ಶ್ರೀಮತ್ಸ್ಕಾಂದಪುರಾಣಾಂತರ್ಗತಾ – ಸೂತಸಂಹಿತಾ – ಯಜ್ಞವೈಭವಖಂಡ ಭಾಗ – ೨
ವಿಷಯಾನುಕ್ರಮಣಿಕೆ
ಮುನ್ನುಡಿ
26. ಶಿವಭಕ್ತಿಯಸ್ವರೂಪ; ಪರಭಕ್ತಿ, ಅಪರಭಕ್ತಿ; ಸಾಧ್ಯಭಕ್ತಿ, ಸಾಧನಭಕ್ತಿ; ಮೋಕ್ಷಪ್ರಕಾರಗಳಲ್ಲಿ ನಂಬಿಕೆ; ಶ್ರದ್ಧಾಭಕ್ತಿಗಳು ಮೋಕ್ಷಸಾಧನ; ಸಾಲೋಕ್ಯ, ಸಾಮೀಪ್ಯ ಸಾರೂಪ್ಯ; ನಿಷ್ಕಾಮಧರ್ಮಾಚರಣೆ;
27. ಪರಪದಸ್ವರೂಪ; ಪರತತ್ವದ ಸಮಷ್ಟಿವೃಷ್ಟಿವಿಭೂತಿಗಳು; ಪರಶಿವ, ಬ್ರಹ್ಮಾ, ವಿಷ್ಣು, ರುದ್ರ, ಮುಂತಾದ ಕ್ರಮ ವಿಭೂತಿಗಳು; ಆನಂದತಾರತಮ್ಯ; ವ್ಯಾವಹಾರಿಕದೃಷ್ಟಿ, ಮೂರ್ತಿಭೇದಗಳಲ್ಲಿ ಉಪಾಸನಾಕ್ರಮಭೇದ;
28. ಶಿವಲಿಂಗಸ್ವರೂಪ; ಶಿವತತ್ವವನ್ನು ಜ್ಞಾಪಿಸುವ ಸಾಧನಕ್ಕೆ ಶಿವಲಿಂಗವೆಂದು ಹೆಸರು; ಶಿವನು ಸ್ವಯಂಜ್ಯೋತಿಸ್ವರೂಪನೂ, ಸ್ವಪ್ರಕಾಶಸ್ವರೂಪನೂ ಆಗಿದಾನೆ; ವ್ಯವಹಾರ ದೃಷ್ಟಿಯಿಂದ ಲಿಂಗಗಳನ್ನು ಹೇಳಿದೆ; ಪರವಿದ್ಯಾ, ಮಾಯಾ, ಜನಚಿತ್ತ, ಅಹಂಕಾರ, ಇಂದ್ರಿಯಗಳು,ಪಂಚಭೂತಗಳು, ಲೋಕಗಳು, ಜ್ಞಾನ, ಇವು ಶಿವಲಿಂಗಗಳು; ಷಟ್ಚಕ್ರಗಳಲ್ಲಿ ಧ್ಯಾನಮಾಡಬೇಕಾದ ರೀತಿ; ಅಂತರ್ಲಿಂಗ ಸ್ವರೂಪ; ಶಿವಾರ್ಚನಪ್ರಕಾರಗಳು; ಪ್ರತ್ಯಯಲಯ, ಜ್ಞಾನ, ಇವೇ ಮುಖ್ಯವಾದ ಅರ್ಚನ ಬಗೆಗಗಳು;
29. ಶಿವಸ್ಥಾನಗಳು; ಶಿವನನ್ನು ಕುರಿತು ವಿಷ್ಣುವಿನ ತಪಸ್ಸು; ಮಂತ್ರಕ್ಕೂ ಧ್ಯೇಯವಾದ ದೇವತೆಗೂ ತಾದಾತ್ಮ್ಯ; ಸ್ಪಂದ, ಶಬ್ದ, ಪ್ರಣವ, ಶಕ್ತಿ, ಪ್ರಕೃತಿ, ಇವುಗಳ ಸ್ವರೂಪ; ವಿಷ್ಣುವು ಮಾಡಿದ ವರ್ಣಮಾಲಾಸ್ತೋತ್ರ; ಮಂತ್ರ ಶಾಸ್ತ್ರದಲ್ಲಿ ನಂಬಿಕೆಯಿಂದ ಪ್ರಾರಂಭಿಸಿದರೂ, ಉಪಾಸನೆಯು ವೇದಾಂತತತ್ವದ ಅನುಭವದಲ್ಲಿ ಪರ್ಯವಸಾನವಾಗುವುದರಿಂದ ಆದೂ ಪ್ರಮಾಣವು : ಅಕಾರಾದಿಯಾಗಿ ಕ್ಷಕಾರಾಂತವಾಗಿರುವ ಐವತ್ತು ವರ್ಣಗಳಿಂದ ಕೂಡಿದ ಸ್ತೋತ್ರ; ಸಂತುಷ್ಟನಾಗಿ ಪ್ರತ್ಯಕ್ಷನಾದ ಶಿವನು ಸ್ತೋತ್ರದಿಂದ ಮೆಚ್ಚಿ ವಿಷ್ಣುವಿಗೆ ಶಿವಸ್ಥಾನಗಳನ್ನು ತಿಳಿಸಿ ಅನುಗ್ರಹಿಸಿದುದು;
