತೋತ್ರ; ವರಪ್ರಾಪ್ತಿ; ಎಚ್ಚತ್ತಮೇಲೆ ಆಕಾಶವಾಣಿಯಿಂದಲೂ ಪ್ರೇರಿತನಾಗಿ ಗುರುವನ್ನು ಪಡೆದು ಹ್ರೀ ವಿದ್ಯಾದೀಕ್ಷೆಯನ್ನು ಪಡೆದುದು; ಸುಮೇಧನೇ ಹಾರೀತಾಯನನು; ಗುರುವಿನ ಅಪ್ಪಣೆಯಂತೆ ಶಿಷ್ಯನು ದೇವೀಮಾಹತ್ಮ್ಯೆಯನ್ನು ರಚಿಸಲು ಆಲೋಚಿಸಿದುದು; ಆ ಮೇಲೆ ಸುಮೇಧನು ಹಾಲಾಸ್ಯಕ್ಷೇತ್ರದಲ್ಲಿ ಶ್ರೀಮೀನಾಕ್ಷೀದೇವಿಯ ಆರಾಧನೆ, ಮಂತ್ರ ಜಪಗಳನ್ನು ನೆರವೇರಿಸಿದುದು; ನಾರದ ಮಹರ್ಷಿಯ ದರ್ಶನ; ಸಮಾಧಿಯಲ್ಲಿ ಅವನ ದರ್ಶನವು ಆದುದು ಹೇಗೆಂದು ಪ್ರಶ್ನಿಸಲು ನಾರದನ ಉತ್ತರ;
2. ದರ್ಶನವೆಂದರೇನು? ಪ್ರತ್ಯಕ್ಷವಾಗುವ ಬಗೆ; ಒಳಗೆ ಹೊರಗೆ ಎಂಬ ವಿವೇಚನೆ; ನೋಡುವುದು ಎಲ್ಲಿ? ನೋಡುವವನು ಯಾರು? ಇಂದ್ರಿಯಗಳಿಂದ ದರ್ಶನವಾದರೆ ದ್ರಷ್ಟೃವಿಗೆ ಆದುದೇನು? ದೃಕ್ದೃಶ್ಯಗಳ ಪರಿಮಾಣಗಳು; ನಾರದನು ಬ್ರಹ್ಮಲೋಕದಿಂದ ಬಂದೆನೆಂದುದು; ಅಲ್ಲಿ ಮಾರ್ಕಂಡೇಯನು ಬ್ರಹ್ಮನನ್ನು ಕುರಿತು ಸಕಲ ಶ್ರುತಿಸ್ಮೃತಿಸಾರವನ್ನು ತಿಳಿಯಹೇಳೆಂದು ಪ್ರಶ್ನಿಸಿದುದು; ಅದರಿಂದ ಬ್ರಹ್ಮನಿಗೆ ಪರಾಂಬಾಸ್ಮೃತಿಯುಂಟಾದುದು; ಬ್ರಹ್ಮಕೃತ ತ್ರಿಪುರಾದೇವೀಸ್ತುತಿ; ಆ ತ್ರಿಪುರಾದೇವಿಯೇ ಸರ್ವೋತ್ತಮವಾದ ಸರ್ವಕಾರಣವಾದ ತತ್ವವು; ಈ ರಹಸ್ಯವನ್ನು ಶಿವನು ವಿಷ್ಣುವಿಗೂ, ವಿಷ್ಣುವು ನಾರದನಿಗೂ ಹೇಳಿದುದು; ಭೂಲೋಕದಲ್ಲಿ ಮಹಾವಿಷ್ಣುರೂಪಿಯಾದ ದತ್ತಾತ್ರೇಯನು ಭಾರ್ಗವಪರಶುರಾಮನಿಗೂ, ಪರಶುರಾಮನು ಸುಮೇಧಮಹರ್ಷಿಗೂ ಆ ತ್ರಿಪುರಾರಹಸ್ಯವನ್ನು ಉಪದೇಶಿಸಿದುದು; ಆ ಸುಮೇಧನು ಅದನ್ನು ಗ್ರಂಥರೂಪದಲ್ಲಿ ರಚಿಸಲು ಯೋಚಿಸುತ್ತಾ ಹಾಲಾಸ್ಯಕ್ಷೇತ್ರಕ್ಕೆ ಬಂದಿರುತ್ತಾನೆಂದು ಬ್ರಹ್ಮನು ಹೇಳಲು, ಆ ನಿನ್ನನ್ನು ನೋಡಲು ನಾನು ಇಲ್ಲಿಗೆ ಬಂದೆನೆಂದು ಹೇಳಿದುದು; ನೀನು ಮನಗಂಡಿರುವ ತತ್ವದ ಸ್ವರೂಪವನ್ನು ಹೇಳೆಂದು ನಾರದನು ಸುಮೇಧನನ್ನು ಕೇಳಿದುದು; ಸುಮೇಧನು ತನಗೆ ಚೆನ್ನಾಗಿ ತಿಳಿಯದೆಂದೂ, ಗುರುವಿನ ಅಜ್ಞಾನು ಸಾರವಾಗಿ ಗ್ರಂಥರಚನೆಗಾಗಿ ಉದ್ದೇಶಪಟ್ಟಿರುವುದಾಗಿಯೂ ಹೇಳಿದ್ದಲ್ಲದೆ, ಮಂದಬುದ್ಧಿಯಾದುದರಿಂದ ಗುರೂಪ ದೇಶವನ್ನು ಮರೆತಿರುವುದಾಗಿ ಹೇಳಿ, ಆ ತತ್ವವನ್ನು ತಿಳಿಯಹೇಳಲು ನಾರದನನ್ನು ಪ್ರಾರ್ಥಿಸಿದುದು; ಆಮೇಲೆ ನಾರದನು ಬ್ರಹ್ಮದೇವನನ್ನು ಧ್ಯಾನಿಸಿ ಆವಾಹಿಸಿದುದು; ತೇಜೋರಾಶಿಯಾದ ಬ್ರಹ್ಮನ ಆವಿರ್ಭಾವ; ಸುಮೇಧನಾರದರ ಪೂಜೆ; ಸುಮೇಧನು ತ್ರಿಪುರಾರಹಸ್ಯಾ ಚಾರ್ಯತ್ವವನ್ನು ಹೇಗೆ ಪಡೆದನೆಂದು ನಾರದನ ಪ್ರಶ್ನೆಗೆ ಉತ್ತರವಾಗಿ ಬ್ರಹ್ಮನು ಹೇಳಿದ ಉತ್ತರ; ಪೂರ್ವಕಾಲದಲ್ಲಿ ಸುಮಂತುವಿನ ಮಗನಾದ ಅಲರ್ಕನೆಂಬ ದ್ವಿಜನು ಸರಸ್ವತೀನದಿಯ ದಡದಲ್ಲಿ ಭರ್ತೃಪರಾಯಣಳಾದ ಹೆಂಡತಿಯೊಡನೆ ವಾಸವಾಗಿದ್ದುದು; ಸುಮೇಧನು ಅವರ ಮಗನು; ತಂದೆಯು ತಾಯಿಯನ್ನು “ಅಯಿ” ಎಂದು ಸಂಬೋಧಿಸಿದ್ದನ್ನು