ಶ್ರೀಮತ್ಸ್ಕಾಂದಪುರಾಣಾಂತರ್ಗತಾ – ಸೂತಸಂಹಿತಾ
ವಿಷಯಾನುಕ್ರಮಣಿಕೆ
ಮುನ್ನುಡಿ
ಶಿವಮಾಹಾತ್ಮ್ಯಖಂಡ
1. ಲೋಕಾನುಗ್ರಹಕ್ಕಾಗಿ ವ್ಯಾಸರು ಪರಶಿವಸ್ವರೂಪವನ್ನು ವಿವರಿಸಿದುದು; ನೈಮಿಷಾರಣ್ಯದಲ್ಲಿ ಸತ್ರಯಾಗವನ್ನು ಮಾಡಿ ಪರಿಶುದ್ಧರಾದ ಮುನಿಗಳು ಅಲ್ಲಿಗೆ ಬಂದ ಸೂತಮುನಿಯನ್ನು ಕೇಳಿದುದು; ಸೂತನು ಹೇಳಿದುದರಿಂದ ಸೂತಸಂಹಿತೆ ಎಂದು ಹೆಸರು; ಮಹಾಪುರಾಣಗಳ ವಿವರಣೆ; ಇವನ್ನು ವ್ಯಾಸರು ರಚಿಸಿದರು; ಉಪಪುರಾಣಗಳನ್ನು ಇತರ ಮುನಿಗಳು ರಚಿಸಿದರು; ಸೂತಸಂಹಿತೆಯು ಸ್ಕಾಂದಪುರಾಣದ ಎರಡನೆಯ ಸಂಹಿತೆಯು; ವೇದಗಳನ್ನೂ ವ್ಯಾಸರು ವಿಂಗಡಿಸಿದರು
2. ಮುನಿಗಳು ಜಗತ್ಕಾರಣತತ್ವಸ್ವರೂಪವನ್ನು ವಿವರಿಸಬೇಕೆಂದು ಕೇಳಲು, ಸೂತನು ಅಥರ್ವಶಿರೋಪನಿಷತ್ತಿನಲ್ಲಿ ರುದ್ರನು ದೇವತೆಗಳಿಗೆ ಉಪದೇಶಮಾಡಿದುದನ್ನೇ ತಿಳಿಸಿ, ಅದಕ್ಕೆ ಯೋಗ್ಯತೆಯುಂಟಾಗಲು ಪಾಶುಪತವ್ರತವನ್ನು ಉಪದೇಶಿಸಿದುದು
3. ಪರತತ್ವವನ್ನು ತಿಳಿಯದೆ ವಿಷ್ಣುವೂ ಮೋಹಿತನಾಗಿರಲು, ನಂದೀಶ್ವರನು ಬಂದು ವಿವೇಕವನ್ನು ಹೇಳಿದುದು; ವಿಷ್ಣು ಮುಂತಾದವರು ಶಿವನನ್ನು ಪೂಜಿಸಲು ಪ್ರತ್ರಕ್ಷನಾದ ಶಿವನನ್ನು ವಿಷ್ಣ್ವಾದಿದೇವತೆಗಳು ಸ್ತುತಿಸಿದುದು.
4. ಆ ಶಿವಪೂಜೆಯ ಪ್ರಕಾರವನ್ನು ಋಷಿಗಳು ಕೇಳಲು ಸೂತನು ಅದನ್ನು ವಿವರಿಸಿದುದು; ವರ್ಣಾಶ್ರಮಿಗಳಿಗೆ ತಕ್ಕಂತೆ ಪೂಜಾಪ್ರಕಾರಗಳು; ಎಲ್ಲರಿಗೂ ಇಷ್ಟಪ್ರಾಪ್ತಿ; ಪುಲ್ಕಸನ ಕಥೆ; ಅವನಿಗೂ ಸದ್ಗತಿಪ್ರಾಪ್ತಿ
5. ಶಿವನೂ ಶಕ್ತಿಯಿಂದ ಕೂಡಿಯೇ ಫಲವನ್ನು ಕೊಡಬಲ್ಲನು; ಅದುದರಿಂದ ಶಕ್ತಿಯನ್ನು ಒಲಿಸಿಕೊಳ್ಳಬೇಕು; ಶಕ್ತಿ ಪೂಜೆಯ ಪ್ರಕಾರ; ಪರಾಶಕ್ತಿಯ ಪೂಜೆಯಲ್ಲಿ ಬಾಹ್ಯ, ಆಂತರ ಎಂದು ಎರಡು ಬಗೆ; ಮಾತೃಕಾ ಮಂತ್ರದಿಂದ ಪೂಜೆಯು ಸ್ಥೂಲ, ಸೂಕ್ಷ್ಮ, ಸೂಕ್ಷ್ಮತರ ಎಂದು ಮೂರು ಬಗೆಯಾಗಿದೆ; ಕ್ರಮವಾಗಿ ಅಧಿಕಾರವನ್ನು ಪಡೆಯಬೇಕು
6. ಈ ಮೆಲ್ತರದ ಪೂಜೆಯಲ್ಲಿ ಆಶಕ್ತರಾದವರು ಶಿವಭಕ್ತರ ಪೂಜೆಯಿಂದ ಕ್ರಮವಾಗಿ ಫಲವನ್ನು ಪಡೆಯಬಹುದು; ಶಿವಭಕ್ತನಾದ ವೈಶ್ಯನ ಮತ್ತು ಅವನ ನಾಲ್ಕು ಮಕ್ಕಳ ಕಥೆ
7. ಮುಕ್ತಿಪ್ರಾಪ್ತಿಗೆ ಸಾಧನಗಳು; ಕೇವಲ ಜ್ಞಾನ; ಜ್ಞಾನಕರ್ಮ ಸಮುಚ್ಚಯ; ಕರ್ಮಗಳು; ಕ್ಷೇತ್ರತೀರ್ಥಸೇವೆ; ನಾರಾಯಣನು ವ್ಯಾಸನಿಗೆ ಹೇಳಿದ ಉಪದೇಶ; ಶಿವನು ದೇವಿಗೆ ತಿಳಿಯಹೇಳಿದ್ದುದನ್ನೇ ನಾರಾಯಣನಿಗೂ ಉಪದೇಶಮಾಡಿದನು; ವರ್ಣಾಶ್ರಮಿಗಳಿಗೆ ತಕ್ಕಂತೆ ಮುಕ್ತಿಮಾರ್ಗನಿರೂಪಣ; ವ್ಯಾಘ್ರಪುರಕ್ಷೇತ್ರತೀರ್ಥಸೇವೆಗಳು ಸುಲಭೋಪಾಯಗಳು
8. ಕಾಲತತ್ವಸ್ವರೂಪವಿವರಣೆ; ಪರತತ್ವವು ಕಾಲದ ಅಳತೆಗೆ ಮೀರಿದುದು; ಬ್ರಹ್ಮಕಲ್ಪಪ್ರಮಾಣ; ಲಯವಾಗುವ ಬಗೆ; ಎಲ್ಲವೂ ಪ್ರಕೃತಿಯಲ್ಲಿ, ಪ್ರಕೃತಿಯು ಮಾಯೆಯಲ್ಲಿ ಮಾಯೆಯು ಕಾಲದಲ್ಲಿ, ಕಾಲವು ಶಕ್ತಿಯಲ್ಲಿ, ಅದು ಬ್ರಹ್ಮತತ್ವದಲ್ಲಿ ಲಯವಾಗುತ್ತದೆ; ಎಲ್ಲವೂ ಕಲ್ಪಿತಸ್ವರೂಪವುಳ್ಳುದು; ಪರಶಿವತತ್ವವು ಕಾಲಾಪರಿಚ್ಛಿನ್ನವಾದುದು
