ಮುಖಪುಟ
|
ಗ್ರಂಥರತ್ನಮಾಲಾ
|
ಋಗ್ವೇದಸಂಹಿತಾ
|
ಒಳನೋಟ
|
ಅನುವಾದಕರ ಪಟ್ಟಿ
|
ಹುಡುಕಿ
ಪದ್ಮಮಹಾಪುರಾಣಂ – ಸೃಷ್ಟಿಖಂಡ – ನಾಲ್ಕನೆಯ ಭಾಗ
ಆರಂಭಿಕ ಪುಟ
ಅನುವಾದಕರು: ಶ್ರೀ ಬೇಲದಕೆರೆ ಸೂರ್ಯನಾರಾಯಣ ಶಾಸ್ತ್ರಿ
ವಿಷಯಾನುಕ್ರಮಣಿಕೆ
ಮುನ್ನುಡಿ
ಮೂವತ್ತೇಳನೆಯ ಅಧ್ಯಾಯವು
ಪದ್ಮದಿಂದ ಬ್ರಹ್ಮನು ಹುಟ್ಟಿದುದು. ಹಿಮವಂತನೇ ಮುಂತಾದವರ ಉತ್ಪತ್ತಿಯ ವಿಷಯ ಮಧುಕೈಟಬರ ಉತ್ಪತ್ತಿಯ ವಿಷಯ. ಮಧುಕೈಟಬರ ನಾಶದ ವಿಷಯ. ಕಪಿಲಯೋಗಾಚಾರ್ಯರ ಉತ್ಪತ್ತಿಯ ಕಥನವು. ದಕ್ಷ ಪ್ರಜಾಪತಿಯೇ ಮುಂತಾದವರ ಉತ್ಪತ್ತಿಯ ವಿಷಯ. ಪ್ರಾಜಾಪತ್ಯದ ಸೃಷ್ಟಿಯ ಕಥನ ತಾರಕನ ಯುದ್ಧದ ವಿಷಯ.
ಮೂವತ್ತೆಂಟನೆಯ ಅಧ್ಯಾಯವು
ತಾರಕ ಮಯರ ಯುದ್ಧದ ಪ್ರಸಂಗದಿಂದ ಔರ್ವವೆಂಬ ಬೆಂಕಿಯ ಉತ್ಪತ್ತಿಯ ವರ್ಣನವು. ತಾರಕ ಮಯರ ಯುದ್ಧದ ಪ್ರಸ್ತಾವದಲ್ಲಿ ಬ್ರಹ್ಮನು ಮಾಡಿದ ವಿಷ್ಣು ಪ್ರಶಂಸೆ. ಇಂದ್ರನೇ ಮುಂತಾದವರಿಗೆ ವಿಷ್ಣುವು ಅವರವರ ಅಧಿಕಾರವನ್ನು ಕೊಡುವುದು.
ಮೂವತ್ತೊಂಭತ್ತನೆಯ ಅಧ್ಯಾಯವು
ದಿತಿಯ ಹೊಟ್ಟೆಯಲ್ಲಿ ವಜ್ರಾಂಗನು ಹುಟ್ಟಿದುದುದರ ವರ್ಣನೆ ವಜ್ರಾಂಗನೆಗೆ ವರಾಂಗಿಯಲ್ಲಿ ತಾರಕಾಸುರನು ಹುಟ್ಟಿದುದರ ವಿಷಯ. ತಾರಕಾಸುರನು ದೇವತೆಗಳೊಡನೆ ಯುದ್ಧಮಾಡಿ ದೇವತೆಗಳನ್ನು ಸೋಲಿಸಿದುದು.