ಕೇಳಿ, ಐದು ವರ್ಷದ ಬಾಲಕನಾಗಿದ್ದ ಇವನು ಐ, ಐ, ಎಂದು ಹೇಳುತ್ತಾ ತಾಯಿಯನ್ನು ಧ್ಯಾನಿಸುತ್ತಿದ್ದನು. ಪೂರ್ವಕರ್ಮಫಲವಾಗಿ ರೋಗಾರ್ತನಾದ ಆ ಬಾಲಕನು ಹಾಗೆ ತಾಯಿಯನ್ನು ಧ್ಯಾನಿಸುತ್ತಿರುವಾಗಲೇ ಮೃತನಾದುದು; ಹೀಗೆ ಬಿಂದು ರಹಿತವಾದ ವಾಗ್ಭವಬೀಜಾಕ್ಷರದ ಜಪದಿಂದ ತುಷ್ಟಳಾದ ಶ್ರೀಬಾಲಾದೇವಿಯು ಪ್ರಸನ್ನಳಾದರೂ ಅಜ್ಞಾನಪೂರ್ವಕ ಜಪದಿದ ಇವನಿಗೆ ಧಾರಣಸಾಮರ್ಥ್ಯವಿಲ್ಲದೆ ಮರೆವು ಉಂಟಾಯಿತು; ಈಗ ನನ್ನ ಅನುಗ್ರಹದಿಂದ ಇವನು ಉಕ್ತವಾದ ಮತ್ತು ಅನುಕ್ತವಾದ ಎಲ್ಲ ವಿಷಯಗಳನ್ನೂ ತಿಳಿದು ಹೇಳಬಲ್ಲವನಾಗಿರುತ್ತಾನೆ; ತ್ರಿಪುರಾರಹಸ್ಯ ಗ್ರಂಥವನ್ನೂ ರಚಿಸುತ್ತಾನೆ; ಎಂದು ಹೇಳಿ, ನಾರದನೊಡನೆ ಅಂತರ್ಧಾನವಾದುದು; ಸುಮೇಧನು ವೇಗವತಿಯಲ್ಲಿ ಸ್ನಾನಮಾಡಿ ಸುಂದರೇಶ, ಮೀನಾಕ್ಷೀ, ಗುರು, ಗಣೇಶರನ್ನು ಆರಾಧಿಸಿ ಗ್ರಂಥವನ್ನು ಓಂ ನಮಃ ಎಂದು ಪ್ರಾರಂಭಿಸಿ, ತ್ರಿಪುರೈವಹ್ರೀಂ, ಎಂದು ಕಡೆಯಲ್ಲಿ ಮುಗಿಸಿದುದು; ಹೀಗೆ ಶಿವಶಕ್ತಿಪ್ರಣವಗಳ ಮಧ್ಯೆ ಇರುವ ತ್ರಿಪುರಾರಹಸ್ಯ ಶಿವಶಕ್ತಿತತ್ವಗಳನ್ನು ತಿಳಿಸುತ್ತದೆ;
3. ಮಂಗಲಾಚರಣ, ನಾರದಾಗಮನ, ಸುಮೇಧನಾರದರ ಸಂವಾದರೂಪದಲ್ಲಿ ತ್ರಿಪುರಾರಹಸ್ಯವನ್ನು ಹೇಳಿದುದು; ಚತುರ್ಮುಖಬ್ರಹ್ಮನ ಮಗನು ಭೃಗುವು, ಅವನ ಮಗನು ಚ್ಯವನನು, ಸುಕನ್ಯೆಯು ಅವನ ಹೆಂಡಿತಿಯು, ಅವರ ಮಗನು ಋಚೀಕನು, ಗಾಧಿಯ ಮಗಳು ಅವನ ಹೆಂಡಿತಿಯು, ಋಚೀಕನು ತುಷ್ಟನಾಗಿ ಬ್ರಾಹ್ಮಣನಾದ ಮಗನೂ, ಕ್ಷತ್ರಿಯನಾದ ತಮ್ಮನೂ ಉಂಟಾಗುವಂತೆ ಎರಡು ಚರುವನ್ನು ಕೊಟ್ಟನು; ಗಾಧಿಪತ್ನಿಯು ಚರುವನ್ನು ಬದಲಾಯಿಸಿದಳು; ವಂಚಿತಳಾದ ಮಗಳು ಪ್ರಾರ್ಥಿಸಿದ ಮೇಲೆ ಬ್ರಾಹ್ಮಣನಾದ ಮಗನೂ, ಕ್ಷತ್ರಿಯನಾದ ಮೊಮ್ಮಗನೂ ಆಗುವುದಾಗಿ ಅನುಗ್ರಹಿಸಿದನು. ಗಾಧಿಪುತ್ರನು ವಿಶ್ವಾಮಿತ್ರಮುನಿಯು; ಋಚೀಕಪುತ್ರನು ಜಮದಗ್ನಿಯು, ಅವನ ಮಗನು ಪರಶುರಾಮನು; ಅವನು ಕ್ಷತ್ರಿಯರನ್ನು ನಾಶಮಾಡಿದುದು; ರಾಮನನ್ನೂ ಎದುರಿಸಿ, ತನ್ನ ವೈಷ್ಣವಧನುಸ್ಸನ್ನು ಹೆದೆಏರಿಸಲು ಕೊಟ್ಟನು; ರಾಮನು ಹಾಗೆ ಮಾಡಿ ಬಾಣಕ್ಕೆ ಗುರಿಯನ್ನು ಕೇಳಲು, ಪರಶುರಾಮನು ಅರ್ಜಿಸಿದ್ದ ಪುಣ್ಯ ಲೋಕಗಳನ್ನು ತೋರಿದನು; ಅವನ್ನು ಸಂಹರಿಸಿ ಬಾಣವು ಶಾಂತವಾಗಲು ಭಾರ್ಗವರಾಮನು ಲಜ್ಜಿತನಾಗಿ ಶಾಂತಿಯನ್ನು ಪಡೆದು ಹಿಂತಿರುಗಿದನು;
4. ಭಾರ್ಗವರಾಮನು ದಾರಿಯಲ್ಲಿ ಕ್ರೋಧದ ದುಷ್ಪರಿಣಾಮಗಳನ್ನು ಮನಗಾಣುತ್ತಾ ದಾರಿಯಲ್ಲಿ ತೇಜಸ್ವಿಯಾಗಿ ಮಲಿನನಾಗಿರುವ ಪುರುಷನನ್ನು ನೋಡಿದನು; ಆತನು ಮಹಾಪುರುಷನಿರಬೇಕೆಂದು ವಿಚಾರಿಸಲು ಅವನು ಕಲ್ಲುಗಳನ್ನು ಬೀರುತ್ತಾ ಓಡಹತ್ತಿದನು ಅವನನ್ನು ಹಿಡಿದು ದೂಷಿಸಿದರೂ, ಮಾನಾವಮಾನಗಳಲ್ಲಿ ಸಮನಾಗಿದ್ದ ಅವನ ಮಹಿಮೆಯನ್ನು ಗುರುತಿಸಿ ಅನುಗ್ರಹ ಪ್ರಾರ್ಥನೆ ಮಾಡಿದನು; ಪ್ರಸನ್ನವಾಗಿ ಅವನು ನೀನು ಯಾರು? ಎಂಬ ಪ್ರಶ್ನೆಯಲ್ಲಿ ತ್ವಂ ಪದಾರ್ಥಸ್ವರೂಪವನ್ನು ವಿವರಿಸಲು ಅದನ್ನು ತಿಳಿಯಲಾರದೆ ಚನ್ನಾಗಿ ವಿವರಿಸೆಂದು ಕೇಳಿದನು. ಆಗ ಅವನು ತನ್ನ ಪರಿಚಯವನ್ನು ತಿಳಿಸಲು ತಾನು ಅಂಗೀರಸಗೋತ್ರೋತ್ಪನ್ನನಾದ ಸಂವರ್ತನೆಂದೂ, ಗುರುವಾದ ತನ್ನ ಅಣ್ಣನೊಡನೆ ಕಾರಣಾಂತರದಿಂದ ವೈರವು ಉಂಟಾಗಲು ಅದರಿಂದ ವೈರಾಗ್ಯವುಂಟಾಗಿ ಲಿಂಗಾ ಶ್ರಮಗಳನ್ನು ಮೀರಿರುವ ಈ ಸ್ಥಿತಿಯನ್ನು ಪಡೆದು, ದತ್ತಾತ್ರೇಯ ಗುರುವಿನಿಂದ ಉಪದೇಶಾನುಗ್ರಹವು ದೊರೆಯಿತೆಂದು ಹೇಳಿದನು. ಸತ್ಸಹವಾಸದಿಂದ ಸದ್ಗುರುವಿನ ಪ್ರಸಾದದಿಂದ ತ್ರಿಪುರಾಮಹೇಶ್ವರೀದೇವಿಯ ಆರಾಧನೆಯಲ್ಲಿ ಅದರ ಉಂಟಾಗಿ ಆ ದೇವಿಯ ಆರಾಧನೆಯಿಂದ ಸಂಸಾರಮಾರ್ಗವನ್ನು ದಾಟಿ ಆತ್ಮಜ್ಞಾನವನ್ನು ಪಡೆಯುವುದು ಸುಲಭವೆಂದೂ ಬೇರೆ ಯಾವ ಮಾರ್ಗವೂ ಸುಲಭವಲ್ಲವೆಂದೂ ತಿಳಿಯಹೇಳಿ ಸಂವರ್ತನು ಹೊರಟು ಹೋದನು. ಅದರಂತೆ ಪರಶುರಾಮನೂ ದತ್ತಗುರುವಿನ ಸಮೀಪಕ್ಕೆ ತೆರಳಿದನು;
5. ಆಮೇಲೆ ಭಾರ್ಗವರಾಮನು ಉತ್ತರಾಭಿಮುಖನಾಗಿ ದತ್ತ ಗುರುವಿನ ಆಶ್ರಮಕ್ಕೆ ತಲಪಲು ಹೊರಟು ದಾರಿಯಲ್ಲಿ ಈ ಲೌಕಿಕ ವ್ಯವಹಾರವು ಹೇಗೆ ಅಜ್ಞಾನಮೂಲಕವಾದುದೆಂಬುದನ್ನು ವಿಮರ್ಶಿಸಿ ಮನಗಾಣುತ್ತಾ ಮುಂದುವರಿದನು; ಜನರು ಸುಖಾರ್ಥಿಗಳಾಗಿ ದೇಹಾತ್ಮ ಬುದ್ಧಿ ಎಂಬ ಭ್ರಾಂತಿಯಲ್ಲಿ ನರಳುತ್ತಾ, ಕಾಮಪೂರ್ತಿಯಾಗಿ ಅನುಚಿತ ಮಾರ್ಗದಲ್ಲೂ ಧನಾರ್ಜನೆ ಮಾಡುತ್ತಾರೆ. ನಾಚಿಕೆ ಇಲ್ಲದವರಾಗಿರುತ್ತಾರೆ. ಸರ್ವಾನರ್ಥಮೂಲವಾದ ಕಾಮವನ್ನು ಬಿಟ್ಟು ಆಭಯವಾದ ಆತ್ಮಜ್ಞಾನದ ಪದವಿಯನ್ನು ಪಡೆಯಲು ನಾನು ದತ್ತಗುರುವನ್ನು ಸಮೀಪಿಸುವೆನೆಂದು ನಿಶ್ಚಯಿಸಿದನು; ದೇಹದಲ್ಲಿನ ದೋಷವಿಮರ್ಶೆ; ಕಾಮ ಕ್ರೋದವಶರಾದವರು ಇದನ್ನು ಗಮನಿಸು; ಧನವು ಆತ್ಮಮೃತ್ಯುಸಮ; ಏಕೆಂದರೆ ಧನವಂತನ ಮರಣವನ್ನು ಬಂಧುಗಳೇ ಆಶಿಸುತ್ತಾರೆ; ಗಂಧಮಾದನ ಪರ್ವತದಲ್ಲಿ ದತ್ತಾತ್ರೇಯನ ಆಶ್ರಮವನ್ನು ಪಡೆದನು; ಶಿಷ್ಯನ ಮೂಲಕ ದತ್ತಗುರುವನ್ನು ಕಂಡು ನಮಸ್ಕರಿಸಿದನು.
6. ವಿನೀತನಾಗಿ ನಿಂತಿದ್ದ ಭಾರ್ಗವನನ್ನು ಕುರಿತು ದತ್ತಾತ್ರೇಯನು ಕುಶಲಪ್ರಶ್ನೆಗಳನ್ನು ಮಾಡಿದುದು; ನಿನ್ನ ತಪಶ್ವರ್ಯೆಯು ನಿರ್ವಿಷ್ನವಾಗಿದೆಯೇ? ಆಕರ್ಷಕವಸ್ತುಗಳಲ್ಲಿ ರಸನೋಪಸ್ಥಗಳೆರಡೂ ಅತ್ಯಂತ ಬಲವುಳ್ಳವು; ನಾನು ಅವನ್ನು ಸೇವಿಸುತ್ತಿದೇನೆ; ಆದುದರಿಂದ ಅನೇಕರು ಬಿಟ್ಟುಹೋದರು. ನೀನು ಏಕೆ ಬಂದೆ? ನಿಜವಾದುದನ್ನು ಧೈರ್ಯವಾಗಿ ಹೇಳು ಎಂದನು. ರಾಮನು ವಿನಯದೊಡನೆ ಹೀಗೆ ಹೇಳಿದನು. ಗುರುವೇ ತನ್ನನ್ನು ಶಂಕಿಸಬೇಡ, ಸಂಸಾರದುಃಖದಿಂದ ವಿರಕ್ತನಾಗಿದೇನೆ. ಗುರುವು ಸದಾಚಾರವಂತನಾಗಿರಲಿ ದುರಾಚಾರಿಯಾಗಿರಲಿ ಅವನು ಶಿವಸ್ವರೂಪನೆಂದು ನಂಬಿ ಬಂದಿದೇನೆ. ಆಟ್ಮಜ್ಞಾನವನ್ನು ಅನುಗ್ರಹಿಸುವವನೇ ಗುರುವು. ಎಲ್ಲ ವಿಷಯಗಳನ್ನೂ ಅನುಭವಿಸುತ್ತಿರುವ ಮಾನವರೂ ದೇವತೆಗಳೂ ದುಃಖಿಗಳೇ ಆಗಿದಾರೆಂದು ಮನಗಂಡಿದೇನೆ. ನನ್ನನ್ನು ಕಾಪಾಡು ಎಂದನು. ಗುರುವು ಇಂತಹ ಮನೋವೃತ್ತಿಯು ತ್ರಿಪುರಾ ದೇವಿಯ ಅನುಗ್ರಹವಿಲ್ಲದೆ ಉಂಟಾಗದೆಂದು ಹೇಳಿ ದೇವಿಯಲ್ಲಿ ಶ್ರದ್ಧೆಯು ದೃಢವಾಗಲು, ಆ ತಾಯಿಯ ಮಹಿಮೆಯನ್ನು ಕೇಳಬೇಕೆಂದನು;