9. ವಿಷ್ಣುವು ವರಾಹರೂಪದಿಂದ ಭೂಮಿಯನ್ನು ಉದ್ಧರಿಸಿದುದು; ವಿಷ್ಣುಮಹಿಮೆ; ವಿಷ್ಣುಸ್ತುತಿ
10. ಬ್ರಹ್ಮನು ಜಗತ್ತನ್ನು ಸೃಜಿಸಿದ ಕ್ರಮವಿವರಗಳು; ಮಾಯೆಯು ಅಜ್ಞಾನಸ್ವರೂಪವಾದುದು; ಮಾಯೆ ಅಥವಾ ಅವಿದ್ಯೆಯ ಐದು ಬಗೆಗಳು; ಚತುರ್ವರ್ಗಸೃಷ್ಟಿ; ಮಹದಾದಿಗಳ ಉತ್ಪತ್ತಿ ಅಥವಾ ಕಾರ್ಯರೂಪದಲ್ಲಿ ಆವಿರ್ಭಾವ; ನವವಿಧ ಸೃಷ್ಟಿವಿವರಣ; ಪಂಚೀಕರಣ ಪ್ರಕ್ರಿಯೆ;
11. ಹಿರಣ್ಯಗರ್ಭಾದಿಯಾದ ವಿಶೇಷಸೃಷ್ಟಿಕಥನ; ಸಮಷ್ಟಿ, ವೃಷ್ಟಿ, ರೂಪಗಳ ಆವಿರ್ಭಾವ; ಇಚ್ಛಾ, ಜ್ಞಾನ, ಕ್ರಿಯಾಶಕ್ತಿಗಳು; ಸೂತ್ರಾತ್ರಾ, ಅಂತರ್ಯಾಮೀ, ಈಶ್ವರ, ವಿರಾಟ್, ಜೀವ ಇತ್ಯಾದಿ ಆವಿರ್ಭಾವ; ಅರ್ಧನಾರೀಶ್ವರ, ವಿರಾಟ್, ಸ್ವರಾಟ್, ಸಂರಾಟ್, ಮನು, ಆಕೂತಿ ಮುಂತಾದವರೂ, ಇತರ ಪ್ರಾಣಿಗಳೂ ಕರ್ಮಾನುರೂಪವಾಗಿ ಪ್ರಾದುರ್ಭವಿಸಿದರು; ಸ್ವಭಾವವೇ ಸೃಷ್ಟಿಕಾರಣವಲ್ಲವು; ಕಾಲದೇಶಾಪೇಕ್ಷೆಯಿಂದ ಕರ್ಮವೇ ಸೃಷ್ಟ್ಯಾದಿಗಳಿಗೆ ಕಾರಣವು
12. ಚಾತುರ್ವರ್ಣ್ಯದ ಆವಿರ್ಭಾವ ಮತ್ತು ನಿರ್ಣಯ; ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರು; ಅನುಲೋಮ, ಪ್ರತಿಲೋಮ ಜಾತಿಗಳು; ಜನ್ಮದಿಂದಲೇ ಜಾತಿಯು; ಸ್ಥೂಲದೇಹಕ್ಕೇ ಜಾತಿಯು; ಆತ್ಮನಿಗೆ ಜಾತಿ ಇಲ್ಲವು; ಅಭಿಮಾನವೇ ಆತ್ಮನಿಗೂ ದೇಹಕ್ಕೂ ಸಂಬಂಧವು; ಆಶ್ರಮಗಳು; ವರ್ಣಾಶ್ರಮಧರ್ಮಗಳನ್ನು ಆಚರಿಸುವುದರಿಂದಲೇ ಎಲ್ಲರಿಗೂ ಮೋಕ್ಷಸಿದ್ಧಿಯು
13. ವರ್ಣಾಶ್ರಮ ಧರ್ಮಲೋಪವಾದರೆ ಪ್ರಾಯಶ್ಚಿತ್ತವು ತೀರ್ಥಕ್ಷೇತ್ರಗಳ ಸೇವನೆಯಿಂದ ಆಗುತ್ತದೆ; ಗಂಗಾದ್ವಾರ, ಸೋಮತೀರ್ಥ, ಕಾಶೀ, ಪ್ರಯಾಗ, ನರ್ಮದಾ, ಯಮುನಾ, ಸರಸ್ವತೀ, ಗೋದಾವರೀ, ಸುವರ್ಣ ಮುಖರೀ, ಕಾಲಹಸ್ತಿ, ಕಂಪಾ, ಕುಟಿಲಾ, ಮಣಿಮುಕ್ತಾ, ವೃದ್ಧಾಚಲ, ವ್ಯಾಘ್ರಪುರ, ಶಿವಗಂಗಾತಟಾಕ, ಗುಹ್ಯತೀರ್ಥ, ಬ್ರಹ್ಮತೀರ್ಥ, ಸೂರ್ಯಪುಷ್ಕರಿಣೀ ಇಂದ್ರಜಿದ್ರಥಸ್ತಂಭನ, ಕಾವೇರೀ, ಕ್ಷೀರಕುಂಡ, ದೇವತೀರ್ಥ, ರಾಮೇಶ್ವರ ಮುಂತಾದವು ತೀರ್ಥಕ್ಷೇತ್ರಗಳಲ್ಲಿ ಮುಖ್ಯವಾದವು
ಜ್ಞಾನಯೋಗಖಂಡ
1. ಜ್ಞಾನಯೋಗ ಸಂಪ್ರದಾಯಪರಂಪರೆ; ಕೈಲಾಸದಲ್ಲಿ ತಪೋನಿಷ್ಠನಾಗಿದ್ದ ಸೂತಮುನಿಯನ್ನು ವಿಷ್ನುವೃದ್ಥ ಮುಂತಾದ ಮುನಿಗಳು ಪಡೆದು ಜ್ಞಾನಯೋಗವನ್ನು ವಿವರಿಸಬೇಕೆಂದು ಕೇಳಿದುದು; ಬೃಹಸ್ಪತಿಯ ಪ್ರಶ್ನೆಗೆ ಉತ್ತರವಾಗಿ ಮಹಾದೇವನು ಹೇಳಿದ ಉಪದೇಶವನ್ನು ಅಲ್ಲಿದ್ದ ಕುಮಾರಸ್ವಾಮಿಯು ಕೇಳಿ, ವಸಿಷ್ಠನಿಗೆ ಹೇಳಿದನು; ಅವನಿಂದ ಶಕ್ತಿಯೂ, ಅವನಿಂದ ಪರಾಶರನೂ ಪಡೆದರು; ಅದನ್ನೇ ವ್ಯಾಸನಿಂದ ಸೂತನು ಪಡೆದನು.
2. ಬ್ರಹ್ಮಜ್ಞಾನಕ್ಕೆ ಅಷ್ಟಾಂಗಾಭ್ಯಾಸವೂ ಕಾರಣವು; ಉತ್ತಮಾಧಿಕಾರಿಗಳಿಗೆ ಶ್ರವಣ, ಮಧ್ಯಮಾಧಿಕಾರಿಗಳಿಗೆ ಅಷ್ಟಾಂಗಯೋಗ, ಅಧಮಾಧಿಕಾರಿಗಳಿಗೆ ವರ್ಣಾಶ್ರಮಪರಿಪಾಲನ, ಹೀಗೆ ಇವು ಸರ್ವರಿಗೂ ಸಾಧನಗಳು; ಪರಮಾತ್ಮನಿಂದ ಪ್ರಪಂಚದ ಪ್ರಾದುರ್ಭಾವಕ್ರಮ; ತ್ರಿಮೂರ್ತಿಗಳು ಉಂಟಾದ ಬಗೆ; ವರ್ಣಾಶ್ರಮಾಚಾರವುಳ್ಳವನು ಮಹೇಶ್ವರನನ್ನು ಒಲಿಸಿಕೊಳ್ಳುತ್ತಾನೆ; ಆಚಾರವನ್ನು ಬಿಟ್ಟವನು ಅಧೋಗತಿಗೆ ಇಳಿಯುತ್ತಾನೆ. ಈಶ್ವರಪ್ರಸಾದದಿಂದ ಜ್ಞಾನೋದಯ, ಅದರಿಂದ ಅಜ್ಞಾನನಿವೃತ್ತಿ, ನಿಷ್ಕಾಮಕರ್ಮದಿಂದ ಚಿತ್ತಶುದ್ಧಿ, ಜ್ಞಾನಪ್ರಾಪ್ತಿ, ಮೋಕ್ಷ, ಬೃಹಸ್ಪತಿಯ ಶಿವಸ್ತೋತ್ರ; ಈ ಸ್ತೋತ್ರಪಠನದ ಫಲ
3. ವರ್ಣಾಶ್ರಮಾಚಾರಗಳಲ್ಲಿ ಮೊದಲು ಉಪನಯನದಿಂದ ಸಿದ್ಧವಾಗುವ ಬ್ರಹ್ಮಚರ್ಯಾಶ್ರಮ; ವೇದಾಧ್ಯಯನ, ಭಿಕ್ಷಾಹಾರ, ಗುರುಸೇವಾ, ಸಂಧ್ಯಾವಂದನ, ಬ್ರಹ್ಮಯಜ್ಞ, ಬ್ರಹ್ಮಜ್ಞಾನಿಗೆ ಅಭಿವಾದನ, ನಿಷ್ಕಾಮಧರ್ಮಾಚರಣ, ಇವೇ ಮುಂತಾದವು ಚ್ರಹ್ಮಚರ್ಯಧರ್ಮಗಳು
4. ಗೃಹಸ್ಥಧರ್ಮವು ಎರಡನೆಯದು; ವಿವಾಹ, ಧರ್ಮಪ್ರಜಾ ಸಂಪಾದನ, ಷಟ್ಕರ್ಮಾಚರಣೆ, ಪಂಚಮಹಾಯಜ್ಞಾಚರಣೆ; ಸತ್ಯಪಾಲನ
5. ವನಪ್ರಸ್ಥಾನ, ಹೆಂಡಿತಿಯನ್ನು ಮಗನ ವಶದಲ್ಲಿ ಬಿಡಬಹುದು, ಜೊತೆಯಲ್ಲೇ ಕರೆದುಕೊಂಡು ಹೋಗಬಹುದು; ಯಮನಿಯಮಪಾಲನೆ, ಶಾಕಮೂಲ ಫಲಾಹಾರ, ವೇದಾಭ್ಯಾಸ, ಕೃಚ್ಛ್ರಚಾಂದ್ರಾಯಣಾನುಷ್ಠಾನ, ಅಗ್ನಿಯನ್ನು ಆತ್ಮನಲ್ಲಿ ಸಮಾರೋಪಣೆ; ವೈರಾಗ್ಯ, ಸನ್ಯಾಸ
6. ಸನ್ನ್ಯಾಸಸ್ವೀಕಾರ, ಕುಟೀಚಕ, ಬಹೂದಕ, ಹಂಸ, ಪರಮಹಂಸ ಎಂದು ನಾಲ್ಕು ಬಗೆಯ ಸನ್ಯಾಸ; ಚಾತುರ್ಮಾಸ್ಯ ವ್ರತಾಚರಣ, ಪ್ರಣವಜಪ, ನಾಲ್ಕು ಆಶ್ರಮಗಳಿಗೆ ದೇವತೆಗಳು, ಬ್ರಹ್ಮಚಾರಿಗೆ ಬ್ರಹ್ಮಾ, ಗೃಹಸ್ಥನಿಗೆ ಸರ್ವದೇವತೆಗಳು, ವಾನಪ್ರಸ್ಥನಿಗೆ ಸೂರ್ಯ, ಸನ್ಯಾಸಿಗೆ ಶಿವನೂ ಪೂಜ್ಯರು
7. ಸಂಭಾವಿತದೋಷಗಳ ನಿವಾರಣೆಗಾಗಿ ಪ್ರಾಯಶ್ಚಿತ್ತಗಳು; ಅಕಾಮಕೃತಪಾಪಗಳಿಗೆ ಪ್ರಾಯಶ್ಚಿತ್ತವುಂಟು; ಸಕಾಮ ಕೃತಪಾಪಗಳಿಗೆ ಮರಣಾಂತಪ್ರಾಯಶ್ಚಿತ್ತ; ಕೃಚ್ಛ್ರಚಾಂದ್ರಾಯಣ, ಪ್ರಣವಜಪ, ಗಾಯತ್ತ್ರೀಜಪ, ತಪ್ತಕೃಚ್ಛ್ರ ಮುಂತಾದುವನ್ನು ಪಾತಕತಾರತಮ್ಯಾನುಸಾರವಾಗಿ ಆಚರಿಸಬೇಕು; ಪ್ರಾಯಶ್ಚಿತ್ತದಿಂದ ಜ್ಞಾನಪ್ರತಿಬಂಧಕಗಳ ನಿವೃತ್ತಿಯು; ಜ್ಞಾನೋದಯಪರ್ಯಂತವಾಗಿ ಶ್ರವಣ, ಮನನನಿದಿಧ್ಯಾಸನಗಳು
