೧೯೪೦ ರಿಂದ ೧೯೪೭ ರವರೆಗೆ ಮೈಸೂರು ಸಂಸ್ಥಾನದ ಮಹಾರಾಜರಾಗಿ, ಆನಂತರ ಸ್ವಾತಂತ್ರ್ಯೋತ್ತರ ಕಾಲದಲ್ಲಿ ವಿಶಾಲ ಮೈಸೂರು ಹಾಗೂ ಮದರಾಸು ರಾಜ್ಯಗಳ ರಾಜ ಪ್ರಮುಖ ಮತ್ತು ರಾಜ್ಯಪಾಲರಾಗಿ ಸೇವೆಸಲ್ಲಿಸಿ ೧೯೭೪ರಲ್ಲಿ ದಿವಂಗತರಾದ ಶ್ರೀಜಯಚಾಮರಾಜ ಒಡೆಯರ್ ಅವರು ಸಾಹಿತ್ಯ ಸಂಗೀತ-ತತ್ತ್ವ ಶಾಸ್ತ್ರಗಳಲ್ಲಿ ಖ್ಯಾತಿವೆತ್ತ ವಿದ್ವಾಂಸರಾಗಿದ್ದರು. ಅವರಿಂದ ಕನ್ನಡ ಭಾಷೆಗೆ ಸಂದ ಸೇವೆಯಲ್ಲಿ ಪ್ರಮುಖವಾಗಿ ಉಲ್ಲೆಖನಾರ್ಹವಾದುದು ''ಶ್ರೀ ಜಯಚಾಮರಾಜೇಂದ್ರ ಗ್ರಂಥ ರತ್ನಮಾಲಾ'' ಎನ್ನಬಹುದು. ಭಾರತೀಯ ಸಂಸ್ಕೃತಿಗೆ ಆಧಾರವೆನ್ನಬಹುದಾದ ವೇದ, ಪುರಾಣ ಹಾಗೂ ಇತರ ಶಾಸ್ತ್ರ ಗ್ರಂಥಗಳು ಸಂಸ್ಕೃತದಲ್ಲಿರುವುದರಿಂದ ಸಾಮಾನ್ಯ ಜನತೆಯ ಪಾಲಿಗೆ ಅವು ಗಗನಕುಸುಮಗಳಂತಾಗಿದ್ದುದನ್ನು ಕಂಡು ಶ್ರೀ ಒಡೆಯರ್ ಅವರು ಆ ಗ್ರಂಥಗಳ ಮೂಲ ಮತ್ತು ಅವುಗಳ ಅನುವಾದಗಳು ಪೂರ್ಣವಾಗಿ ಕನ್ನಡ ಲಿಪಿಯಲ್ಲಿ, ಅದೂ ಸುಲಭ ಬೆಲೆಯಲ್ಲಿ ದೊರಕುವಂತಾಗಬೇಕೆಂಬ ಸದಾಶಯದಿಂದ ಈ ಗ್ರಂಥರತ್ನ ಮಾಲೆಯನ್ನು ಕನ್ನಡಿಗರಿಗೆ ದಯಪಾಲಿಸಿದರು. ಈ ರೀತಿಯೇ ಬೃಹತ್ತು-ಮಹತ್ತುಗಳನ್ನು ಹೊಂದಿರುವ ಗ್ರಂಥಮಾಲೆ ಪ್ರಾಯಶಃ ಭಾರತದ ಬೇರಾವ ಭಾಷೆಯಲ್ಲೂ ಬಂದಿಲ್ಲವೆನಿಸುತ್ತದೆ. ಗ್ರಂಥ ಮಾಲೆಯ ಸಂಪುಟಗಳ ಒಟ್ಟು ಸಂಖ್ಯೆ {೩೨೮}. ಪುಟಗಳ ಸಂಖ್ಯೆ ಲಕ್ಷಕ್ಕೂ ಹೆಚ್ಚು !
ಈ ಮಾಲೆಯಲ್ಲಿ ಅತ್ಯಂತ ಮುಖ್ಯವಾಗಿ ಕಾಣುವ ಗ್ರಂಥರತ್ನ ‘ಋಗ್ವೇದ’. ಇದರಲ್ಲಿ ಮೂಲ ಸಂಹಿತಾ ಪಾಠ ಮತ್ತು ಪದಪಾಠಗಳನ್ನು ಸ್ವರಸಹಿತವಾಗಿ ಕೊಡಲಾಗಿದೆ. ಅನಂತರ ಸಾಯಣ ಭಾಷ್ಯ (ಸಂಸ್ಕೃತ ಮೂಲ) ವನ್ನೂ ಮುದ್ರಿಸಲಾಗಿದೆ. ಇದರಿಂದ ಮೇಲೆ ಕನ್ನಡದಲ್ಲಿ ಪ್ರತಿಪದಾರ್ಥ-ಭಾವಾರ್ಥಗಳನ್ನು ಕೊಟ್ಟು, ಇಂಗ್ಷೀಷಿನಲ್ಲಿ ಮೂಲದ ಅನುವಾದವನ್ನೂ ಕೊಟ್ಟಿದೆ. ಇಷ್ಟಲ್ಲದೆ ವಿಶೇಷವಿಷಯಗಳು, ವ್ಯಾಕರಣ ಪ್ರಕ್ರಿಯೆ ಮುಂತಾದುವನ್ನು ಸರಳ ಕನ್ನಡದಲ್ಲಿ ವಿವರಿಸಲಾಗಿದೆ.