7. ಗುರುವಿನ ಮಾತಿನಿಂದ ಸಂತುಷ್ಟನಾದ ಭಾರ್ಗವನು ತ್ರಿಪುರಾ ದೇವಿಯ ತತ್ವವನ್ನು ತಿಳಿಯಹೇಳಬೇಕೆಂದು ಕೇಳಿಕೊಂಡನು; ಗುರುವು ತ್ರಿಪುರಾತತ್ವವನ್ನು ತಿಳಿಯುವುದು ಬ್ರಹ್ಮಾ ವಿಷ್ಣು, ರುದ್ರ ಮುಂತಾದ ದೊಡ್ಡವರಿಗೂ ಸುಲಭವಾಗಿಲ್ಲ; ಶ್ರುತ್ಯಾದಿಪ್ರಮಾಣಗಳೂ ನೇರವಾಗಿ ತಿಳಿಯಿಸಲಾರವು; ಪ್ರತಿಯೊಬ್ಬರೂ ‘ಅಸ್ಮಿ’ ಎಂಬ ಅನುಭವಮಾತ್ರದಿಂದ, ಚಿಚ್ಛಕ್ತಿಸ್ವರೂಪವನ್ನು ಸಾಕ್ಷಾತ್ಕರಿಸುವುದರಿಂದ ಮಾತ್ರ ತಿಳಿಯಬೇಕಾಗಿದೆ: ಅಂತಹ ಜ್ಞಾನಕ್ಕೆ ಸಹಾಯವಾಗುವ ಕಥೆಯೊಂದನ್ನು ಹೇಳುತ್ತೇನೆ; ಪೂರ್ವಕಾಲದಲ್ಲಿ ಇಂದ್ರ, ಅಗ್ನಿ, ಸೋಮ, ವಾಯು, ಮುಂತಾದ ದೇವ ಪ್ರಮುಖರಲ್ಲಿಯೇ ಪರಸ್ಪರವಾಗಿ, “ನಾನು ಹೆಚ್ಚು, ತಾನು ಹೆಚ್ಚು” ಎಂದು ಜಗಳವಾಯಿತು. ಅವರು ನಿರ್ಣಯಕ್ಕಾಗಿ ಬ್ರಹ್ಮನಲ್ಲಿಗೆ ಹೋದರು. ಅವನೂ ಅದನ್ನು ಗೊತ್ತುಮಾಡಿ ಹೇಳಲಾರದೆ, ಅವರೊಡನೆ ವಿಷ್ಣುವಿನ ಸಮೀಪಕ್ಕೆ ನಿರ್ಣಯಕ್ಕಾಗಿಯೂ ಶಾಂತಿಲಾಭಕ್ಕಾಗಿಯೂ ಹೋಗಿ ವಿಜ್ಞಾಪಿಸಿದನು. ಆಗ ವಿಷ್ಣುವೂ ಸದಾಶಿವನನ್ನು ಧ್ಯಾನಿಸಲು ಅವನು ಪ್ರತ್ಯಕ್ಷನಾದನು; ವಿಷಯವನ್ನು ತಿಳಿದು ಆ ಮಹಾದೇವನೂ ತ್ರಿಪುರಾ ಮಹೇಶ್ವರಿಯನ್ನು ಎಲ್ಲರೊಡನೆ ಧ್ಯಾನಮಾಡಿದನು. ಕಾರಣ ಪುರುಷರಾದ ತ್ರಿಮೂರ್ತಿಗಳಿಂದಲೂ ಧ್ಯಾನಿಸಲ್ಪಟ್ಟ ದೇವಿಯು ಪ್ರತ್ಯಕ್ಷಳಾದಳು. ಆ ಪರಾಂಬಿಕೆಯನ್ನು ನೋಡಿ ಎಲ್ಲರೂ ಸ್ತೋತ್ರಮಾಡಿದರು;
8. ಬ್ರಹ್ಮಕೃತದೇವೀಸ್ತೋತ್ರ; ವಿಷ್ಣುಕೃತತ್ರಿಪುರಾಸ್ತೋತ್ರ; ಶಿವಕೃತ ತ್ರಿಪುರಾಮಹೇಶ್ವರೀಸ್ತುತಿ; ಆಗ ದೇವಿಯು ರಾಗದ್ವೇಷಗಳಿಗೆ ಅಧೀನರಾಗಿ ಜಗಳವಾಡಿದ ದೇವತೆಗಳ ಗರ್ವಭಂಗವನ್ನು ಮಾಡಿ ಪರತತ್ವದ ಸ್ವರೂಪವನ್ನು ಅನುಭವಕ್ಕೆ ತಂದುಕೊಡುವುದರ ಮೂಲಕ ಅನುಗ್ರಹ ಮಾಡಲು ಬಂದಿರುವುದಾಗಿ ತ್ರಿಮೂರ್ತಿಗಳಿಗೆ ಹೇಳಿ, ದೇವಿಯ ತೇಜಸ್ಸಿನಿಂದ ಮೂರ್ಛಿತರಾಗಿದ್ದ ದೇವತೆಗಳನ್ನು ಎಚ್ಚರಗೊಳ್ಳುವಂತೆ ಅನುಗ್ರಹಿಸಿದಳು; ಅವರು ಎದ್ದು ಆ ವ್ಯಕ್ತಿಯನ್ನು ತಿಳಿಯಲು ತಮ್ಮ ಮುಖಂಡರಲ್ಲಿ ಒಬ್ಬನಾದ ಅಗ್ನಿಯನ್ನು ಕಳುಹಿಸಿದರು; ಅವನು ತನ್ನ ಪರಾಕ್ರಮವನ್ನು ತಿಳಿಸಲು, ದೇವಿಯು ಒಂದು ಹುಲ್ಲು ಕಡ್ದಿಯನ್ನಿಟ್ಟು ಅದನ್ನು ಸುಡು. ಎಂದಳು; ಅಗ್ನಿಯು ಅಸಮರ್ಥನಾಗಿ ಹಿಂತಿರುಗಿದನು; ಆಮೇಲೆ ಚಂದ್ರನೂ, ವಾಯುವೂ ಹೋಗಿ ತಿಳಿಯಲಾರದೆ ಹಿಂತಿರುಗಿದರು; ಅಗ ಇಂದ್ರನು ಆಶ್ಚರ್ಯಭಯಗಳಿಂದ ಯೋಚಿಸುತ್ತಿದ್ದನು;
9. ಇಂದ್ರನೂ ತನ್ನ ಪರಾಕ್ರಮದಲ್ಲಿ ನಂಬಿಕೆಯಿಂದ ಹೋಗಿ ದೇವಿಯನ್ನು ಕುರಿತು, ಅಗ್ನಿ ಮುಂತಾದವರಂತೆಯೇ, ನೀನು ಯಾರೆಂದು ಕೇಳಲು, ಅವಳು ನಿನ್ನ ಸ್ವರೂಪ ಶಕ್ತಿಗಳನ್ನು ಮೊದಲು ತಿಳಿಸೆನ್ನಲು, ರಾಗದ್ವೇಷಾಹಂಕಾರಗಳಿಂದ ಪರವಶನಾಗಿದ್ದ ಇಂದ್ರನೂ ದೇವಿಯನ್ನು ವಜ್ರಾಯುಧದಿಂದ ಪ್ರಹರಿಸಲು ಹೋಗಲು, ಅವನ ಶಕ್ತಿಯು ಕುಂದಿ ಅಲುಗಾಡದಂತಾದನು, ಆಗ ಗರ್ವಭಂಗವಾಗಿ ಎಚ್ಚತ್ತ ಅವನು ಆಂಗಿರಸಗೋತ್ರೋತ್ಪನ್ನನಾದ ಬೃಹಸ್ಪತಿಯನ್ನು ಧ್ಯಾನಿಸಲು ಅವನು ಪ್ರತ್ಯಕ್ಷನಾದನು; ಎಲ್ಲ ವಿಷಯಗಳನ್ನೂ ಇಂದ್ರನು ವಿಜ್ಞಾಪಿಸಲು, ಗುರುವು ಇಂದ್ರನ ಯೋಗಕ್ಷೇಮಸಾಧನೆಗಾಗಿ ತ್ರಿಪುರಾಮಹೇಶ್ವರೀ ದೇವಿಯನ್ನು ಸ್ತೋತ್ರಮಾಡಿದನು; ಬೃಹಸ್ಪತಿಕೃತ ದೇವೀಸ್ತೋತ್ರದ ರೀತಿ; ಅದರಿಂದ ಸಂತೋಷಗೊಂಡ ದೇವಿಯು ಅನುಗ್ರಹಿಸಲು, ಇಂದ್ರನ ಅಜ್ಞಾನ ಅಹಂಕಾರಗಳು ನಷ್ಟವಾಗಲು, ಲಜ್ಜಿತನೂ ವಿನೀತನೂ ಆಗಿ ದೇವಿಯನ್ನು ಸ್ತೋತ್ರಮಾಡಿದನು. ಅದರಿಂದ ತುಷ್ಟಳಾದ ದೇವಿಯು ಬುದ್ಧಿವಾದವನ್ನು ಹೇಳಿ, ಎಲ್ಲರ ಸ್ಥಾನಮಾನಗಳನ್ನು ತಿಳಿಸಿದಳು. ಬ್ರಹ್ಮಾದಿಗಳು ಭಕ್ತಿಯ ಪ್ರಾರ್ಥನೆ ಮಾಡಲು, ದೇವಿಯು ಹಾಗೆಯೇ ಆಗಲೆಂದು ಅನುಗ್ರಹಿಸಿ ಅಂತರ್ಧಾನವನ್ನು ಹೊಂದಿದಳು. ಅನಂತರದಲ್ಲಿ ವಿಷ್ಣುವು ದೇವೀಶಕ್ತಿ ತತ್ವದ ಸ್ವರೂಪವನ್ನು ಇಂದ್ರಾದಿಗಳಿಗೆ ವಿವರಿಸಿದನು. ಆಮೇಲೆ ಕ್ರಮವಾಗಿ ಶಿವನೂ, ವಿಷ್ಣುವೂ, ಬ್ರಹ್ಮನೂ, ದೇವತೆಗಳೂ ತಮ್ಮ ನಿವಾಸಗಳನ್ನು ಕುರಿತು ತೆರಳಿದರು;
10. ಹೀಗೆ ತ್ರಿಪುರಸುಂದರೀದೇವಿಯು ಕುಮಾರೀ ಸ್ವರೂಪದಿಂದ ಬಂದು ಅನುಗ್ರಹಿಸಿದ ರೀತಿಯನ್ನು ಕೇಳಿ ಭಾರ್ಗವ ರಾಮನು ದತ್ತಾತ್ರೇಯಗುರುವಿನಿಂದ ಆ ದೇವಿಯ ಮಹಿಮೆಯನ್ನು ವಿವರಿಸಿರುವ ಕಥೆಗಳನ್ನು ಕೇಳಬಯಸಿ ಪ್ರಾರ್ಥಿಸಿದನು. ಆ ದೇವಿಯ ಮುಖ್ಯ ರೂಪಗಳು ಕುಮಾರೀ, ತ್ರಿರುಪಾ, ಗೌರೀ, ರಮಾ, ಭಾರತೀ, ಕಾಳೀ, ಚಂಡಿಕಾ, ದುರ್ಗಾ, ಭಗವತೀ, ಕಾತ್ಯಾಯನೀ, ಲಲಿತಾ, ಎಂದು ಪ್ರಸಿದ್ಧವಾಗಿದೆ. ಸೃಷ್ಟಿಕ್ರಮ ವರ್ಣನೆ; ರಾಮನ ಪ್ರಶ್ನೆಗೆ ಉತ್ತರವಾಗಿ ಕಟಕಾರನ ಕಥಾವರ್ಣನೆ; ಅನವಸರದಲ್ಲಿ ಮೇಲಿನ ತತ್ವವನ್ನು ಹೇಳಬಾರದು; ಬ್ರಹ್ಮನು ಈ ಜಗತ್ತಿನ ಸೃಷ್ಟಿಯಲ್ಲೂ, ವಿಷ್ಣುವು ಪಾಲನೆಯಲ್ಲೂ, ರುದ್ರನು ಉಪಸಂಹಾರದಲ್ಲೂ ಈ ಕಾರ್ಯಗಳಲ್ಲಿ ದೇವಿಯಿಂದ ನಿಯೋಜನೆಮಾಡಲ್ಪಟ್ಟರು; ಮೃತ್ಯುವು ಸಂಹಾರ ಕಾರ್ಯವು ಬೇಡವೆಂದು ಅತ್ತನು; ಅದರಿಂದ ರೋಗಗಳುಂಟಾಗಿ ಮರಣವು ಸಂಭವಿಸುವಂತಾಯಿತು; ತ್ರಿಮೂರ್ತಿಗಳ ಸಹಾಯಕ್ಕಾಗಿ ವಾಣೀ, ರಮಾ, ರುದ್ರಾಣೀ ದೇವಿಯರನ್ನು ದೇವಿಯು ಕೊಟ್ಟಳು; ಇದು ದೇವಿಯ ತ್ರಿರೂಪವು