8. ದಾನಗಳೂ ಧರ್ಮಗಳೂ ಪಾಪನಾಶಕಗಳು; ವಿದ್ಯಾದಾನ ಸರ್ವೋತ್ತಮ, ಗೋದಾನ, ಭೂದಾನ, ಕನ್ಯಾದಾನ, ಅನ್ನದಾನ, ಧನಧಾನ್ಯಗಳದಾನ, ಗೃಹದಾನಗಳು ಉತ್ತಮ ಪಾತ್ರಗಳಲ್ಲಿ ಉತ್ತಮಫಲದಾಯಕಗಳು: ತೀರ್ಥಕ್ಷೇತ್ರಗಳಲ್ಲಿ ವಿಶೇಷ; ಸ್ನಾನ, ಉಪವಾಸಗಳೂ ಧರ್ಮಗಳು; ಆತ್ಮಜ್ಞನಲ್ಲಿ ವಿಶೇಷಫಲ; ಯಾವ ಯಾವ ದೇವರನ್ನು ಯಾವ ಬಗೆಯಲ್ಲಿ, ಯಾವ ಉದ್ದೇಶದಿಂದ ಆರಾಧಿಸಿದರೆ, ಆಯಾ ಫಲಪ್ರಾಪ್ತಿ; ಸಕಾಮಕರ್ಮಾಚರಣೆಯಿಂದ ಫಲಭೋಗ, ನಿಷ್ಕಾಮಧರ್ಮಾಚರಣೆಯಿಂದ ಚಿತ್ತಶುದ್ಧಿ, ಜ್ಞಾನಪ್ರಾಪ್ತಿ, ಮೋಕ್ಷ
9. ವಿಹಿತಕಾಮ್ಯಕರ್ಮಾನುಷ್ಠಾನದಿಂದ ಐಹಿಕಸುಖ, ಆಮುಷ್ಮಿಕ ಸದ್ಗತಿಭೋಗ, ನಿಷಿದ್ಧಕರ್ಮಗಳಿಂದ ದುಃಖಾನುಭವ; ನಿಷಿದ್ಧ ಮತ್ತು ಕಾಮ್ಯಕರ್ಮಗಳನ್ನು ಬಿಡಬೇಕು; ಪಾಪಕರ್ಮಗಳಿಂದ ಬಗೆಬಗೆಯ ನರಕಗಳ ಪ್ರಾಪ್ತಿ; ಅಲ್ಲಿ ಪಾಪಾನುಗುಣ ಶಿಕ್ಷಾನುಭವ; ಪುನಃ ನರಜನ್ಮ
10. ಉತ್ತಮಾಧಿಕಾರಿಗಳಿಗೆ ವೇದಾಂತಶ್ರವಣದಿಂದ ಜ್ಞಾನಪ್ರಾಪ್ತಿ; ಮಧ್ಯಮಾಧಿಕಾರಿಗಳಿಗೆ ಯೋಗಾಭ್ಯಾಸದಿಂದ ಚಿತ್ತೈಕಾಗ್ರತೆಯ ಪ್ರಾಪ್ತಿ; ದೇಹೋತ್ಪತಿಕ್ರಮ; ಜ್ಞಾನದಿಂದ ವೈರಾಗ್ಯವೂ ಆತ್ಮಶುದ್ಧಿಯೂ ಫಲಿಸುತ್ತದೆ; ಆಹಾರದ ಮೂರು ಬಗೆಯ ಪರಿಣಾಮಗಳು; ಪೂರ್ವಕರ್ಮವಶದಿಂದ ಜೀವನಿಗೆ ಗರ್ಭವಾಸ; ಪಶ್ಚಾತ್ತಾಪ, ಒಳ್ಳೆಯ ಸಂಕಲ್ಪ; ಹುಟ್ಟಿದ ಕೂಡಲೆ ವೈಷ್ಣವವಾಯುಸ್ಪರ್ಶ, ಮೋಹಾವರಣ; ಯಥಾಪೂರ್ವ ಪ್ರವೃತ್ತಿ; ಆದುದರಿಂದ ಆತ್ಮಸ್ವರೂಪಚಿಂತನದಿಂದ ಸಾಕ್ಷಾತ್ಕಾರಪ್ರಯತ್ನ ಮಾಡಬೇಕು; ಶಿವಸ್ತುತಿ
11. ದೇಹವನ್ನು ಧರ್ಮಸಾಧನವಾಗಿ ಮಾಡಿಕೊಳ್ಳಲು ನಾಡೀಚಕ್ರಗಳ ಪರಿಜ್ಞಾನ ಆವಶ್ಯಕ; ಮೂಲಾಧಾರ, ಕಂದಸ್ಥಾನ, ನಾಭಿ, ಸುಷುಮ್ನಾ, ಇಡಾ, ಪಿಂಗಳಾ ಮುಂತಾದ ಹದಿನಾಲ್ಕು ನಾಡಿಗಳು; ಕುಂಡಲಿನೀ ಸ್ಥಾನ; ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ ಎಂದು ಹತ್ತುಬಗೆಯ ವಾಯುಗಳು; ಅವುಗಳ ಸ್ಥಾನ ಮತ್ತು ಕರ್ಮಗಳು; ಇಡಾ ಮುಂತಾದ ನಾಡಿಗಳಿಗೆ ದೇವತೆಗಳು; ಸಂಕ್ರಮಣಗಳು, ಅಯನಗಳು, ಗ್ರಹಣಗಳು, ತೀರ್ಥಕ್ಷೇತ್ರಗಳು, ಭಾವತೀರ್ಥ, ಆತ್ಮತೀರ್ಥ, ಆತ್ಮನಲ್ಲಿ ಶಿವದರ್ಶನ, ಬೃಹಸ್ಪತಿಕೃತ ಶಿವಸ್ತುತಿ
12. ನಾಡೀಶುದ್ಧಿಪ್ರಕಾರ; ಪ್ರಾಣಾಯಾಮ, ಪೂರಕ, ಕುಂಭಕ, ರೇಚಕಗಳ ವಿವರಣೆಕ್ರಮಗಳು; ಇದರಲ್ಲಿ ಸಿದ್ಧಿಯಾದುದರ ಗುರುತುಗಳು; ಫಲಗಳು; ಆತ್ಮಜ್ಞಾನದಲ್ಲಿಯೇ ದೃಷ್ಟಿ ಇರಬೇಕು; ಇತರರಿಗೆ ಬುದ್ಧಿಭೇದವನ್ನುಂಟು ಮಾಡಬಾರದು
13. ಯೋಗಾಂಗಗಳು ಎಂಟು; ಅವುಗಳ ಸ್ವರೂಪವಿವರಣೆ; ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾಧಿಗಳು, ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ದಯಾ, ಅರ್ಜವ, ಕ್ಷಮಾ, ಧೃತಿ, ಮಿತಾಹಾರ, ಶೌಚ ಈ ಸಾಧನಗಳಿಂದ ಆತ್ಮಜ್ಞಾನ ಲಾಭವೇ ಉದ್ದೇಶ