30. ಭಸ್ಮಧಾರಣದ ಮಹಿಮೆ; ಶಿವಕ್ಷೇತ್ರಗಳಲ್ಲಿ ಭಕ್ತರಾದ ಉಪಾಸಕರು ಆಚರಿಸಬೇಕಾದ ಧರ್ಮಗಳಲ್ಲಿ ಭಸ್ಮಧಾರಣೆಯು ಮುಖ್ಯವಾದುದು; ಮಹಾದೇವನೇ ಮುಖ್ಯಭಸ್ಮ ಸ್ವರೂಪನು; ಭಕ್ತರ ಪಾಪಗಳನ್ನೂ, ಅಜ್ಞಾನವನ್ನೂ ಸುಟ್ಟು ನಾಶಮಾಡುವುದರಿಂದ ಮಹಾದೇವನೇ ಮುಖ್ಯವಾದ ಭಸ್ಮವು; ಭಸ್ಮದ ಬಗೆಗಳು, ಶ್ರೌತ, ಸ್ಮಾರ್ತ, ಲೌಕಿಕ; ಭಸ್ಮಧಾರಣ ಪ್ರಕಾರಗಳು; ಆಗ ಜಪಿಸಬೇಕಾದ ಮಂತ್ರಗಳು; ಉದ್ದೂಳನ, ತಿರ್ಯಕ್ತ್ರಿಪುಂಡ್ರ; ರಕ್ಷಾ, ಮಂಗಳ, ಪವಿತ್ರತೆಗಳಿಗೆ ಕಾರಣವಾದುದು; ಭಸ್ಮ ವೈಭವ;
31. ಶಿವನಿಗೆ ಪ್ರೀತಿಕರವಾದ ಧರ್ಮಗಳು; ಬ್ರಹ್ಮಾತ್ಮೈಕ್ಯಜ್ಞಾನ ನಾಮಜಪ, ಶಾಸ್ತ್ರಗುರೂಪದೇಶಗಳಲ್ಲಿ ವಿಶ್ವಾಸ, ವೇದಾಧ್ಯಯನ, ಪ್ರವಚನ, ತಿರ್ಯಕ್ತ್ರಿಪುಂಡ್ರಧಾರಣ, ಲಿಂಗ ಪೂಜಾ, ಸಾಧನವತುಷ್ಟಯಸಂಪಾದನ, ಗುರುಸೇವಾ; ಕುಂಬಾರಸ್ತ್ರೀಯ ಕಥೆ;
32. ಮಹಾದೇವನಲ್ಲಿ ಭಕ್ತಿ ಇಲ್ಲದಿರುವಿಕೆಗೆ ಕಾರಣಗಳು; ಹಿಂದಿನ ಕಾಲದಲ್ಲಿ ದ್ವಾದಶವರ್ಷಕ್ಷಾಮ, ಬ್ರಾಹ್ಮಣರು ಗೌತಮರ ಆಶ್ರಮದಲ್ಲಿ ಆಶ್ರಯವನ್ನು ಪಡೆದುದು; ಕಡೆಗೆ ಸೌಖ್ಯದಿಂದ ಕೃತಜ್ಞತೆಗೆ ಬದಲು ಆಸೂಯೆಯಿಂದ ಗೌತಮರ ವಿಷಯದಲ್ಲಿ ನಿಂದಾಪ್ರಚಾರ; ಬ್ರಾಹ್ಮಣರಿಗೆ ಗೌತಮರ ಶಾಪ; ಮಹೇಶ್ವರನಲ್ಲಿ ಭಕ್ತ್ಯಭಾವ;
33. ಪರತತ್ವನಾಮಜಪ; ಶಿವ, ರುದ್ರ, ಮಹಾದೇವ, ಮುಂತಾದ ನಾಮಗಳನ್ನು ಜಪಿಸುವುದರಿಂದ ಪಾಪಕ್ಷಯವೂ, ಶಿವ ಪ್ರೀತಿಯೂ ಉಂಟಾಗಿ ಜ್ಞಾನಪ್ರಾಪ್ತಿಗೆ ಸಹಾಯವಾಗುತ್ತದೆ
34. ಸಂಪ್ರದಾಯ ಸಿದ್ಧವಾದ ಗುರೂಪಸದನದ ಪ್ರಕಾರ; ಸತ್ಯಾಸ್ತೇಯಾದಿಗಳಿಂದ ಕೂಡಿ, ಕಾಮಕ್ರೋಧಾದಿಗಳನ್ನು ಬಿಟ್ಟು, ಗುರುವನ್ನು ವಿನಯದೊಡನೆ ಸೇವಿಸಬೇಕು. ಗುರುವು ಮಾಡಬೇಕಾದ ಉಪದೇಶ ಕ್ರಮ; ಶಿಷ್ಯನನ್ನು ಮಂಡಲದಲ್ಲಿ ಕೂರಿಸಿ, ಗುರುವು ಜಪಧ್ಯಾನಗಳೊಡನೆ ಗ್ರಂಥಿಚ್ಛೇದವನ್ನು ಮಾಡಬೇಕು; ಕರ್ಮಸಾಮ್ಯ ಶಕ್ತಿಪಾತಪೂರ್ವಕವಾಗಿ ಸಂಪ್ರದಾಯವನ್ನು ಅನುಸರಿಸಿ ಉಪದೇಶವನ್ನು ಮಾಡಬೇಕು;