11. ಜಗದ್ವೈಚಿತ್ರ್ಯಕ್ಕೆ ಪ್ರಾಣಿಗಳ ಕರ್ಮಭೇದವು ಕಾರಣವಾಗುವಂತಾದುದು; ಪ್ರಾಣಿಗಳು ದೇವತೆಗಳಿಗೆ ಅಧೀನರಾದುದು; ಇಂದ್ರಾದಿಗಳು ಗುರುವಿನ ಸಲಹೆಯಂತೆ ಬ್ರಹ್ಮಲೋಕಕ್ಕೆ ಹೋದರು; ಹೊರಗಿನ ಸಭೆ; ಕಾಮಕ್ರೋಧಾದಿಗಳನ್ನು ಜಯಿಸಿರುವವರಿಗೆ ಮಾತ್ರ ಬ್ರಹ್ಮನ ಒಳಗಿನ ಸಭೆಗೂ ಪ್ರವೇಶ; ದೇವತೆಗಳಿಂದ ಮಾನವರಿಗೆ ಪ್ರಯೋಜನವಾಗುವುದಾದರೆ ಅವರು ಅಧೀನರಾಗಿರುತ್ತಾರೆ; ಕಾಮವು ಕಾರಣವೆಂಬುದು ಗೊತ್ತಾಗಿದೆ. ಲಕ್ಷ್ಮೀ ಪ್ರಾರ್ಥನೆಯನ್ನು ಮಾಡಲು ದೇವತೆಗಳು ಪ್ರಾರಂಭಿಸಿದರು;
12. ಅವರ ಪ್ರಾರ್ಥನೆಯನ್ನು ಮನ್ನಿಸಿ ಲಕ್ಷ್ಮಿಯು ತನ್ನ ಆರಾಧನೆಯ ಕ್ರಮವನ್ನು ಉಪದೇಶಿಸಿದಳು; ಆದರೂ ಮಾನವರಲ್ಲಿ ಒಬ್ಬಿಬ್ಬರು ಮಾತ್ರ ಲಕ್ಷ್ಮಿಯ ಆರಾಧನೆಯಲ್ಲಿ ತೊಡಗಿದ್ದರು; ಪುನಃ ಗುರುವಿನ ಸಲಹೆಯಂತೆ ಲಕ್ಷ್ಮಿಯನ್ನು ಸ್ತುತಿಸಲು, ಅವರ ಕಾರ್ಯಸಾಧನೆಗಾಗಿ ಎಂದರೆ ಮಾನವರು ಪಶುವಿನಂತೆ ದೇವತೆಗಳಿಗೆ ಅಧೀನರಾಗಿರುವಂತೆ ಮಾಡಲು, ಐದುವರ್ಷ ವಯಸ್ಸಿನ ಕಾಮನನ್ನು ತನ್ನ ಮನಸ್ಸಿನಿಂದಲೇ ಸೃಜಿಸಿ ಕಳುಹಿಸಿಕೊಟ್ಟಳು; ಮಾನವರು ಕಾಮನಾವಿಶೇಷಗಳಿಗೆ ಒಳಗಾಗಿ ದೇವತೆಗಳನ್ನುದ್ದೇಶಿಸಿ ಕರ್ಮಗಳನ್ನು ಮಾಡುವಂತೆಯೂ ಅದರಿಂದ ಅವರು ದೇವಾಧೀನರಾಗುವಂತೆಯೂ ಮಾಡಲು ಒಪ್ಪಿದನು;
13. ಕಾಮನು ಏಕಾಕಿಯಾಗಿಯೇ ಭೂಲೋಕಕ್ಕೆ ಬಂದು ಜನರನ್ನು ಕುರಿತು ದೇವಾಧೀನರಾಗುವಂತೆ ಅಪ್ಪಣೆಮಾಡಿದನು; ಅವರು ಉತ್ತರವಾಗಿ ಸ್ವರ್ಗದಲ್ಲಿ ದೇವತೆಗಳು ಹೇಗೆ ಇಂದ್ರಾಧೀನರೋ, ಹಾಗೆ ಇಲ್ಲಿ ನಾವು ನಮ್ಮ ದೊರೆಗೆ ಅಧೀನರು; ನಾವು ದೇವತೆಗಳನ್ನು ಏಕೆ ಪೂಜಿಸಬೇಕು? ನಮ್ಮ ದೊರೆಯು ಬ್ರಹ್ಮಾವರ್ತ ದೇಶದಲ್ಲಿ ವೀರವ್ರತನೆಂದು ಪ್ರಸಿದ್ಧನಾಗಿದಾನೆ ಎಂದರು. ಕಾಮನು ಅವರನ್ನು ಹೊಡೆದು ಸಂಹರಿಸುತ್ತಿರಲು, ಚಾರರು ದೊರೆಗೆ ತಿಳಿಸಿದರು. ಮಂತ್ರಿಯಾದ ವರ್ಧನನು ಸಭೆಯಲ್ಲಿ ಮರ್ಶಿಸಿ, ಸಾಮಾದಿ ಉಪಾಯಗಳಿಗೆ ಅದು ತಕ್ಕ ಸಮಯವಲ್ಲವೆಂದೂ, ಶಿವನನ್ನು ಆರಾಧಿಸಬೇಕೆಂದೂ ಹೇಳಲು ಅದರಂತೆ ಮಹಾದೇವನ ಅನುಗ್ರಹಕ್ಕಾಗಿ ಸಿದ್ಧತೆಗಳನ್ನು ಮಾಡಿದರು;
14. ರಾಜನು ಈಶ್ವರನನ್ನು ಕುರಿತು ತಪಸ್ಸುಮಾಡಿ ಪ್ರತ್ಯಕ್ಷನಾದ ಶಿವನನ್ನು ಸ್ತುತಿಸಿದನು; ವೀರವ್ರತಕೃತ ಶಿವಸ್ತೋತ್ರ; ಶಿವನನ್ನು ಕುರಿತು ವೀರವ್ರತರಾಜನು ವಿರಕ್ತಿಮುಕ್ತಿಗಳನ್ನು, ಪ್ರಾರ್ಥಿಸಿದುದು; ಶಿವನು ಅವನ ಮುಂಚಿನ ಕಾಮ್ಯತಪಸ್ಸಿನ ಫಲವಾಗಿ ಕಾಮನನ್ನು ಯುದ್ಧದಲ್ಲಿ ಗೆದ್ದು, ಧರ್ಮ ರಾಜ್ಯವನ್ನು ಸ್ಥಾಪಿಸಿ, ಕಡೆಗೆ ಶಿವಲೋಕವನ್ನು ಪಡೆಯಬೇಕೆನ್ನಲು ರಾಜನು ಒಪ್ಪಿದುದು; ಆಮೇಲೆ ಸೇನಾಪತಿಯಾದ ಸುಧೃತಿಯೂ, ಮಂತ್ರಿಯಾದ ವರ್ಧನನೂ, ಶತ್ರುಂಜಯ, ಶತ್ರುಹಾ, ಭೀಮ, ಸಮರತಾಪನ ಎಂಬ ರಾಜಕುಮಾರರೂ ಯುದ್ಧಸನ್ನದ್ಧರಾಗಿ ಹೊರಡಲು, ಪುರೋಹಿತನಾದ ವಿದ್ಯಾಪತಿಯು ಶಿವಶಕ್ತಿಮಂತ್ರಗಳಿಂದ ಅವರಿಗೆ ತಂತ್ರಶಾಸ್ತ್ರೋಕ್ರರೀತಿಯಲ್ಲಿ ದಿಗ್ರಕ್ಷೆ, ಅಂಗರಕ್ಷಣೆಗಳನ್ನು ನೆರವೇರಿಸಿ, ಜಯವಾಗಲೆಂದು ಆಶೀರ್ವದಿಸಿದನು.