14. ನಿಯಮಸ್ವರೂಪ; ತಪಸ್ಸು, ಸಂತೋಷ, ಅಸ್ತಿಕ್ಯ, ದಾನ, ಈಶ್ವರಪೂಜೆ, ಸಿದ್ಧಾಂತಶ್ರವಣ, ಹ್ರೀ, ಮತಿ, ಜಪ, ವ್ರತ; ಈ ಸಾಧನಾನುಷ್ಠಾನಫಲ
15. ಆಸನಗಳ ಭೇದಗಳು; ಸ್ವಸ್ತಿಕ, ಗೋಮುಖ, ಪದ್ಮ, ವೀರ, ಸಿಂಹಾಸನ, ಭದ್ರ, ಮುಕ್ತಾಸನ, ಮಯೂರ, ಸುಖಾಸನ; ಇವನ್ನು ಅಭ್ಯಾಸಮಾಡಿ ಪ್ರಾಣಾಯಾಮವನ್ನು ಮಾಡಬೇಕು
16. ಪ್ರಾಣಾಯಾಮದ ಸ್ವರೂಪವಿವರಗಳು; ಪೂರಕ, ರೇಚಕ, ಕುಂಭಕ; ಇವು ಪ್ರಣವದ ವರ್ಣತ್ರಯಾತ್ಮಕವಾಗಿವೆ; ಕುಂಭಕಪ್ರಾಣಾಯಾಮಸಿದ್ಧಿಯ ಗುರುತುಗಳು ಮತ್ತು ಫಲಗಳು; ವಾಯ್ವಾಕರ್ಪಣ ನಾಡೀಮಾರ್ಗಗಳು, ವಾಯುನಿರೋಧನಸ್ಥಾನಗಳು; ವಾಯುನಿರೋಧಸಿದ್ಧಿಯಿಂದ ಕುಂಡಲಿನೀಶಕ್ತಿಯ ಉದ್ಬೋಧನೆ, ಜ್ಞಾನಾಮೃತ ಲಾಭ; ಈ ಜಗತ್ತು ಜ್ಞಾನಸ್ವರೂಪವು, ಅರ್ಥಸ್ವರೂಪವಲ್ಲವು; ಯಜ್ಞದಿಂದ ದೇವತ್ವವೂ, ತಪಸ್ಸಿನಿಂದ ಸತ್ಯಲೋಕವೂ, ದಾನದಿಂದ ಭೋಗಗಳೂ, ಜ್ಞಾನದಿಂದ ಬ್ರಹ್ಮಪ್ರಾಪ್ತಿಯೂ ಆಗುತ್ತವೆ; ಸಂಸಾರದುಃಖನಿರ್ಬಂಧವು ಅಜ್ಞಾನಮೂಲಕವಾದುದು; ಜ್ಞಾನದಿಂದಲೇ ಅದರ ನಿವೃತ್ತಿ
17. ಪ್ರತ್ಯಾಹಾರ ಸ್ವರೂಪವಿವರಣೆ; ಎಲ್ಲವನ್ನೂ ಬ್ರಹ್ಮವೆಂದು ನೋಡುವುದು, ಎಲ್ಲ ಕರ್ಮವನ್ನೂ ಬ್ರಹ್ಮತತ್ವದಲ್ಲಿ ಅರ್ಪಿಸುವುದು; ಬ್ರಹ್ಮಾರಾಧನ ಬುದ್ಧಿಯಿಂದ ಎಲ್ಲ ಕರ್ಮಗಳನ್ನೂ ಮಾಡುವುದು; ಆತ್ಮನನ್ನು ಆತ್ಮನಿಂದ ಆತ್ಮನಲ್ಲಿ ನೆಲೆಗೊಳಿಸುವುದು.
18. ಧಾರಣಾಸ್ವರೂಪವಿವರಣೆ; ಇದು ಐದು ಬಗೆಯಾಗಿದೆ; ದೇಹದಲ್ಲಿ ಪಂಚಭೂತಾಂಶಗಳನ್ನು ಪ್ರಾಕೃತವಾದ ಮಹಾ ಪಂಚಭೂತಗಳಲ್ಲಿ, ಹ, ಯ, ವ, ರ, ಲ ಎಂಬ ಬೀಜಮಂತ್ರದಿಂದ ಧ್ಯಾನಮಾಡಿ ಲಯಪಡಿಸುವುದು; ಬೇರೆ ಬಗೆಯ ಧಾರಣೆಗಳ ವಿವರಗಳು
19. ಧ್ಯಾನದ ಸ್ವರೂಪ; ಉಮಾಮಹೇಶ್ವರಸ್ವರೂಪದ ಧ್ಯಾನವು; ಸೂರ್ಯಮಂಡಲವರ್ತಿಯಾದ ಹಿರಣ್ಮಯಪುರುಷನನ್ನು ಅರ್ಧನಾರೀಶ್ವರನೆಂದೂ, ಸೋऽಹಂ ಎಂದರೆ, ಅವನೇ ನಾನು, ಎಂಬ ಭಾವನೆಯಿಂದ ಧ್ಯಾನಮಾಡುವುದು; ಶ್ರೌತವಾದ ಅಗ್ನಿಯಲ್ಲಿ ನೆಲೆಸಿರುವ ಮಹಾದೇವನನ್ನು ಧ್ಯಾನಮಾಡುವುದು; ಅಥವಾ ವಿಷ್ಣುವನ್ನು ನಾರಾಯಣ, ಪುರುಷ, ಪರಮೇಶ್ವರ ಎಂದು ಹೃದಯದ ಮಧ್ಯದಲ್ಲಿ ಧ್ಯಾನಮಾಡುವುದು; ಅಥವಾ ಸಚ್ಚಿದಾನಂದರೂಪವಾದ ಬ್ರಹ್ಮತತ್ವವೇ ನಾನು ಎಂದು ಧ್ಯಾನಮಾಡುವುದು; ವಿಷ್ಣು, ಬ್ರಹ್ಮಾ, ರುದ್ರ ಎಂಬ ತ್ರಿಮೂರ್ತಿಸ್ವರೂಪನೇ ನಾನೆಂದು ಮುಂತಾಗಿ ಧ್ಯಾನಮಾಡುವುದು