ಈ ರೀತಿಯಾಗಿ ಸರ್ವೊಪಕಾರವಾಗುವಂತೆ ಋಗ್ವೇದವನ್ನು ಅನುವಾದಿಸಿ, ಸಂಪಾದಿಸಿ ಮುದ್ರಿಸಲು ಜಗದ್ಗುರು ಶಿಲ್ಪಸಿದ್ಧಾಂತಿ ಶಿವಯೋಗಿ ಶ್ರೀ ಶ್ರೀ ಸಿದ್ಧಲಿಂಗಸ್ವಾಮಿಗಳ ಅಧ್ಯಕ್ಷತೆಯಲ್ಲಿ “ವೇದ ವಿಮರ್ಶನ ವಿದ್ವನ್ಮಂಡಲಿ” ಯನ್ನು ಶ್ರೀ ಮನ್ಮಹಾರಾಜರು ರಚಿಸಿ ಈ ಮಹಾತ್ಕಾರ್ಯವನ್ನು ಸಾಧ್ಯವಾಗುವಂತೆ ಮಾಡಿದರು. {೧೯೪೮}ರಲ್ಲಿ ಋಗ್ವೇದ ಸಂಹಿತೆಯ ಪ್ರಥಮ ಸಂಪುಟ ಪ್ರಕಟವಾಯಿತು. ಹತ್ತೊಂಬತ್ತನೆಯ ಶತಮಾನದಲ್ಲಿ ಮ್ಯಾಕ್ಸ್ಮುಲ್ಲರ್ ಮಹಾಶಯನ ಸಂಪಾದಕತ್ವದಲ್ಲಿ ಪ್ರಥಮ ಬಾರಿಗೆ ಸಾಯಣ ಭಾಷ್ಯ ಸಹಿತವಾಗಿ ಋಗ್ವೇದ ಪ್ರಕಟವಾದ ಮೇಲೆ ವೇದ ಸಾಹಿತ್ಯ ಪ್ರಪಂಚದಲ್ಲಿ ಆದ ಅದ್ಭುತ ಸಿದ್ಧಿ ಇದು ಎನ್ನಬಹುದು.
ವೇದಗಳ ಅನಂತರ ಪುರಾಣಗಳು ಸಂಸ್ಕೃತ ಸಾಹಿತ್ಯದಲ್ಲಿ ಪ್ರಾಮುಖ್ಯತೆ ಪಡೆದಿವೆ. ಹದಿನೆಂಟು ಪುರಾಣಗಳು, ಅನೇಕ ಉಪಪುರಾಣಗಳೂ ವ್ಯಾಸ ಕರ್ತೃಕವೆಂದು ಪ್ರಸಿದ್ಧವಾಗಿದೆ. ಮತ್ಸ್ಯ , ಕೂರ್ಮ, ವರಾಹ, ನರಸಿಂಹ, ನಾರದೀಯ, ವಾಯು, ವಾಮನ, ವಿಷ್ಣು, ಸಾಂಬ, ಸೌರ, ಕಾಳಿಕಾ, ಭವಿಷ್ಯ, ಶಿವ, ಲಿಂಗ, ಬ್ರಹ್ಮ, ಪದ್ಮ, ಸ್ಕಾಂದ, ವಿಷ್ಣುಧರ್ಮೊತ್ತರ, ಮಾರ್ಕಂಡೇಯ, ಬ್ರಹ್ಮವೈರ್ವತ, ಬ್ರಹ್ಮಾಂಡ, ಗಣೇಶ, ಆದಿ ಮತ್ತು ಕಲ್ಕಿ ಪುರಾಣಗಳು ಅನೇಕ ವಿದ್ವಾಂಸರಿಂದ ಅನುವಾದಗೊಂಡು ಈ ಮಾಲಿಕೆಯಲ್ಲಿ ಪ್ರಕಟವಾಗಿವೆ.
ಇವಲ್ಲದೆ ದೇವೀಭಾಗವತ, ಶಿವರಹಸ್ಯ, ಯೋಗವಾಸಿಷ್ಠ ಮೊದಲಾದ ಬೃಹದ್ ಗ್ರಂಥಗಳೂ, ಗೀತೆ--ಉಪನಿಷತ್ತು ಮತ್ತು ಬ್ರಹ್ಮಸೂತ್ರಗಳ ಭಾಷ್ಯಗಳೂ, ಅನೇಕ ಮಂತ್ರ ಶಾಸ್ತ್ರಗಳೂ ಈ ಗ್ರಂಥರತ್ನ ಮಾಲೆಯ ಪುಷ್ಪಗಳಾಗಿವೆ. ಒಟ್ಟಿನಲ್ಲಿ, ಜಯಚಾಮರಾಜೇಂದ್ರ ಗ್ರಂಥರತ್ನಮಾಲೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ, ಅದರ ಗೌರವವನ್ನು ವರ್ಧಿಸಿದೆ. ದಾತೃ ಶ್ರೀ ಜಯಚಾಮರಾಜ ಒಡೆಯರ್ ಅವರಿಗೂ, ವಿದ್ವಾನ್ಮಂಡಲಿಯ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮಿಗಳಿಗೂ, ಅನುವಾದ-ಸಂಪಾದನ-ಮುದ್ರಣಾದಿಗಳನ್ನು ಮಾಡಿದ ಆಸ್ಥಾನ ವಿದ್ವಾನ್ ಶ್ರೀ ಎಚ್. ಪಿ. ವೆಂಕಟರಾವ್ ಮುಂತಾದ ವಿದ್ವಾಂಸರಿಗೂ ಕನ್ನಡ ನಾಡು ಚಿರಋಣಿಯಾಗಿರುವುದರಲ್ಲಿ ಸಂಶಯವಿಲ್ಲ.