15. ಆಮೇಲೆ ರಾಜನೀತಿ ದಂಡನೀತಿ ಶಾಸ್ತ್ರಾನುಸಾರವಾಗಿ ಸೇನೆಯನ್ನು ವಿಭಾಗಮಾಡಿ ವ್ಯೂಹವನ್ನು ರಚಿಸಿ, ಮಂತ್ರಿಯೂ ಸೇನಾಪತಿಯೂ ರಾಜಕುಮಾರರೂ ಸಿದ್ಧರಾದರು. ಆ ಸಮಯದಲ್ಲಿ ನಾರದನು ಇಂದ್ರನನ್ನು ಸಮೀಪಿಸಿ ಕಾಮನ ಸಹಾಯಕ್ಕಾಗಿ ದೇವತೆಗಳೆಲ್ಲರೊಡನೆ ಅವನೂ ಹೋಗಬೇಕೆಂದು ಸಲಹೆ ಮಾಡಲು, ಇಂದ್ರನೂ ಹಾಗೆ ಮಾಡಿದನು; ರಾಜಸೇನೆಯೊಡನೆ ದೇವತೆಗಳಿಗೆ ಯುದ್ಧವಾರಂಭಿಸಿತು; ಇಂದ್ರಪುತ್ರನಾದ ಜಯಂತನು ವಸುಗಣದೊಡನೆ ಸುಧೃತಿಯನ್ನು ಎದುರಿಸಿದನು; ದೇವತೆಗಳಿಗೆ ಸೋಲಾಗುತ್ತಿರಲು, ಸವಿತೃ ಮುಂತಾದ ವಸುಗಣವು ಮಾನವರಾಜಸೇನೆಯನ್ನು ಧ್ವಂಸಮಾಡಿತು; ಸುಧೃತಿ ಪುತ್ರನಾದ ರಣಧೀರನು ಅವರನ್ನು ಸಂಹರಿಸಿ ಸಾವಿತ್ರನನ್ನು ಮುಷ್ಟಿಯಿಂದ ಹೊಡೆ ಕೆಡವಿದನು; ಜಯಂತನು ಅಧರ್ಮವಾದ ರೀತಿಯಲ್ಲಿ ಹಿಂದಿನಿಂದ ರಣಧೀರನನ್ನು ಶಕ್ತ್ಯಾಯುಧದಿಂದ ಹೊಡೆದನು; ಅವನು ಮೂರ್ಛಿತನಾಗಲು ಜಯಂತನು ಸಾವಿತ್ರನನ್ನು ಇಂದ್ರನ ಸಮೀಪಕ್ಕೆ ಕರೆದು ತಂದನು.
16. ಎಚ್ಚರಗೊಂಡ ರಣಧೀರನು ಜಯಂತನನ್ನು ನಿಂದಿಸಿ, ಜಯಂತನನ್ನೂ ಅವನಿಗೆ ನೆರವಾಗಿ ಬಂದ ಅಗ್ನಿಯನ್ನೂ ಹೊಡೆದು ಕೆಡವಿದನು; ಇಂದ್ರನು ವಜ್ರಾಯುಧದಿಂದ ಹೊಡೆದು ರಣಧೀರನನ್ನು ಕೆಡವಿದನು; ರಾಜಪುತ್ರನಾದ ಭೀಮನು ಬಂದು ಇಂದ್ರನನ್ನು ಗದೆಯಿಂದ ಹೊಡೆಯಲು ಇಂದ್ರನು ಅಲುಗಾಡದಂತಾದನು; ಆಗ ಭೀಮನು ಐರಾವತವನ್ನು ಹೊಡೆದು ಕೆಡವಿ, ವಜ್ರಾಯುಧವನ್ನು ಕಿತ್ತುಕೊಂಡು ಹೊಡೆಯಹೋಗಲು ಅದು ಕಣ್ಮರೆಯಾಯಿತು; ಇಂದ್ರನ ನೆರವಿಗೆ ವಾಯುವು ಬಂದು, ಗದಾಘಾತದಿಂದ ಮೂರ್ಛೆಹೊಂದಿದನು; ಆಗ ಇಂದ್ರ, ವರುಣ, ಕುಬೇರರು ಒಟ್ಟಿಗೆ ಯುದ್ಧಕ್ಕೆ ಬಂದರು; ಇತರ ರಾಜಪುತ್ರರೂ ಸಧೃತಿಯೂ ರಣಧೀರನಿಗೆ ನೆರವಾದರು; ಇಂದ್ರನು ಸುಧೃತಿಯೊಡನೆಯೂ, ಶತ್ರುಂಜಯನು ಕುಬೇರನೊಡನೆಯೂ, ಶತ್ರುಹಣನು ವರುಣನೊಡನೆಯೂ, ಭೀಮನು ಚಿತ್ರರಥನೊಂದಿಗೂ, ಸಮರತಾಪನನ್ನು ಯಮನಿಗೆ ಎದುರಾಗಿಯೂ, ಶತ್ರುಂಜಯಪುರ್ತನಾದ ವೀರವಿಕ್ರಮನು ವಾಯುವನ್ನು ಪ್ರತಿಭಟಿಸಿಯೂ, ಶತ್ರುಘ್ನನ ಮಗನಾದ ವೀರಸೇನನು ಅಗ್ನಿಗೆ ಪ್ರತಿಯಾಗಿಯೂ, ಭೀಮನ ಮಗನಾದ ವೀರಭಾನುವು ಜಯಂತನನ್ನು ಎದುರಿಸಿಯೂ, ಸಮರತಾಪನನ ಮಗನಾದ ವೀರಾಗ್ರಗನು ವಸುವನ್ನು ವಿರೋಧಿಸಿಯೂ ಧರ್ಮಯುದ್ಧವನ್ನು ಮಾಡಿದರು;
17. ಚಿತ್ರಸೇನನು ಮಾಯಾಯುದ್ಧವನ್ನಾರಂಭಿಸಲು, ಭೀಮನು ಅಸ್ತ್ರದಿಂದ ತಡೆದು ಅವನನ್ನು ಹೊಡೆದು ಕೆಡವಿದನು; ವೀರಾಗ್ರಗನು ಸಾವಿತ್ರನ ಖಡ್ಗದಿಂದ ಸ್ವಲ್ಪ ಮೂರ್ಛಿತನಾದರೂ, ಆಮೇಲೆ ಅವನನ್ನು ಗದೆಯಿಂದ ಹೊಡೆದು ಬೀಳಿಸಿದನು; ವೀರಸೇನನು ಅಗ್ನಿಯನ್ನು ಹೊಡೆದು ಕೈಸೆರೆ ಹಿಡಿದನು; ವೀರವಿಕ್ರಮನು ವಾಯುವಿನ ಅಂಕುಶದಿಂದ ಹೊಡೆಯಲ್ಪಟ್ಟು, ಆ ಅಂಕುಶದಿಂದಲೇ ವಾಯುವನ್ನು ಹಿಂತಿರುಗಿಸಿ ಹೊಡೆದು ಕೆಡವಿದನು; ಶತ್ರುಂ ಜಯನು ಅಧರ್ಮದಿಂದ ಹೊಡೆದ ಕುಬೇರನನ್ನು ನಿಂದಿಸಿ ಮುಷ್ಟಿಯಿಂದ ಪ್ರಹರಿಸಿ ಉರುಳಿಸಿದನು; ಕೈಸೆರೆಯಾದ ಅವನನ್ನು ಪುಲಸ್ತ್ಯಮುನಿಯು ಬಿಡಿಸಿದನು; ವೀರಭಾನುವಿನ ಏಟಿನಿಂದ ಜಯಂತನು ಮೂರ್ಛಿತನಾದನು, ಶತ್ರುಹಣನು ವರುಣನನ್ನು ಕೆಡವಿದನು; ಅವನು ಕೂಡಲೆ ಎದ್ದು ಶತ್ರುಹಣನನ್ನು ಪಾಶದಿಂದ ಕಟ್ಟಿದನು. ಆ ವರುಣನನ್ನು ಸಮರತಾಪನನು ಏಟಿನಿಂದ ಮೂರ್ಛೆಗೊಳಿಸಲು, ಅವನನ್ನು ರೋಗಗಳೊಡನೆ ಬಂದ ಯಮನು ಎದುರಿಸಿದನು. ಆದರೂ ಸಮರತಾಪನನು ಅವರೆಲ್ಲರನ್ನೂ ಹೊಡೆದೋಡಿಸಿದನು; ಆಗ ಮುನ್ನುಗ್ಗಿದ ಯಮನ ಕೋಣವು ಅವನನ್ನು ಕೊಂಬಿನಲ್ಲಿ ಎತ್ತಿಕೊಂಡು ಹೋಗುತ್ತಿರಲು ಎಚ್ಚತ್ತ ಆ ಸಮರತಾಪನನು ಅದನ್ನು ಮುಷ್ಟಿಯಿಂದ ಹೊಡೆದು ಬೀಳಿಸಲು, ಅಷ್ಟರಲ್ಲಿ ಎಚ್ಚತ್ತು ಮುನ್ನುಗ್ಗಿದ ಯಮನನ್ನು ಸಧೃತಿಯು ಹೊಡೆದು ಬೀಳಿಸಿದನು; ಅಷ್ಟರಲ್ಲಿ ಯಮನಿಗೆ ಇದ್ರನು ನೆರವಾಗಿ ಬಂದನು;
18. ಸುಧೃತಿಯು ಇಂದ್ರನ ಕಿರೀಟಗಳನ್ನು ಪುನಃ ಪುನಃ ಕೆಡವಿದನು; ಕಡೆಗೆ ಇಂದ್ರನನ್ನೂ ಮೂರ್ಛೆಗೊಳಿಸಿದನು; ಕಡೆಯಲ್ಲಿ ಎಲ್ಲರನ್ನೂ ರಾಜಪುತ್ರರು ಬಂದಿಗಳನ್ನಾಗಿ ಮಾಡಿ ತೆಗೆದುಕೊಂಡು ಹೊರಟರು;
19. ಇಂದ್ರಾದಿಗಳು ಕೈಸೆರೆಯಾದುದನ್ನು ನೋಡಿ ಕಾಮನು ಅವರೆಲ್ಲರನ್ನೂ ತಡೆದು ಹೊಡೆದು ಬೀಳಿಸಿದನು ; ಆಗ ರಣಧೀರನು ರಾಜಪೌತ್ರರನ್ನು ಸಮಾಧಾನಗೊಳಿಸುತ್ತಾ, ಶಂಕರನಿಂದ ವರವನ್ನು ಪಡೆದಿದ್ದ ವೀರವ್ರತರಾಜನಿಗೆ ಸಮಾಚಾರವನ್ನು ಅರಿಕೆಮಾಡಿ ಕರೆತರಲು ವೀರಸೇನನನ್ನು ಕಳುಹಿಸಿ, ತಾನು ಕಾಮನೊಡನೆ ಯುದ್ಧಕ್ಕೆ ನಿಂತನು; ತಮ್ಮ ಸೈನಿಕರನ್ನು ವೀರವಾಣಿಯಿಂದ ಹಿಂತಿರುಗಿಸಿ ಹುರಿದುಂಬಿಸಿ ದೇವಸೇನೆಯೊಡನೆ ಯುದ್ಧಮಾಡುವಂತೆ ಪ್ರೇರಿಸಿದನು; ಕಾಮನನ್ನು ಹೊಡೆದು ಮೂರ್ಛೆಗೊಳಿಸಿ, ಅವನ ಮುಂಚಿನ ಪ್ರಹಾರದಿಂದ ಶಕ್ತಿಗುಂದಿದ್ದ ಅವಯವಗಳುಳ್ಳವನಾಗಿದ್ದುದರಿಂದ ತಾನೂ ಪ್ರಜ್ಞೆತಪ್ಪಿಬಿದ್ದನು;
20. ವೀರಸೇನನು ವೀರವ್ರತರಾಜನನ್ನು ದಾರಿಯಲ್ಲಿಯೇ ಕಂಡು ವಿಜ್ಞಾಪಿಸಲು ಅವನು ರಣಾಂಗಣಕ್ಕೆ ಬಂದು, ಅಷ್ಟರಲ್ಲಿಯೇ ಎಚ್ಚತ್ತು ಬಂದ ಕಾಮನೊಡನೆ ಯುದ್ಧಕ್ಕೆ ನಿಂತನು; ರಾಜಪುತ್ರರೆಲ್ಲರೂ ಎಚ್ಚತ್ತು ಅವನಿಗೆ ನಮಸ್ಕರಿಸಿದರು; ಆ ರಾಜನು ಯುದ್ಧಮಾಡುತ್ತಾ ನಾಲ್ಕನೆಯ ದಿನ ತನ್ನ ಬಲವು ಕುಂದುತ್ತಿರುವುದನ್ನು ಮನಗಂಡು. ಶಂಕರನನ್ನು ಧ್ಯಾನಿಸಲು, ಶಿವನ ಅನುಗ್ರಹದಿಂದ ತ್ರಿಶೂಲವು ಅವನ ನೆರವಿಗೆ ಬಂದಿತು; ಅದರಿಂದ ಕಾಮನನ್ನು ಹೊಡೆಯಲು ಅವನು ಬಿದ್ದನು; ಆಗತಾನೆ ಬಂದಿದ್ದ ಲಕ್ಷ್ಮಿಯ ದೂತರು ಕಾಮನನ್ನು ಲಕ್ಷ್ಮಿಯ ಸಮೀಪಕ್ಕೆ ಒಯ್ದರು; ಇತ್ತಲಾಗಿ ಇಂದ್ರಾದಿಗಳನ್ನು ಹಿಡಿದುಕೊಂಡು ರಾಜನೂ ರಾಜಪುತ್ರರೂ ಜಯಶಾಲಿಗಳಾಗಿ ರಾಜಧಾನಿಗೆ ಹಿಂತಿರುಗಿದರು; ಆದರೆ ಪುರೋಹಿತನಾದ ವಿದ್ಯಾಪತಿಯು ದೇವತೆಗಳನ್ನು ಅವಮಾನಗೊಳಿಸಬಾರದೆಂದೂ, ಅವರು ಮಾನವರಿಗೆ ಪೂಜ್ಯರೆಂದೂ ತಿಳಿಯಹೇಳಲು, ರಾಜನು ಅವರೆಲ್ಲರನ್ನೂ ಬಿಡುಗಡೆಮಾಡಿ ಗೌರವಿಸಿದನು; ಅವರು ಸ್ವರ್ಗಕ್ಕೆ ಹೋದರು; ವೀರವ್ರತ ರಾಜನೂ ಎಲ್ಲರೊಡನೆ ರಾಜಧಾನಿಗೆ ಬಂದುಸೇರಿದನು;