20. ಸಮಾಧಿಸ್ವರೂಪದ ವಿವರಣೆ; ಪರಮಾತ್ಮನೂ ಜೀವಾತ್ಮನೂ ಅಭಿನ್ನತತ್ವವೆಂದು ಸಾಕ್ಷಾತ್ಕರಿಸುವುದು; ಅಹಂ ಎಂಬ ಪದದ ಲಕ್ಷ್ಯವಾದ ಅರ್ಥವು ದೇಹ, ಇಂದ್ರಿಯ, ಪ್ರಾಣ, ಮನೋಬುದ್ಧಿಗಳಲ್ಲಿ ಒಂದೂ ಅಲ್ಲವು; ಸಾಕ್ಷಿಸ್ವರೂಪನು ನಾನು; ಭೂತಕಾರ್ಯಗಳನ್ನು ಅವುಗಳ ಕಾರಣಗಳಲ್ಲೂ, ಅವನ್ನು ಸರ್ವಕಾರಣವಾದ ತತ್ವದಲ್ಲೂ, ಲಯಮಾಡಿ, ಕಡೆಗೆ ಇವೆಲ್ಲವೂ ಮಾಯೆಯೆ ತೋರಿಕೆ ಎಂದು ಅಪರೋಕ್ಷಾನುಭವರೂಪವಾಗುವುದು; ಎಲ್ಲ ವೇದಗಳನ್ನು ಪ್ರಣವದ ಅಕ್ಷರಗಳಲ್ಲೂ, ವಾಚ್ಯವಾದ ಅರ್ಥವನ್ನು ವಾಚಕವಾದ ಶಬ್ದದಲ್ಲೂ, ತ್ರಿಮೂರ್ತಿಗಳಲ್ಲೂ ಲಯಮಾಡಿ ಭಾವಿಸಿ. ಅದ್ವೈತಾತ್ಮತತ್ವದ ಸಾಕ್ಷಾತ್ಕಾರವೇ ಸಮಾಧಿಯು; ವ್ಯಾವಹಾರಿಕವಾದ ಈ ಪ್ರಪಂಚವೆಲ್ಲವೂ ವಾಗಾರಂಭಣವೆಂದೂ, ಎಲ್ಲವನ್ನೂ, ಶಕ್ತಿಯಲ್ಲೂ, ಶಕ್ತಿಯನ್ನು ಆತ್ಮನಲ್ಲೂ ಲಯಮಾಡಿ ಸರ್ವಾತ್ಮಭಾವದ ಅಪರೋಕ್ಷಾನುಭವವೇ ಸಮಾಧಿಯು
ಮುಕ್ತಿಖಂಡ
1. ಜ್ಞಾನಪ್ರಾಪ್ತಿಗೆ ಉಪಾಯವನ್ನು ಹೇಳಿ ಈಗ ಫಲವಾದ ಮುಕ್ತಿಯ ಸ್ವರೂಪದ ವಿವರಣೆಯನ್ನು ಮಾಡಲಾಗುತ್ತದೆ. “ಇಚ್ಛಾಶಕ್ತಿಃ ಉಮಾ ಕುಮಾರೀ” ಎಂಬಂತೆ ಈ ಉಮಾದೇವಿಯ ಶಕ್ತಿಯೇ ಮಾಯೆಯು; ಇದು ಮಹೇಶ್ವರಾಧೀನವಾಗಿದೆ; ಮಾಯೆಯಿಂದಲೇ ಅಜ್ಞಾನವು; ಇದರಿಂದಲೇ ಸಂಸಾರದ ನಿರ್ಬಂಧದುಃಖವು; ಇದರ ನಿವೃತ್ತಿಯು ಜ್ಞಾನದಿಂದ ಆಗುತ್ತದೆ; ಇದುವರೆಗೂ ಸಾಧನಸಂಪತ್ತನ್ನು ಹೇಳಿ ಈಗ ಫಲವಾದ ಮುಕ್ತಿ ಸ್ವರೂಪವನ್ನು ತಿಳಿಸಿದೆ; ಈಶ್ವರಾಧೀನವಾಗಿರುವ ಮಾಯಾ ನಿವೃತ್ತಿಯು ಈಶ್ವರಾನುಗ್ರಹದಿಂದಲೇ ಆಗಬೇಕಾಗಿದೆ. ಆದುದರಿಂದ ಈಶ್ವರನ ಸ್ತುತಿಯನ್ನು ಮಾಡಿದೆ; ಸಾಧನ ಸಂಪತ್ತುಳ್ಳ ಶಿವಭಕ್ತರೂ ಆದ ಹಿರಣ್ಯಾಕ್ಷ ಮುಂತಾದವರು ಸತ್ರಯಾಗವನ್ನು ಆಚರಿಸಿದ ಮೇಲೆ ಶಿವನನ್ನು ಕುರಿತು ತಪಸ್ಸನ್ನು ಮಾಡಿದರು; ಶಿವನ ಅನುಗ್ರಹದಿಂದ ಸೂತನು ಅವರಿಗೆ ಪ್ರತ್ಯಕ್ಷನಾದನು; ಅವರು ಅವನನ್ನು ಕುರಿತು ಮುಕ್ತಿ, ಮುಕ್ತ್ಯುಪಾಯ, ಮೋಚಕ, ಮೋಚಕಪ್ರದ, ಇವುಗಳ ಅರಿವನ್ನು ಅನುಗ್ರಹಿಸಬೇಕೆಂದು ಕೇಳಿದರು
2. ನಾರಾಯಣನು ಕೈಲಾಸದಲ್ಲಿ ತಪಸ್ಸನ್ನು ಮಾಡಿದುದು; ಸಂತುಷ್ಟನಾಗಿ ಪ್ರತ್ಯಕ್ಷನಾದ ಶಿವನನ್ನು ಈ ನಾಲ್ಕು ಅಂಶಗಳನ್ನೂ ತಿಳಿಯಹೇಳಬೇಕೆಂದು ಕೇಳಲು, ಶಿವನು ಹೇಳಿದ್ದ ಉತ್ತರವನ್ನೇ ಸೂತನು ಮುನಿಗಳಿಗೆ ಹೇಳಿದುದು; ಮುಕ್ತಿಯಲ್ಲಿ ನಾಲ್ಕುಬಗೆ; ಸಾಲೋಕ್ಯ, ಸಾಮೀಷ್ಯ, ಸಾರೂಪ್ಯ, ಸಾಯುಜ್ಯ; ಸಾಯುಜ್ಯ ಮುಕ್ತಿಯೇ ಸರ್ವೋತ್ತಮವಾದುದು; ಪ್ರಾಣಿಗಳ ಸಂಸ್ಕಾರ, ರುಚಿ, ಸನ್ನಿವೇಶಗಳಿಗೆ ತಕ್ಕಂತೆ ಈ ಮುಕ್ತಿಗಳಲ್ಲಿ ಇಚ್ಛೆಯುಂಟಾಗುತ್ತದೆ. ಶಿವಾನುಗ್ರಹದಿಂದಲೇ ಸಾಯುಜ್ಯಮುಕ್ತಿಯಲ್ಲಿ ಇಚ್ಛೆಯುಂಟಾಗುತ್ತದೆ; ಜ್ಞಾನವಾದ ಮೇಲೆ ಕರ್ಮಶೇಷವಿದ್ದರೆ ಜೀವನ್ಮುಕ್ತನಾಗಿರುತ್ತಾನೆ. ಕಡೆಗೆ ವಿದೇಹ ಮುಕ್ತಿಯ ಪ್ರಾಪ್ತಿಯಾಗುತ್ತದೆ