ನಾಲ್ವತ್ತನೆಯ ಅಧ್ಯಾಯವು
ಕಾಲನೇಮಿಯು ದೇವತೆಗಳನ್ನು ಯುದ್ಧದಲ್ಲಿ ಗೆದ್ದು ಸೆರೆತಂದಿರಲು ಅವರನ್ನು ತಾರಕನು ಬಿಡಿಸುವುದು ಇಂದ್ರನಿಗೆ ನಾಯಿಯ ಕಾಲಿನಂತೆಯೂ, ಕತ್ತೆಯ ಕಾಲಿನಂತೆಯೂ ಬರೆಹಾಕಿಸಿ ಬಿಟ್ಟು ಬಿಡುವುದು. ತಾರಕಾಸುರನಿಂದ ಹೆದರಿದ ದೇವತೆಗಳು ಬ್ರಹ್ಮನನ್ನು ಸ್ತುತಿಸುವುದು. ರಾತ್ರಿಯನ್ನು ಕುರಿತು ಬ್ರಹ್ಮನು ನೀನು ಶಿವ ಪಾರ್ವತಿಯರು ಮಾಡುವ ಸುರತದಲ್ಲಿ ವಿಘ್ನವನ್ನುಂಟುಮಾಡಬೇಕೆಂದು ಆಜ್ಞಾಪಿಸುವುದು. ರಾತ್ರಿ ದೇವತೆಗೆ ಬ್ರಹ್ಮನು ವರಕೊಡುವುದು. ಹಿಮಮಂತನ ಹೆಂಡತಿಯಲ್ಲಿ ಪಾರ್ವತಿಯು ಹುಟ್ಟುವುದು. ಈ ಸಂದರ್ಭದಲ್ಲಿ ಶಂಕರನು ಮನ್ಮಥನನ್ನು ದಹಿಸುವುದು. ಮದನನಿಂದ ವಿರಹಿತನಾದ ರತಿಯು ಶಂಕರನನ್ನು ಸ್ತುತಿಸುವುದು. ಪಾರ್ವತಿಯ ತಪಸ್ಸನ್ನು ಮಾಡುವುದರ ವರ್ಣನೆ. ಸಪ್ತರ್ಷಿಗಳೂ ಬಂದು ಪಾರ್ವತಿಯೊಡನೆ ಮಾತನಾಡಿ ಅವಳಿಗೆ ಶಂಕರನು ಹೊರತಾಗಿ ಮತ್ತೆ ಇನ್ನಾರಲ್ಲೂ ಇಷ್ಟವಿಲ್ಲವೆಂದು ದೃಢಮಾಡಿಕೊಳ್ಳುವುದು. ಶಂಕರನಿಗೂ ಪಾರ್ವತಿಗೂ ಪಾಣಿಗ್ರಹಣವರ್ಣನೆ. ಗಜಾನನ ಹುಟ್ಟುವಿಕೆ. ಪಾರ್ವತೀ ಶಂಕರರು ಕ್ರೀಡಿಸುವುದು. ವೀರಕನೆಂಬ ಗಣವನ್ನು ಪಾರ್ವತಿಯ ಮಗನನ್ನಾಗಿ ಭಾವಿಸುವುದರ ವರ್ಣನೆ. ಬ್ರಹ್ಮನ ಆಜ್ಞೆಯಂತೆ ರಾತ್ರಿಯು ಪಾರ್ವತಿಯಲ್ಲಿ ಪ್ರವೇಶಿಸುವುದು.