35. ಸಂಪ್ರದಾಯಪರಂಪರೆಯ ವಿವರಣೆ; ಶಿವನೇ ಆದಿಗುರುವು, ವಿಷ್ಣು, ಬ್ರಹ್ಮಾ, ಸನತ್ಕುಮಾರ, ವ್ಯಾಸ, ಸೂತ, ಶೌನಕಾದಿಋಷಿಗಳು; ಈ ವಿದ್ಯಾಸಂತತಿಯನ್ನು ತಿಳಿದು ಧ್ಯಾನಮಾಡಬೇಕು; ಶಿಷ್ಯನ ಚಿತ್ತಪಾಕವನ್ನು ಒಂದು ವರ್ಷಕಾಲ ಪರೀಕ್ಷಿಸಬೇಕು, ಪಾಕಾನುರೂಪವಾದ ಉಪ ದೇಶವು ಸಫಲವು; ಹೀಗೆ ಮಾಡಿದರೆ ವಿದ್ಯೆಯು ವೀರ್ಯವತ್ತರವಾಗುತ್ತದೆ; ಗುರುಶಿಷ್ಯಪರಂಪರೆಯಲ್ಲಿ ಜ್ಞಾನ ಪ್ರವಾಹಜ್ಞಾನವು ಮೋಕ್ಷಸಾಧನವು;
36. ಸದ್ಯೋಮುಕ್ತಿಕರಕ್ಷೇತ್ರದ ವರ್ಣನೆ; ಶಿವನನ್ನು ಕುರಿತು ಪಾರ್ವತಿಯ ಪ್ರಾರ್ಥನೆ; ಕ್ಷೇತ್ರವಾಸ, ತೀರ್ಥಸ್ನಾನ, ದೇವದರ್ಶನ, ಪೂಜಾಧ್ಯಾನಗಳು ಚಿತ್ತಶುದ್ಧಿ ದ್ವಾರಾ ಮೋಕ್ಷಸಾಧನಗಳು; ದಕ್ಷಿಣ ಕೈಲಾಸಕ್ಷೇತ್ರದಲ್ಲಿ ಸುವರ್ಣ ಮುಖರೀನದೀಸ್ನಾನ, ಕಾಳಹಸ್ತಿನಾಥೇಶ್ವರನ ದರ್ಶನ;
37. ಮುಕ್ತ್ಯುಪಾಯ ವಿವರಗಳು; ವ್ಯಾಸನನ್ನು ಕುರಿತು ಜೈಮಿನಿಯಪ್ರಶ್ನೆ; ಶಂಕರನು ವಿಷ್ಣುವಿಗೆ ಹೇಳಿದ್ದಂತೆ ವ್ಯಾಸನ ಉಪದೇಶ; ವ್ಯಾಘ್ರಪುರಕ್ಷೇತ್ರ, ವೃದ್ಧಾಚಲ, ವೇದಾರಣ್ಯ, ಕುಂಭಕೋಣ, ವಾರಾಣಸೀ, ಹಾಲಾಸ್ಯಕ್ಷೇತ್ರ; ಪಾಪಿಯೊಬ್ಬನ ಕಥೆ, ದುಷ್ಕರ್ಮಫಲವಾಗಿ ಬ್ರಹ್ಮರಾಕ್ಷಸ ಗ್ರಹಣ; ಹಾಲಾಸ್ಯಕ್ಷೇತ್ರದಲ್ಲಿ ಮೋಚನ; ಷಡಕ್ಷರಜಪ, ಧ್ಯಾನ ಇವುಗಳಿಂದ ಪಾಪಗಳು ನಾಶವಾಗಿ ಜ್ಞಾನಲಾಭವು ಸುಲಭವೂ ಶಿಘ್ರವೂ ಆಗುತ್ತದೆ;
38. ಭುಕ್ತಿ, ಮುಕ್ತಿ, ಮುಂತಾದ ಸರ್ವಫಲಸಾಧನ ವಿವರಣೆ; ಶಿವನನ್ನು ಕುರಿತು ವ್ಯಾಸನ ತಪಸ್ಸು; ವ್ಯಾಸಕೃತ ಶಿವಸ್ತೋತ್ರ; ವ್ಯಾಸನಿಗೆ ಶಿವನು ಪ್ರತ್ಯಕ್ಷನಾಗಿ ಭುಕ್ತಿ ಮುಕ್ತಿಸಾಧನಗಳಾದ ಕರ್ಮಜ್ಞಾನಗಳನ್ನು ತಿಳಿಯ ಹೇಳಿದುದು; ಪರಮುಕ್ತಿಸ್ವರೂಪವಿಮರ್ಶೆ; ಜ್ಞಾನದಿಂದ ಅಜ್ಞಾನ ನಾಶ, ನಿತ್ಯಸಿದ್ಧವಾದ ಮುಕ್ತಿಯು ಪ್ರಾಪ್ತವಾದ ಹಾಗೆ ಆಗುತ್ತದೆ; ಜೀವಪರೈಕ್ಯಜ್ಞಾನ; ಮುಕ್ತಿಯ ಸ್ವರೂಪವು ಸಾಯುಜ್ಯವಾಗಿರಬೇಕು; ಅದು ಕರ್ಮಮಾತ್ರ ಲಭ್ಯವಲ್ಲವು; ಸಮುಚ್ಚಯ ಲಭ್ಯವು ಅಲ್ಲವು; ಕ್ರಿಯಾಜ್ಞಾನಗಳ ವಿರೋಧ; ಸಾರೂಪ್ಯ ಸಾಮೀಪ್ಯ, ಸಾಲೋಕ್ಯ, ಎಂಬ ಅಪರಮುಕ್ತಿಗಳು ಕರ್ಮಸಾಧ್ಯಗಳಾಗಬಹುದು; ಅಧಿಕಾರಿಯ ಸಂಸ್ಕೃತಿತಾರತಮ್ಯವನ್ನು ಅನುಸರಿಸಿ ಉಪಾಸನಾ, ಕರ್ಮಗಳನ್ನು ವಿಧಿಸಿದೆ; ಇವು ಅಜ್ಞಾನವಿಷಯಕವೆಂದು ಜೀವನ್ಮುಕ್ತಸ್ಥಿತಿಯಲ್ಲಿ ಹೇಳಬಹುದಾದರೂ, ವ್ಯಾವಹಾರಿಕವಾದ ಐಹಿಕ ಆಮುಷ್ಮಿಕಫಲಸಾಧನವಾಗುತ್ತವೆ; ಸಾಮಾನ್ಯ ಜನರೂ ಅವನ್ನು ಬಿಡುವುದು ನಾಸ್ತಿಕ್ಯವೆನಿಸುತ್ತದೆ; ಬಿಟ್ಟರೆ ಸಂಸಾರವು ತಪ್ಪದು;
39. ವೇದವಾಕ್ಯಗಳಲ್ಲಿ ದ್ವೈತಪರಗಳೆಂದೂ, ಅದ್ವೈತಪರಗಳೆಂದೂ, ಎರಡು ಬಗೆ; ಇವುಗಳಿಗೆ ಆಪಾತವಾಗಿ ತೋರುವ ವಿರೋಧ; ದ್ವೈತವು ಕಲ್ಪಿತವು; ಅದ್ವೈತವೇ ಆಧ್ಯಾಸಿಕವಾಗಲಿ ಎನ್ನಲಾಗದು; ದ್ವೈತವು ಪರಿಣಾಮಿಯಾಗಿ ಅನಿತ್ಯವಾಗಿರುವುದು ಎಲ್ಲರಿಗೂ ಗೊತ್ತಾಗುತ್ತಿದೆ; ಶೂನ್ಯವು ಅಧಿಷ್ಠಾನವಾಗಲಾರದು; ದ್ವೈತವು ಪ್ರತ್ಯಕ್ಷ ಗಮ್ಯ, ಸರ್ವವಿದಿತ; ಅದ್ವೈತವು ಶ್ರುತಿಮಾತ್ರಗಮ್ಯ; ಅತೀಂದ್ರಿಯಗಳಾದ ಧರ್ಮಸದ್ಗತಿಗಳಲ್ಲಿ ಶ್ರುತಿಯೇ ಪ್ರಮಾಣವಾಗಿರುವಂತೆ, ಅದ್ವೈತದಲ್ಲೂ ಶ್ರುತಿಯೇ ಪ್ರಮಾಣವಾಗಿರಬಲ್ಲದು; ವೇದವು ಅಪೌರುಷೇಯವಾದುದು; ದೋಷಸಂಬಂಧವಿಲ್ಲದುದು; ದ್ವೈತವಾಕ್ಯಗಳೂ ಅಧ್ಯಾರೋಪ ಅಪವಾದ ನ್ಯಾಯವನ್ನು ಅನುಸರಿಸಿ, ಅದ್ವೈತವನ್ನು ತಿಳಿಸುವುದರಲ್ಲಿಯೇ ತಾತ್ಪರ್ಯವುಳ್ಳವು; ಯಾವುದು ಎಲ್ಲ ಕಾಲಗಳಲ್ಲೂ ಇರಬಲ್ಲದೋ ಅದು ಅಬಾಧ್ಯ ನಿತ್ಯ; ದ್ವೈತವು ವಿಕಾರಿ, ಅನಿತ್ಯ; ಜಗತ್ತು ಭಾವವೂ ಅಲ್ಲವೂ, ಅಭಾವವೂ ಅಲ್ಲ, ಅನಿರ್ವಚನೀಯ, ಸದಸದ್ವಿಲಕ್ಷಣ; ಅಧ್ಯಸ್ತವಾದುದರ ಬಾಧವೆಂದರೆ ಅಧಿಷ್ಠಾನಮಾತ್ರ ಉಳಿಯುವಿಕೆಯಾಗಿದೆ; ಎಲ್ಲ ದರ್ಶನಗಳೂ ವೇದಾರ್ಥಜ್ಞಾನಕ್ಕೆ ಅಂಗಗಳು; ಜ್ಞಾನಕರ್ಮಗಳಿಗೆ ಫಲಭೇದ; ಮತ್ತು ಪ್ರಕರಣಭೇದ; ಮೀಮಾಂಸಕರ ಸಮಾಧಾನ; ಆಕ್ಷೇಪಕ್ಕೆ ಶ್ರವಣಮನನ ನಿದಿಧ್ಯಾಸನಗಳು ದರ್ಶನ ಸಾಧನ;