3. ಮುಕ್ತ್ಯುಪಾಯಸ್ವರೂಪದ ವಿವರಣೆ; ಜ್ಞಾನವೇ ಮುಕ್ತಿಗೆ ಸಾಕ್ಷಾತ್ತಾದ, ಸ್ವತಂತ್ರವಾದ ಉಪಾಯ; ಕರ್ಮವು ಸಾಕ್ಷಾತ್ತಾದ ಉಪಾಯವಲ್ಲವು; ಕರ್ಮದಿಂದ ಅವರ ಮುಕ್ತಿ ಎಂದರೆ ಸಾಲೋಕ್ಯ, ಸಾಮೀಪ್ಯ, ಸಾರೂಪ್ಯಾದಿಗಳು ಉಂಟಾಗುತ್ತವೆ. ಚಿತ್ತಪಾಕಾನುಗುಣ್ಯದಿಂದ ಕ್ರಮಮುಕ್ತಿ; ಜ್ಞಾನಿಯು ಕರ್ಮವನ್ನು ಸಂಕಲ್ಪವಿಲ್ಲದೆ ಮಾಡುವುದಂಟು; ಕ್ಷೇತ್ರಯಾತ್ರೆ, ತೀರ್ಥಸ್ನಾನ, ದೇವತಾರಾಧನ, ಜ್ಞಾನೋಪದೇಶಗಳನ್ನು ಫಲಕಾಮನೆ ಇಲ್ಲದೆ ಮಾಡುತ್ತಿರುವುದುಂಟು; ಅವನ ಕರ್ಮಗಳು ದಗ್ಧಪಟದಂತೆ ಕಾರ್ಯಕಾರಿಯಾಗದೆ ಸುಖದುಃಖಗಳಿಗೆ ಕಾರಣವಾಗಲಾರವು; ವೇದಾರಣ್ಯ ಮಹಿಮೆಯ ವಿವರಣೆ; ಇದೂ ಮುಕ್ತ್ಯುಪಾಯವು;
4. ಮೋಚಕ ಸ್ವರೂಪ ವಿವರಣೆ; ಮುಕ್ತಿಯನ್ನು ಅನುಗ್ರಹಿಸುವ ಪರಮೇಶ್ವರನೇ ಮೋಚಕನು; ಸರಸ್ವತೀ ದೇವಿಯು ಈಶ್ವರನನ್ನು ಕುರಿತು ಮೋಚಕನು ಸಂಸಾರದುಃಖ ನಿರ್ಬಂಧದಿಂದ ಬಿಡುಗಡೆಯನ್ನು ಅನುಗ್ರಹಿಸುವವನು, ಯಾರು? ಎಂದು ಕೇಳಿದಳು; ಈಶ್ವರನು ಪಶುಗಳೇ ಜೀವರು, ಪಾಶವೇ ಸಂಸಾರ ನಿರ್ಬಂಧ, ಜೀವರ ಕರ್ಮಗಳಿಗೆ ತಕ್ಕಂತೆ ಐಹಿಕಾಮುಷ್ಮಿಕ ಭೋಗಗಳು; ಅವರ ಚಿತ್ತ ಪಾಕಾನುಗುಣವಾಗಿ ಕ್ರಮವಾಗಿ ಮೋಕ್ಷವನ್ನೂ ಅನುಗ್ರಹಿಸುವ ಈಶ್ವರನೇ ಮೋಚಕನು, ಎಂದು ವಿವರಿಸಿದನು; ವೇದವು ಅಪೌರುಷೇಯವಾದುದರಿಂದ ದೋಷರಹಿತವಾಗಿ ಉತ್ತಮಪ್ರಮಾಣವೆನಿಸಿದೆ; ಎಂದು ಸರಸ್ವತಿಗೆ ತಿಳಿಯಹೇಳಿದೆನೆಂದು ಈಶ್ವರನು ವಿಷ್ಣುವನ್ನು ಕುರಿತು ಹೇಳಿದನು, ದಕ್ಷಿಣಾಮೂರ್ತಿ ಪ್ರಸಾದದಿಂದ ಜೀವರಿಗೆ ಮುಕ್ತಿಪ್ರಾಪ್ತಿಯು;
5. ಮೋಚಕ ಪ್ರದನ ಸ್ವರೂಪವಿವರಣೆ; ಸದ್ಗುರುವೇ ಮೋಚಕ ಪ್ರದನು; ವರ್ಣಾಶ್ರಮಧರ್ಮಾನುಗುಣವಾಗಿ ಗುರು ಅಥವಾ ಆಚಾರ್ಯರಲ್ಲಿ ನಾನಾ ಬಗೆಯುಂಟು; ಆತ್ಮಜ್ಞಾನಿಯಾದ ಆಚಾರ್ಯನು ಅತಿವರ್ಣಾಶ್ರಮಿಯಾಗಿರುತ್ತಾನೆ; ಇದನ್ನು ಕೇಳಿ ವಿಷ್ಣುವು ಗುರುಗಳಿಗೆಲ್ಲರಿಗೂ ಗುರುವಾದ ಪರಶಿವನನ್ನು ಆಚಾರ್ಯ ಭಾವನೆಯಿಂದ ಪೂಜಿಸಿ ನಮಸ್ಕರಿಸಿದನು; ಮುಕ್ತಿಯನ್ನು ಕೊಡುವ ಈಶ್ವರನ ಸ್ವರೂಪವನ್ನು ತಿಳಿಯ ಹೇಳುವ ಆಚಾರ್ಯನು, ಶಿಷ್ಯನಿಗೂ ಮುಕ್ತಿಯನ್ನುಂಟುಮಾಡುವ ದೇವನನ್ನು ತಿಳಿಸುತ್ತಾನಾದುದರಿಂದ ಮೋಚಕ ಪ್ರದನೆನಿಸುತ್ತಾನೆ;
6. ಈ ಮೇಲೆ ಹೇಳಿದ ನಾಲ್ಕು ಅಂಶಗಳನ್ನು ತಿಳಿದರೂ ಮುಕ್ತಿಗೆ ಪ್ರತಿಬಂಧಕಗಳಾದ ದುರಿತಾದಿಗಳಿದ್ದರೆ ಮುಕ್ತಿಯಾಗದು; ಆದುದರಿಂದ ಅವುಗಳ ನಿವಾರಣೆಗಾಗಿ ಜ್ಞಾನಾನುತ್ಪತ್ತಿ ಕಾರಣಗಳನ್ನು ತಿಳಿಸಲಾಗುತ್ತದೆ. ಶಿವದ್ರೋಹ, ತ್ರಿಪುಂಡ್ರಧಾರಣಾದಿ ಧರ್ಮದ್ವೇಷ, ಕಾಮಕ್ರೋಧಾದಿಗಳು, ವೇದಶಾಸ್ತ್ರಗಳಲ್ಲಿ ದ್ವೇಷ ಅಥವಾ ಅನಾದರ, ಗುರುದ್ರೋಹ, ಪರೋಪಕಾರವನ್ನು ಮಾಡದಿರುವಿಕೆ; ಇವು ಜ್ಞಾನ ಉಂಟಾಗಲು ಅಡ್ಡಿಯಾಗುತ್ತವೆ.