ನಾಲ್ವತ್ತೊಂದನೆಯ ಅಧ್ಯಾಯ
ರಾತ್ರಿಯು ಪಾರ್ವತಿಯನ್ನು ಹೊಂದಿದುದರಿಂದ ಆಕೆಯು ಕಪ್ಪಾಗಿ ಶಂಕರನಿಂದ ತಿರಸ್ಕಾರವನ್ನು ಹೊಂದುವುದು. ಪಾರ್ವತಿಯೂ ಕೂಡ ಶಂಕರನನ್ನು ತಿರಸ್ಕರಿಸುವುದು. ಶಂಕರನ ತಿರಸ್ಕಾರದಿಂದ ಕೋಪಗೊಂಡ ಪಾರ್ವತಿಯು ತಪಸ್ಸಿಗೋಸ್ಕರ ಹಿಮವಂತನ ಕಾಡಿಗೆ ಹೋಗುವುದು. ಆಡಿಯೆಂಬ ರಾಕ್ಷಸನು ಶಂಕರನನ್ನು ಕೊಲ್ಲಬೇಕೆಂದು ಗುಹ್ಯಸ್ಥಾನದಲ್ಲಿ ಹಲ್ಲುಗಳನ್ನು ಇಟ್ಟುಕೊಂಡು ಪಾರ್ವತಿಯ ವೇಷವನ್ನು ಆರಿಸಿಕೊಂಡು ಬರುವುದು. ವೇಷವನ್ನು ಹೊಂದಿದ ಪಾರ್ವತಿಯ ಎಡಭಾಗದಲ್ಲಿ ಪದ್ಮದ ಚಿಹ್ನೆ ಇಲ್ಲದಿರಲು ಈಕೆಯು ಪಾರ್ವತಿಯಲ್ಲ ರಾಕ್ಷಸಮಾಯೆಯೆಂದು ನಿಶ್ಚಯಿಸಿಕೊಂಡ ಹರನು ಆ ಆಡಿಯನ್ನು ಕೊಲ್ಲುವುದು. ವಾಯುವಿನ ಮುಖದಿಂದ ಶಂಕರನು ಪರಸ್ತ್ರೀಯನ್ನು ಅನುಭವಿಸಿದನೆಂದು ಕೇಳಿ ಕೋಪಗೊಂಡ ಪಾರ್ವತಿಯು, ಪರಸ್ತ್ರೀಯರು ಹೋಗದಂತೆ ನೋಡಿಕೊಂಡಿರಲು ನಿಯಮಿಸಿದ್ದ ವೀರಕನಿಗೆ ಶಾಪಕೊಡುವುದು. ಪಾರ್ವತಿಯು ತನ್ನ ಕೋಪದಿಂದ ಹುಟ್ಟಿದ ಸಿಂಹದ ಬಾಯಲ್ಲಿ ಕುಳಿತು ಹೋಗಲು ಬ್ರಹ್ಮನು ತಡೆಯುವುದು. ಬ್ರಹ್ಮನ ವರದಿಂದ ಪಾರ್ವತಿಯಲ್ಲಿ ಕಪ್ಪು ಬಣ್ಣವನ್ನುಂಟುಮಾಡಲು ಸೇರಿಕೊಂಡಿದ್ದ ರಾತ್ರಿದೇವತೆಯು ಬಿಟ್ಟು ಹೊರಡುವುದು. ಪಾರ್ವತಿಯ ಶರೀರದಿಂದ ಹೊರಗೆ ಹೊರಟ ರಾತ್ರಿ ದೇವತೆಗೆ ಬ್ರಹ್ಮನು ಏಕಾನಂಶಳೆಂದು ಹೆಸರನ್ನು ಇಡುವುದು. ಮತ್ತು ಅವಳು ಕೌಶಿಕೆ ಎಂಬ ಬೇರೆ ಹೆಸರಿನಿಂದ ವಿಂಧ್ಯಪರ್ವತಕ್ಕೆ ಹೋಗುವುದು. ಪಾರ್ವತಿಯು ತನ್ನ ಮನೆಯ ಬಾಗಿಲಿಗೆ ಹೋಗಲು ವೀರಕನು ಪಾರ್ವತಿಯನ್ನು ಸ್ತುತಿಸುವುದು. ಪಾರ್ವತಿಯು ಶಂಕರನೊಡನೆ ಸೇರುವುದು. ಕುಮಾರಸ್ವಾಮಿಯ ಉತ್ಪತ್ತಿಯ ರೀತಿಯ ವರ್ಣನೆ. ದೇವತೆಗಳು ಕುಮಾರಸ್ವಾಮಿಯನ್ನು ಸ್ತುತಿಸುವುದು ಕುಮಾರಸ್ವಾಮಿಯು ತಾರಕನನ್ನು ಕೊಂದುದು.
ನಾಲ್ವತ್ತೆರಡನೆಯ ಅಧ್ಯಾಯವು
ಹಿರಣ್ಯಕಶಿಪುವಿನ ವಧೆಯ ವಿವರಣೆ, ಬ್ರಹ್ಮನು ನೃಸಿಂಹನನ್ನು ಸ್ತುತಿಸುವುದು.
ನಾಲ್ವತ್ತಮೂರನೆಯ ಅಧ್ಯಾಯವು
ಅಂಧಕಾಸುರನ ಕಥೆ. ಶಂಕರನು ಸೂರ್ಯನನ್ನು ಸ್ತುತಿಸುವುದು. ಅಂಧಕನು ಶಂಕರನನ್ನು ಸ್ತುತಿಸುವುದು. ಅಂಧಕಾಸುರನನ್ನು ಶಂಕರನು ಗಣಗಳ ಗುಂಪಿನಲ್ಲಿ ಸ್ವೀಕರಿಸುವುದು. ಬ್ರಾಹ್ಮಣನ ಪ್ರಶಂಸೆ. ಒಳ್ಳೆಯ ಬ್ರಾಹ್ಮಣನ ಲಕ್ಷಣ. ಗಾಯತ್ರಿಯ ಮಹಿಮೆಯ ವರ್ಣನೆಯು. ಗಾಯತ್ರೀಜಪದ ವಿಧಾನ. ಗಾಯತ್ರೀಜಪದ ಫಲದ ವಿಷಯ.
ನಾಲ್ವತ್ತನಾಲ್ಕನೆಯ ಅಧ್ಯಾಯ
ಬ್ರಹ್ಮ ನಾರದರ ಸಂವಾದದಲ್ಲಿ ಅಧಮ ಬ್ರಾಹ್ಮಣನ ಲಕ್ಷಣವು. ಐದು ಬಗೆಯಾದ ಸ್ಥಾನಗಳ ವಿವರಣೆ. ಅಧಮನಾದ ಬ್ರಾಹ್ಮಣನನ್ನು ಕೊಂದರೂ ಬ್ರಹ್ಮಹತ್ಯೆಯು ಬರುವ ವಿಚಾರ. ಬ್ರಾಹ್ಮಣ್ಯವು ಹೋದರೂ ಅದನ್ನು ಮತ್ತೆ ಹೊಂದುವ ಬಗೆ. ಅದಕ್ಕೋಸ್ಕರ ಬ್ರಾಹ್ಮಣನ ಕಥೆಯನ್ನು ಹೇಳುವುದು ಗರುಡನ ಉತ್ಪತ್ತಿಯ ಕಥೆ. ಅನೇಕ ಬಗೆಯಾದ ಯವನರು ಹುಟ್ಟುವಿಕೆ. ಯವನರನ್ನು ಮುಟ್ಟಬಾರದೆಂದು ಹೇಳುವಿಕೆ. ಧರ್ಮವನ್ನು ಬಿಟ್ಟಿರುವ ಕಲಿಯುಗದಲ್ಲಿ ಹಣದಾಸೆಯಿಂದ ಯವನರ ಸ್ಪರ್ಶವನ್ನು ಮಾಡುತ್ತಾರೆಂದು ಭವಿಷ್ಯವನ್ನು ಹೇಳುವುದು ವಿಷ್ಣುವಿಗೆ ಗರುಡನು ತನ್ನ ದೇಹರೂಪವಾದ ವರದಾನವನ್ನು ಕೊಟ್ಟಿದುದು ಗರುಡನಿಗೆ ವಿಷ್ಣುವು ವರಗಳನ್ನು ಕೊಟ್ಟುದು. ತಾಯಿಯ ಅಪ್ಪಣೆಯಂತೆ ಗರುಡನು ಇಂದ್ರನನ್ನು ಜಯಿಸಿ ಸ್ವರ್ಗದಲ್ಲಿದ್ದ ಅಮೃತವನ್ನು ತರುವುದು. ಕದ್ರುವೆಂಬ ಬಲತಾಯಿಗೆ ತನ್ನ ತಾಯಿಯು ಅಮೃತವನ್ನು ಕೊಟ್ಟುದುದರಿಂದ ಅವಳ ದಾಸಿತನದ ಬಿಡುಗಡೆ. ಕದ್ರುವಿನ ಬಳಿಯಿಂದ ಇಂದ್ರನು ಅಮೃತವನ್ನು ಕದ್ದುಕೊಂಡು ಹೋಗುವುದು.