40. ಸರ್ವಸಿದ್ಧಿಕರಧರ್ಮಗಳು; ಚಿತ್ತಶುದ್ಧಿಗೆ ಕಾರಣವಾದ ಕರ್ಮಗಳ ವಿವರಣೆ; ಕಾಯಿಕ, ವಾಚಿಕ, ಮಾನಸಿಕ ಎಂದು ಕರ್ಮದ ಮೂರು ಬಗೆ; ಶ್ರೌತಸ್ಮಾರ್ತಕರ್ಮಗಳು; ವಿಷ್ಣ್ವಾದಿನಾಮ ಜಪ ಪೂಜಾಗಳೂ ಸಫಲಗಳೇ; ಶಿವ ಜ್ಞಾನಸಮವಾದ ಜ್ಞಾನವಿಲ್ಲ ; ವೇದಸಮವಾದ ಪ್ರಮಾಣವಿಲ್ಲ, ಗಂಗಾಸದೃಶತೀರ್ಥವಿಲ್ಲ; ಶಿವಸ್ಥಾನಸದೃಶಕ್ಷೇತ್ರವಿಲ್ಲವು;
41. ಶ್ರೇಯಸ್ಕರವಾದ ಸತ್ಕರ್ಮಗಳನ್ನು ಮಾಡಲು ಅಡ್ಡಿಯುಂಟಾಗುವುದಕ್ಕೂ, ನಮ್ಮ ಮನಸ್ಸಿನಲ್ಲಿ ಆ ಇಚ್ಚೆಯುಂಟಾಗದಿರುವುದಕ್ಕೂ, ನಮ್ಮ ಪಾಪಗಳೇ ಕಾರಣವಾಗಿರುತ್ತವೆ. ಪಾಪಗಳನ್ನು ನಿವಾರಿಸಿಕೊಳ್ಳಲು ಅವುಗಳ ತಿಳಿವಳಿಕೆಯು ಆವಶ್ಯಕವು. ಅದಕ್ಕಾಗಿ ಪಾಪಗಳ ಸ್ವರೂಪವನ್ನೂ ವಿವರಿಸಿದೆ; ಹತ್ತು ಬಗೆಯ ಪಾಪಗಳು; ಮಹಾಪಾತಕ, ಅತಿಪಾತಕ, ಪ್ರಾಸಂಗಿಕ, ಉಪಪಾತಕ, ಜಾತಿಭ್ರಂಶಕರ, ಸಂಕೀರ್ಣಕರಣ, ಅಪಾತ್ರೀಕರಣ, ಮಲಾವಹ, ಪ್ರಕೀರ್ಣಕ, ಎಂಬ ಪಾಪಗಳ ಸ್ವರೂಪವಿವರಣೆ; ಶ್ರುತಿಸ್ಮೃತಿಗಳಲ್ಲಿ ಹೇಳದಿರುವ ಯಾವುದೊಂದು ಕೆಟ್ಟಕೆಲಸವನ್ನು ಮಾಡುವುದೂ, ಪಾಪವೆನಿಸುತ್ತದೆ; ಹೆಂಗುಸರಿಗೂ ಇದೇ ನಿಯಮವು ಅನ್ವಯಿಸುತ್ತದೆ;
42. ಪಾಪಗಳು ಕಾರಣಾಂತರದಿದ ಸಂಭವಿಸಿದ್ದರೆ ಅಂತಹ ಪಾಪಗಳನ್ನು ನಿವಾರಿಸಲು ಪ್ರಾಯಶ್ಚಿತ್ತಗಳನ್ನು ಹೇಳಿದೆ; ಕರ್ತೃತ್ವವು ದೇಹೇಂದ್ರಿಯ ಪ್ರಾಣ ಅಂತಃಕರಣ ಆತ್ಮ ಇವುಗಳಲ್ಲಿ ಯಾವುದರಲ್ಲೂ ವಾಸ್ತವವಾಗಿ ಇಲ್ಲವು. ಅದು ಆತ್ಮಸ್ವರೂಪದ ಅಜ್ಞಾನದಿಂದ, ಅಧ್ಯಾಸದಿಂದ, ಅಭಿಮಾನದಿಂದ ಜೀವನಲ್ಲಿರುವಂತೆ ತೋರುತ್ತಿರುತ್ತದೆ; ಅದು ಆತ್ಮಸ್ವರೂಪಜ್ಞಾನದಿಂದ ನಾಶಹೊಂದುತ್ತದೆ; ಈ ದೇಹೇಂದ್ರಿಯಾಂತಃಕರಣಪ್ರಾಣಗಳೆಂಬ ಸಂಘಾತವು ಆರು ಭಾವವಿಕಾರಗಳುಳ್ಳುದು, ಅನಿತ್ಯವು; ಕರ್ಮದಿಂದ ಬರುವ ಫಲಗಳೂ ಅಂತಹವೇ ಆಗಿವೆ. ಅಮೂರ್ತನೂ ನಿತ್ಯನೂ ಆಗಿರುವ ಆತ್ಮನನ್ನು ಇವು ಸಂಬಂಧಿಸಲಾರವು, ಬಂಧಿಸಲೂ ಅರವು; ಅಜ್ಞಾನದಿಂದುಂಟಾದ ಅಭಿಮಾನದಿಂದ ತೋರುತ್ತಿರುವ ಬಂಧವು ಆತ್ಮಜ್ಞಾನದಿಂದ ನಷ್ಟವಾಗಲು, ಕರ್ಮವು ಬಂಧಕವಾಗದು; ಆವಿರ್ಭಾವ, ತಿರೋಭಾವ, ಸಂಕೋಚ, ವಿಕಾಸಗಳಿಲ್ಲದ ಆತ್ಮನನ್ನು ಕರ್ಮವು ಬಂಧಿಸಲಾರದು; ಅಲ್ಲದೆ ಸರ್ವಸಾಕ್ಷಿಯಾದ ಆತ್ಮನನ್ನು ಕರ್ಮವು ಬಂಧಿಸಲಾರದು; ಅಧಿಷ್ಠಾನರೂಪನಾದ ಆತ್ಮನನ್ನು ಅಧ್ಯಸ್ತಮಾಯಾಕಾರ್ಯಗಳು ಬಂಧಿಸಲಾರವು; ಅಜ್ಞಾನದ ಅನುಭವದಲ್ಲಿರುವ ಕಾಮಶ್ರದ್ಧಾ ಇವೂ ಜ್ಞಾನದಿಂದ ನಷ್ಟವಾಗುತ್ತವೆ. ಜೀವಾತ್ಮ ಪರಮಾತ್ಮರಿಗೆ ತೋರುವ ಭೇದವೂ ವಾಸ್ತವವಾದುದಲ್ಲ; ಸಚ್ಚಿದಾನಂದರೂಪನಾದ ಆತ್ಮನನ್ನು ಕರ್ಮಗಳು ಬಂಧಿಸಲಾರವು; ನಿರ್ಲಿಪ್ತನಾದ ಆತ್ಮನಿಗೆ ಪ್ರೇರಕತ್ವವೂ ಸಲ್ಲದು; ಆದುದರಿಂದ ಬ್ರಹ್ಮಾತ್ಮೈಕ್ಯಜ್ಞಾನವು ಎಲ್ಲ ಪಾಪಗಳಿಗೂ ಪ್ರಾಯಶ್ಚಿತ್ತವು; ಶಿವೋತ್ಕರ್ಷವನ್ನು ಹೇಳಿದ್ದರೂ ಈ ಗ್ರಂಥವು ಶೈವಪುರಾಣವಲ್ಲವು. ಅದ್ವೈತಬೋಧನೆಯಲ್ಲಿ ತಾತ್ಪರ್ಯವುಳ್ಳ ಈ ಗ್ರಂಥದಲ್ಲಿ ಅಂತಹ ಸಂಕುಚಿತಭಾವಕ್ಕೆ ಪ್ರಾಧಾನ್ಯವಿಲ್ಲವು; ನಹಿನಿಂದಾನ್ಯಾಯ; ಶಿವೋತ್ಕರ್ಷದ ಔಚಿತ್ಯವು; ಶಿವಾರಾಧನದ ಬಗೆಗಳು, ಕಾಲಗಳು, ಕ್ಷೇತ್ರಗಳು;
43. ಸರ್ವಜನಸಾಧಾರಣವಾದ ಪಾಪಶುದ್ಧಿಗೆ ಉಪಾಯಗಳು; ಕ್ಷೇತ್ರಯಾತ್ರೆ, ತೀರ್ಥಸ್ನಾನ, ಶಿವಪೂಜಾ, ಮಂತ್ರ, ಜಪಗಳು; ಅಮರೇಶ, ಪ್ರಭಾಸ, ನೈಮಿಶ, ಪುಷ್ಕರ, ಆಷಾಢಿ, ನಾಕುಲ, ಶ್ರೀಪರ್ವತ, ಮಹಾಕಾಳ, ಮಧ್ಯಾರ್ಜುನ, ಗಯಾ, ಕುರುಕ್ಷೇತ್ರ, ಕನಖಲ, ಅವಿಮುಕ್ತ, ಭದ್ರಕರ್ಣ, ಕಾಲಂಜರ, ವ್ಯಾಘ್ರಪುರ, ಶಿವಗಂಗಾ, ಮುಂತಾದ ಕ್ಷೇತ್ರಗಳ ಮಹಿಮೆಗಳು; ಪ್ರಾಯಶ್ಚಿತ್ತದಿಂದ ಪಾಪನಾಶವಾಗುವ ರೀತಿಯಲ್ಲಿ ನಾಲ್ಕು ಮೆಟ್ಟಿಲುಗಳು;
44. ಆತ್ಮಜ್ಞಾನವು ಸರ್ವಪ್ರಾಯಶ್ಚಿತ್ತವಾಗಿರಲು ಆತ್ಮವಸ್ತುವಿನ ಶುದ್ಧ ಸ್ವರೂಪವೇ ಕಾರಣವು; ಅನಾತ್ಮದಲ್ಲಿ ದೋಷ, ಆತ್ಮದೋಷರಹಿತ; ಜಡದಲ್ಲಿ ದೋಷ, ಆತ್ಮಜೇತನ ರೂಪನು; ವೃತ್ತಿಜ್ಞಾನದಲ್ಲಿ ದೋಷ, ಸ್ವರೂಪಜ್ಞಾನ ದೋಷಶೂನ್ಯ; ಆತ್ಮನು ಆನಂದರೂಪನು, ಪರಮ ಪ್ರೇಮಾಸ್ಪದನು, ದೋಷಸಂಪರ್ಕರಹಿತನು; ಅನುಭವದ ವಿಭಜನೆ; ಸುಖವು ವಿಷಯದ್ದಲ್ಲವು, ಇಂದ್ರಿಯದ್ದೂ ಅಲ್ಲವು, ಮನಸ್ಸಿನದೂ ಅಲ್ಲವು, ಆದುದರಿಂದ ಆತ್ಮನು ಸುಖಸ್ವರೂಪನು; ಅವಸ್ಥಾತ್ರಯದಲ್ಲಿ ಆತ್ಮನಿಗೆ ಬರುವ ಒಟ್ಟು ಅನುಭವದಿಂದ ಆಗುವ ತಿಳಿವಳಿಕೆಯು ಪೂರ್ಣವಾದುದು: ಸುಷುಪ್ತಿಯಿಂದ ಎಚ್ಚರಕ್ಕೆ ಹಿಂತಿರುಗುವುದಕ್ಕೆ ಮೂಲಾವಿದ್ಯೆಯೇ ಕಾರಣ; ಬ್ರಹ್ಮತತ್ವದಲ್ಲಿ ಆಪೇಕ್ಷಿಕವಾದ ಸೃಷ್ಟ್ಯಾರಂಭದಲ್ಲಿ ಉಂಟಾಗುವ ಸ್ಪಂದ, ಮಾಯಾ, ಆದಿಶಕ್ತಿ, ಪರಾಶಕ್ತಿ, ದೇವೀ, ಅವಿದ್ಯಾ, ಕಾಮ, ಕರ್ಮ, ದೈವ ಧರ್ಮ, ಇವೆಲ್ಲವೂ ಒಂದೇತತ್ವದ ರೂಪಾಂತರಗಳು; ಆತ್ಮನು ಪಾರಮಾರ್ಥಿಕವಾಗಿ ಸ್ವತಃ ಶುದ್ಧನು, ಆಜ್ಞಾನವೆಂಬ ಉಪಾಧಿಯ ಸಂಬಂಧದಿಂದ ಅಶುದ್ಧನಂತೆ ತೋರುತ್ತಾನೆ, ಆದುದರಿಂದ ಆತ್ಮಜ್ಞಾನದಿಂದಲೇ ಉತ್ತಮಶುದ್ಧಿಯು; ಅಶುದ್ಧಿಯು ವ್ಯಾವಹಾರಿಕವಾದುದು; ಪರಶಿವಧ್ಯಾನ, ಪ್ರಾಣಾಯಾಮ, ಸಮಾಧಿ ಇವುಗಳಿಂದ ಶುದ್ದಿಯಾಗುತ್ತದೆ; ಜಡವಸ್ತುಗಳಿಗೆ ಶುದ್ಧಿಪ್ರಕಾರಗಳು, ಮೃಣ್ಮಯಗಳು, ಧಾನ್ಯಗಳು, ವಸ್ತ್ರಗಳು, ಲೋಹಪಾತ್ರೆಗಳು ಇವುಗಳ ಶುದ್ಧಿಕ್ರಮಗಳು; ದೇವೋತ್ಸವದಲ್ಲಿ ಸ್ಪೃಷ್ಟಿದೋಷವಿಲ್ಲವು; ನಿತ್ಯಶುದ್ಧ ಬ್ರಹ್ಮಚಿಂತನವು ಶುದ್ಧಿಕರವು; ಎಲ್ಲವನ್ನೂ ಪರಮೇಶ್ವರ ಸ್ವರೂಪವಾದುದೆಂದು ಅನುಭವದಿಂದ ಭಾವಿಸುವುದೇ ಉತ್ತಮವಾದ ಶುದ್ಧಿಪ್ರಕಾರವು;
45. ಬ್ರಹ್ಮ ಭಾವನೆಯಿಂದ ಶುದ್ಧಿಯುಂಟಾಗಬೇಕಾದರೆ ಹೃದಯವು ಶುದ್ಧವಾಗಿರಬೇಕು; ಹೃದಯಶುದ್ಧಿಯು ಅಭಕ್ಷ್ಯ ನಿವೃತ್ತಿ ಮತ್ತು ಭಕ್ಷ್ಯಭೋಜನಗಳಿಂದ ಆಗುತ್ತದೆ. ಅಭಕ್ಷ್ಯನಿವಾರಣೆಗಾಗಿ ಅಭಕ್ಷ್ಯಸ್ವರೂಪವನ್ನು ತಿಳಿಯಬೇಕು; ಆಹಾರಶುದ್ಧಿಯಿಂದ ಚಿತ್ತಶುದ್ಧಿ; ಅನ್ನದ ಪರಿಣಾಮದಲ್ಲಿ ಮೂರು ಬಗೆಗಳು; ಭಕ್ಷ್ಯಾಭಕ್ಷ್ಯವಿವೇಚನೆ, ವಿಧಿನಿಷೇದಗಳು ವ್ಯಾವಹಾರಿಕದೃಷ್ಟಿಯಿಂದ ಅಜ್ಞಾನಿಗೋಸ್ಕರ ಹೇಳಿದೆ; ಜ್ಞಾನಿಯಾದ ಜೀವನ್ಮುಕ್ತನಿಗೆ ವಿಧಿನಿಷೇಧಗಳು