7. ಪ್ರತಿಬಂಧಕ ನಿವಾರಣೆಯಾದ ಮೇಲೆ ಜ್ಞಾನೋದಯಕ್ಕೆ ಗುರೂಪಸದನವು ಆವಶ್ಯಕ; ಜ್ಞಾನಿಯ ಸೇವೆಯು ಶೀಘ್ರ ಫಲಕಾರಿಯು; ಪಾಕಯಜ್ಞನ ಮಗ ಶಶಿವರ್ಣನ ಕಥೆ; ಗೋಪರ್ವತದಲ್ಲಿ ಶಕ್ತೀಶ್ವರ ಪೂಜೆ, ಸೇವೆ, ಅಲ್ಲಿದ್ದ ಮಹಾಕಾರುಣಿಕನ ಸೇವೆ; ಪಶ್ಚಾತ್ತಾಪ, ಉಪರಮ, ಪ್ರಾಯಶ್ಚಿತ್ತಾಚರಣೆಗಳಿಂದ ಪಾಪನಾಶವಾಗಿ ಸದ್ಗತಿ ಪ್ರಾಪ್ತಿ; ಅವನ ಪಿತೃಗಳಿಗೂ ಸದ್ಗತಿ ಲಾಭ; ಸುಭಗಾ ಎಂಬ ವೇಶ್ಯೆಯ ಕಥೆ; ವಿಟವಂಚನೆ, ಪಾಪವು ಹೆಚ್ಚಿ ದುಃಖ ಪ್ರಾಪ್ತಿ; ಒಬ್ಬ ಜ್ಞಾನಿಯ ಸೇವೆ; ಅವಳೂ ಜ್ಞಾನಿಯಾಗಿ ಮುಕ್ತಳಾದಳು; ಬ್ರಹ್ಮಾತ್ಮ ವಿಜ್ಞಾನವು ಮುಕ್ತಿ ಸಾಧನವು;
8. ವಿಷ್ಣುವು ಮಹೇಶ್ವರನಿಂದ ಜ್ಞಾನವನ್ನು ಪಡೆದು ವ್ಯಾಘ್ರಪುರಕ್ಕೆ ಹೋದುದು; ದೇವತೆಗಳು ವಿಷ್ಣುವನ್ನು ಜ್ಞಾನೋಪದೇಶಕ್ಕಾಗಿ ಪ್ರಾರ್ಥಿಸಲು, ಅವನು ಅವರನ್ನು ತಪಸ್ಸು ಮಾಡಹೇಳಿ, ಪ್ರತ್ಯಕ್ಷನಾದ ಶಿವನಿಂದ ವ್ಯಾಘ್ರ (ಪುಂಡರೀಕ) ಪುರದಲ್ಲಿ ಜ್ಞಾನೋಪದೇಶ ಮಾಡಿಸಿ, ನಟರಾಜನ ತಾಂಡವ ದರ್ಶನವನ್ನೂ ಮಾಡಿಸಿ, ಶ್ರೀಮದ್ದಭ್ರಸಭಾಪತಿಯಾದ ಉಮಾಮಹೇಶ್ವರನಿಂದ ಅನುಗ್ರಹವನ್ನು ಪಡೆಯುವಂತೆ ಮಾಡಿದನು; ಆದುದರಿಂದ ಶಿವಪೂಜೆ, ತಾಂಡವ ದರ್ಶನಗಳು ಮುಕ್ತಿ ಸಾಧನಗಳು.
9. ಋಷಿಗಳು ಶಿವ ತಾಂಡವ ದರ್ಶನದ ಉಪಾಯವನ್ನು ಕೇಳಲು ಸೂತನು, ಹಿಂದೆ ಶೌನಕನು ನಂದೀಶ್ವರನನ್ನು ಹೀಗೆಯೇ ಕೇಳಿದನೆಂದೂ, ಕೈಲಾಸದಲ್ಲಿನ ಶಿವನ ಆನಂದ ನರ್ತನವು ಉಮಾಶಕ್ತಿದೇವಿಗೆ ಮಾತ್ರ ಗೋಚರವಾಗುವುದೆಂದೂ, ಪುಂಡರೀಕ ಪುರದಲ್ಲಿ ದಭ್ರಸಭೆಯಲ್ಲಿನ ತಾಂಡವವು ದೇವೀ, ಸ್ಕಂದ, ಗಣೇಶ, ಕ್ಷೇತ್ರಪಾಲ, ನಂದೀಶ್ವರ, ಇಷ್ಟು ಜನರಿಗೆ ಮಾತ್ರ ಗೋಚರವಾಗುವುದೆಂದೂ, ಮತ್ತು ಶಿವಪ್ರಸಾದವನ್ನು ಪಡೆದವರೂ ಅದನ್ನು ನೋಡಬಹುದಾದುದರಿಂದ ಶಿವನ ಅನುಗ್ರಹಕ್ಕಾಗಿ ಶಿವಾರಾಧನೆಯನ್ನು ಮಾಡೆನ್ನಲು, ಶೌನಕನು ಹಾಗೆ ಮಾಡಿ ಶಿವನ ಪ್ರಸಾದವನ್ನು ಪಡೆದನು. ಆದುದರಿಂದ ನಾವೂ ಹಾಗೆ ಮಾಡೋಣವೆಂದು ಮುನಿಗಳೊಡನೆ ಸೂತನು ವ್ಯಾಘ್ರಪುರಕ್ಕೆ ಹೋಗಿ, ಪರಶಿವನನ್ನು ಆರಾಧಿಸಿ ಅವನ ಅನುಗ್ರಹಕ್ಕೆ ಎಲ್ಲರೂ ಪಾತ್ರರಾದರು. ಎಂದು ಸೂತನು ಹೇಳಿದನು