ನಾಲ್ವತ್ತೈದನೆಯ ಅಧ್ಯಾಯವು
ಮನೆಗೆ ಬೆಂಕಿ ಹಾಕಿದ, ವಿಷದಿಂದ ಇತರರನ್ನು ಕೊಂದ, ನೀಚನಾದ ಬ್ರಾಹ್ಮಣನನ್ನು ಕೊಂದರೆ ಪಾಪವಿಲ್ಲವೆಂದು ಹೇಳುವಿಕೆ, ಬ್ರಾಹ್ಮಣರಿಗೆ ಜೀವನಕ್ಕೆ ಉಪಾಯವಾದ ಉತ್ಪತ್ತಿಗಳನ್ನು ಹೇಳುವುದು. ಬ್ರಾಹ್ಮಣನು ತನ್ನ ವೃತ್ತಿಯಿಂದ ಜೀವಿಸಲಾಗದಾಗ ಕ್ಷತ್ರಿಯ ವೃತ್ತಿ ಮುಂತಾದುವನ್ನವಲಂಬಿಸಬಹುದು ಎಂಬ ವಿಷಯ. ತೂಕದಲ್ಲಿ ಸುಳ್ಳು ಹೇಳಿದರೆ ನರಕ ಬರುವ ವಿಷಯ. ಸತ್ಯದ ಉತ್ಕರ್ಷ ಆಚಾರವನ್ನು ಸಂಕ್ಷೇಪವಾಗಿ ವಿವರಿಸುವುದು. ಗೋವುಗಳ ಉತ್ಪತ್ತಿ. ಗೋವಿನ ಮಹಿಮೆ. ಗೋಪೂಜಾವಿಧಿಯ ವಿವರಣೆ. ಗೋವಿನ ದೇಹದಲ್ಲಿ ಎಲ್ಲೆಲ್ಲಿ ಯಾವ ಯಾವ ದೇವತೆಗಳಿರುವರೆಂಬ ವಿಷಯ. ಕಪಿಲೆಯೇ ಮೊದಲಾದ ಗೋವುಗಳ ದಾನದ ವಿಧಿಯ ವರ್ಣನೆ. ಗೋದಾನದ ಫಲ ನಿರೂಪಣೆ.
ನಾಲ್ವತ್ತಾರನೆಯ ಅಧ್ಯಾಯ
ಬ್ರಾಹ್ಮಣನು ತನಗೆ ತೇಜಸ್ಸು ಹೆಚ್ಚಲು ಬೆಳಗ್ಗಿನಿಂದ ಮಾಡತಕ್ಕ ನಿಯಮಗಳ ವಿವರಣೆ, ಸ್ವರ್ಗದಿಂದ ಮೃತ್ಯುಲೋಕವನ್ನೂ, ನರಕದಿಂದ ಮೃತ್ಯುಲೋಕವನ್ನೂ ಹೊಂದಿದವರ ಲಕ್ಷಣಗಳ ವಿವರಣೆ.