ಅನ್ವಯಿಸಲಾರವು; ಅಭಕ್ಷ್ಯ ಮತ್ತು ಭಕ್ಷ್ಯಪದಾರ್ಥಗಳು; ಚಿತ್ತವು ಶುದ್ಧವಾಗಲು ಆತ್ಮಜ್ಞಾನ ಪ್ರಾಪ್ತಿಗೆ ಹದಿನೆಂಟು ವಿದ್ಯೆಗಳೂ ಬೇಕು; ಶೈವ, ವೈಷ್ಣವ, ಶಾಕ್ತೇಯ, ಮತ್ತು ಅವೈದಿಕಮತಗಳೂ ಸೌಹಾರ್ದದಿಂದಿರಬೇಕು; ವೇದಾನುಸಾರಿಯಾದ ಮತವೇ ಪ್ರಮಾಣವು;
46. ಮರಣಕಾಲವು ಸಮೀಪಿಸಲು ಮುಂದಕ್ಕೆ ತಕ್ಕ ಧರ್ಮಗಳನ್ನು ಆಚರಿಸಬೇಕು; ಅದಕ್ಕಾಗಿ ಮೃತ್ಯುಸೂಚಕವಾದ ಚಿನ್ಹೆಗಳ ತಿಳಿವಳಿಕೆಯು ಆವಶ್ಯಕವು; ಸೋಮಚ್ಛಾಯೆಯು ಕಾಣದಿರುವುದು, ಕಿರಣವಿಲ್ಲದ ಸೂರ್ಯದರ್ಶನ, ಭೂತ ಪ್ರೇತಾದಿ ದರ್ಶನ, ಹದ್ದು ತಲೆಯ ಮೇಲೆ ಕೂರುವುದು, ಮೋಡವಿಲ್ಲದೆ ಕಾಮನಬಿಲ್ಲನ್ನು ನೋಡುವುದು, ಸ್ವಪ್ನದಲ್ಲಿ ದಕ್ಷಿಣದಿಗ್ಯಾನ, ಹಗಲು ನಕ್ಷತ್ರಗಳನ್ನು ಕಾಣುವುದು, ಸೂರ್ಯಚಂದ್ರಮಂಡಲಗಳಲ್ಲಿ ಬಿಲಗಳನ್ನು ನೋಡುವುದು, ಇಂದ್ರಿಯಪಾಟವನಾಶ; ಪಂಚಾಕ್ಷರೀಜಪ, ಶಿವಕ್ಷೇತ್ರಗಳ ಸೇವನ, ವೃದ್ಧಾಚಲ, ಹಾಲಾಸ್ಯ, ಜಪ್ಯೇಶ್ವರ, ಕುಂಭಕೋಣ, ಶಿವಗಂಗಾ, ವ್ಯಾಘ್ರಪುರ, ಈ ಕ್ಷೇತ್ರಗಳಲ್ಲಿ, ತೀರ್ಥಸ್ನಾನ, ದೇವದರ್ಶನ, ಮಂತ್ರಜಪ, ಇವನ್ನು ಆಚರಿಸುತ್ತಿರಬೇಕು; ಎಲ್ಲಕ್ಕೂ ಮಿಗಿಲಾಗಿ ಜ್ಞಾನಸಂಪಾದನೆ;
47. ಸಂಚಿತವಾಗಿರಬಹುದಾದ ಪಾಪಗಳ ಸ್ವರೂಪಫಲಗಳ ವಿವರಣೆ; ಅವುಗಳ ನಿವಾರಣೆಗೆ ಉಪಾಯಗಳು; ಬ್ರಹ್ಮಹತ್ಯೆಯಿಂದ ಕ್ಷಯರೋಗ, ಗುರುನಿಂದೆಯಿಂದ ಮೂರ್ಛೆರೋಗ, ಮಾತಿಗೆ ತಪ್ಪುವುದರಿಂದ ಅಲ್ಪಾಯುಸ್ಸು, ಪಂಚಮಹಾ ಯಜ್ಞಗಳನ್ನು ಬಿಡುವುದರಿಂದ ಹೀನಜನ್ಮ, ಮದ್ಯಪಾನ ಮಾಡಿದರೆ ಮೂಗನಾಗುವಿಕೆ, ಹೀಗೆಯೇ ಇನ್ನೂ ಅನೇಕ ಪಾಪಗಳನ್ನು ಅವುಗಳ ಫಲವನ್ನೂ ಕರ್ಮ ವಿಪಾಕಧರ್ಮಶಾಸ್ತ್ರದಲ್ಲಿ ಹೇಳಿದೆ; ಪ್ರವೃತ್ತಿಮಾರ್ಗ, ನಿವೃತ್ತಿಮಾರ್ಗಗಳ ಸ್ವರೂಪ, ಕರ್ಮದಿಂದ ಆಗುವ ಫಲ; ದೃಕ್, ದೃಶ್ಯಗಳ ವಿವೇಚನೆ; ವೃತ್ತಿಜ್ಞಾನವೆಂದೂ ಸ್ವರೂಪಜ್ಞಾನವೆಂದೂ ಜ್ಞಾನದ ಎರಡು ಬಗೆಗಳು; ದೇವಿಯು ವರ್ಣಮಾಲಾಸ್ವರೂಪಿಣೀಶಕ್ತಿಯು;